ಹುಲಿಯ ಮುರಿದೊತ್ತಿದೊಡೆ ಪಶುಸಂ
ಕುಲಕೆ ಸಂಕಟವೇನು ವಾಯಸ
ಕುಲವ ಕೈಮಾಡಿದರೆ ಕೋಟಲೆಯೇನು ಕೋಗಿಲೆಗೆ
ಖಳರ ಕೊಪ್ಪರಿಸಿದರೆ ಸುಜನರ
ತಲೆಗೆ ವೇದನೆಯೇನು ಕೌರವ
ಕುಲವನದ್ದಿದರೇನು ಜಠರದ ಶೂಲೆ ನಿನಗೆಂದ (ಅರಣ್ಯ ಪರ್ವ, ೨೧ ಸಂಧಿ, ೩೧ ಪದ್ಯ)
ತಾತ್ಪರ್ಯ:
ಹುಲಿಯನ್ನು ಸಂಹರಿಸಿದರೆ ಗೋವುಗಳಿಗೇಕೆ ಸಂಕಟವಾಗಬೇಕು? ಕಾಗೆಗಳನ್ನು ಹೊಡೆದರೆ ಕೋಗಿಲೆಗೇಕೆ ತೊಂದರೆಯಾಗಬೇಕು? ದುಷ್ಟರನ್ನು ನಿಗ್ರಹಿಸಿದರೆ ಸಜ್ಜನರಿಗೇಕೆ ತಲೆನೋವು ಬರಬೇಕು? ಕೌರವ ಕುಲವನ್ನು ನಿಗ್ರಹಿಸಿದರೆ ನಿನಗೇಕೆ ಹೊಟ್ಟೆ ಬೇನೆ? ಎಂದು ಚಿತ್ರಸೇನನು ಅರ್ಜುನನನ್ನು ಕೇಳಿದನು.
ಅರ್ಥ:
ಹುಲಿ: ವ್ಯಾಘ್ರ; ಮುರಿ: ಸೀಳು; ಒತ್ತು: ಆಕ್ರಮಿಸು, ಮುತ್ತು; ಪಶು: ಹಸು, ಗೋವು; ಸಂಕುಲ: ವಂಶ; ಸಂಕಟ: ತೊಂದರೆ; ವಾಯಸ: ಕಾಗೆ; ಕುಲ: ವಂಶ; ಕೈಮಾಡು: ಹೊಡೆ; ಕೋಟಲೆ: ತೊಂದರೆ; ಕೋಗಿಲೆ: ಪಿಕ; ಖಳ: ದುಷ್ಟ; ಕೊಪ್ಪರಿಸು: ತಿವಿ, ಹೊಡೆ; ಸುಜನ: ಒಳ್ಳೆಯ ಜನ; ತಲೆ: ಶಿರ; ವೇದನೆ: ನೋವು; ಜಠರ: ಹೊಟ್ಟೆ; ಶೂಲೆ: ನೋವು;
ಪದವಿಂಗಡಣೆ:
ಹುಲಿಯ +ಮುರಿದೊತ್ತಿದೊಡೆ ಪಶುಸಂ
ಕುಲಕೆ ಸಂಕಟವೇನು ವಾಯಸ
ಕುಲವ ಕೈಮಾಡಿದರೆ ಕೋಟಲೆಯೇನು ಕೋಗಿಲೆಗೆ
ಖಳರ ಕೊಪ್ಪರಿಸಿದರೆ ಸುಜನರ
ತಲೆಗೆ ವೇದನೆಯೇನು ಕೌರವ
ಕುಲವನದ್ದಿದರೇನು ಜಠರದ ಶೂಲೆ ನಿನಗೆಂದ
ಅಚ್ಚರಿ:
(೧) ಉಪಮಾನದ ಪ್ರಯೋಗ – ಹುಲಿಯ ಮುರಿದೊತ್ತಿದೊಡೆ ಪಶುಸಂ
ಕುಲಕೆ ಸಂಕಟವೇನು; ವಾಯಸಕುಲವ ಕೈಮಾಡಿದರೆ ಕೋಟಲೆಯೇನು ಕೋಗಿಲೆಗೆ