ಪದ್ಯ ೮೬: ಪಾಂಡವರ ಕೀರ್ತಿ ಯಾರನ್ನು ಅಣಕಿಸುತ್ತದೆ ಎಂದು ವಿದುರನು ಹೇಳಿದನು?

ನೋಡುವುದು ಬಾಂಧವರ ನಿಮ್ಮಡಿ
ಮಾಡುವುದು ಸೌಖ್ಯವನು ಭಯದಲಿ
ಬಾಡುವುದಲೇ ರಿಪುನೃಪಾಲರ ಸಮರ ಜಯಬೀಜ
ಜೋಡಿಸುವುದಗಲದಲಿ ಕೀರ್ತಿಯ
ಝಾಡಿಯನು ನಿಮ್ಮಭ್ಯುದಯ ಬಳಿ
ಕೇಡಿಸುವುದೈ ದುಂದುಮಾರ ದಿಲೀಪ ದಶರಥರ (ಸಭಾ ಪರ್ವ, ೧೩ ಸಂಧಿ, ೮೬ ಪದ್ಯ)

ತಾತ್ಪರ್ಯ:
ಬಾಂಧವರನ್ನು ನೋಡಿ, ಸೌಖ್ಯವನ್ನು ಇಮ್ಮಡಿ ಹೆಚ್ಚಿಸಿದರೆ ಶತ್ರುರಾಜರ ಯುದ್ಧಜಯದ ಬೀಜ ಬಾಡಿಹೋಗುತ್ತದೆ. ಕೀರ್ತಿಯನ್ನು ಎಲ್ಲೆಡೆಗೆ ಹಬ್ಬಿಸಬೇಕು. ಆನಂತರ ನಿಮ್ಮ ಅಭ್ಯುದಯವು ದುಂದುಮಾರ, ದಿಲೀಪ, ದಶರಥರ ಕೀರ್ತಿಯನ್ನು ಅಣಕಿಸುತ್ತದೆ ಎಂದು ವಿದುರನು ಹೇಳಿದನು.

ಅರ್ಥ:
ನೋಡು: ವೀಕ್ಷಿಸು; ಬಾಂಧವ: ಸಂಬಂಧಿಕರು; ಇಮ್ಮಡಿ: ಎರಡುಪಟ್ಟು; ಮಾಡು: ನಿರ್ವಹಿಸು; ಸೌಖ್ಯ: ನೆಮ್ಮದಿ, ಸಂತಸ; ಭಯ: ಅಂಜಿಕೆ; ಬಾಡು: ಒಣಗು, ಮುರುಟು; ರಿಪು: ವೈರಿ; ನೃಪಾಲ: ರಾಜ; ಸಮರ: ಯುದ್ಧ; ಜಯ: ಗೆಲುವು; ಬೀಜ: ಮೂಲ; ಜೋಡಿಸು: ಕೂಡಿಸು; ಅಗಲ: ವಿಸ್ತಾರ; ಕೀರ್ತಿ: ಯಶಸ್ಸು; ಝಾಡಿ: ಕಾಂತಿ; ಅಭ್ಯುದಯ: ಏಳಿಗೆ; ಬಳಿಕ: ನಂತರ; ಏಡಿಸು: ನಿಂದಿಸು, ಅವಹೇಳನ ಮಾಡು;

ಪದವಿಂಗಡಣೆ:
ನೋಡುವುದು +ಬಾಂಧವರ +ನಿಮ್ಮಡಿ
ಮಾಡುವುದು +ಸೌಖ್ಯವನು +ಭಯದಲಿ
ಬಾಡುವುದಲೇ +ರಿಪು+ನೃಪಾಲರ+ ಸಮರ+ ಜಯಬೀಜ
ಜೋಡಿಸುವುದ್+ಅಗಲದಲಿ +ಕೀರ್ತಿಯ
ಝಾಡಿಯನು +ನಿಮ್ಮ್+ಅಭ್ಯುದಯ +ಬಳಿಕ್
ಏಡಿಸುವುದೈ +ದುಂದುಮಾರ +ದಿಲೀಪ +ದಶರಥರ

ಅಚ್ಚರಿ:
(೧) ವೈರಿಗಳು ಹೆದರುತ್ತಾರೆ ಎಂದು ಹೇಳುವ ಪರಿ – ಭಯದಲಿ ಬಾಡುವುದಲೇ ರಿಪುನೃಪಾಲರ ಸಮರ ಜಯಬೀಜ