ನೋಡುವುದು ಬಾಂಧವರ ನಿಮ್ಮಡಿ
ಮಾಡುವುದು ಸೌಖ್ಯವನು ಭಯದಲಿ
ಬಾಡುವುದಲೇ ರಿಪುನೃಪಾಲರ ಸಮರ ಜಯಬೀಜ
ಜೋಡಿಸುವುದಗಲದಲಿ ಕೀರ್ತಿಯ
ಝಾಡಿಯನು ನಿಮ್ಮಭ್ಯುದಯ ಬಳಿ
ಕೇಡಿಸುವುದೈ ದುಂದುಮಾರ ದಿಲೀಪ ದಶರಥರ (ಸಭಾ ಪರ್ವ, ೧೩ ಸಂಧಿ, ೮೬ ಪದ್ಯ)
ತಾತ್ಪರ್ಯ:
ಬಾಂಧವರನ್ನು ನೋಡಿ, ಸೌಖ್ಯವನ್ನು ಇಮ್ಮಡಿ ಹೆಚ್ಚಿಸಿದರೆ ಶತ್ರುರಾಜರ ಯುದ್ಧಜಯದ ಬೀಜ ಬಾಡಿಹೋಗುತ್ತದೆ. ಕೀರ್ತಿಯನ್ನು ಎಲ್ಲೆಡೆಗೆ ಹಬ್ಬಿಸಬೇಕು. ಆನಂತರ ನಿಮ್ಮ ಅಭ್ಯುದಯವು ದುಂದುಮಾರ, ದಿಲೀಪ, ದಶರಥರ ಕೀರ್ತಿಯನ್ನು ಅಣಕಿಸುತ್ತದೆ ಎಂದು ವಿದುರನು ಹೇಳಿದನು.
ಅರ್ಥ:
ನೋಡು: ವೀಕ್ಷಿಸು; ಬಾಂಧವ: ಸಂಬಂಧಿಕರು; ಇಮ್ಮಡಿ: ಎರಡುಪಟ್ಟು; ಮಾಡು: ನಿರ್ವಹಿಸು; ಸೌಖ್ಯ: ನೆಮ್ಮದಿ, ಸಂತಸ; ಭಯ: ಅಂಜಿಕೆ; ಬಾಡು: ಒಣಗು, ಮುರುಟು; ರಿಪು: ವೈರಿ; ನೃಪಾಲ: ರಾಜ; ಸಮರ: ಯುದ್ಧ; ಜಯ: ಗೆಲುವು; ಬೀಜ: ಮೂಲ; ಜೋಡಿಸು: ಕೂಡಿಸು; ಅಗಲ: ವಿಸ್ತಾರ; ಕೀರ್ತಿ: ಯಶಸ್ಸು; ಝಾಡಿ: ಕಾಂತಿ; ಅಭ್ಯುದಯ: ಏಳಿಗೆ; ಬಳಿಕ: ನಂತರ; ಏಡಿಸು: ನಿಂದಿಸು, ಅವಹೇಳನ ಮಾಡು;
ಪದವಿಂಗಡಣೆ:
ನೋಡುವುದು +ಬಾಂಧವರ +ನಿಮ್ಮಡಿ
ಮಾಡುವುದು +ಸೌಖ್ಯವನು +ಭಯದಲಿ
ಬಾಡುವುದಲೇ +ರಿಪು+ನೃಪಾಲರ+ ಸಮರ+ ಜಯಬೀಜ
ಜೋಡಿಸುವುದ್+ಅಗಲದಲಿ +ಕೀರ್ತಿಯ
ಝಾಡಿಯನು +ನಿಮ್ಮ್+ಅಭ್ಯುದಯ +ಬಳಿಕ್
ಏಡಿಸುವುದೈ +ದುಂದುಮಾರ +ದಿಲೀಪ +ದಶರಥರ
ಅಚ್ಚರಿ:
(೧) ವೈರಿಗಳು ಹೆದರುತ್ತಾರೆ ಎಂದು ಹೇಳುವ ಪರಿ – ಭಯದಲಿ ಬಾಡುವುದಲೇ ರಿಪುನೃಪಾಲರ ಸಮರ ಜಯಬೀಜ