ಪದ್ಯ ೨: ಸರೋವರದಲ್ಲಿ ಯಾವ ರೀತಿ ತಳಮಳವಾಯಿತು?

ತಳಮಳಲ ಮೊಗೆಮೊಗೆದು ಕದಡಿತು
ಕೊಳನ ಜಲಚರನಿಚಯವೀ ಬೊ
ಬ್ಬುಳಿಕೆ ಮಿಗಲೊಬ್ಬುಳಿಕೆ ನೆಗೆದವು ವಿಗತವೈರದಲಿ
ದಳವ ಬಿಗಿದಂಬುಜದೊಳಡಗಿದ
ವಳಿನಿಕರ ಹಾರಿದವು ಹಂಸಾ
ವಳಿ ಜವಾಯಿಲತನದಿ ಜಗುಳ್ದವು ಜಕ್ಕವಕ್ಕಿಗಳು (ಗದಾ ಪರ್ವ, ೫ ಸಂಧಿ, ೨ ಪದ್ಯ)

ತಾತ್ಪರ್ಯ:
ಆ ಮಹಾ ಶಬ್ದಕ್ಕೆ ಸರೋವರದ ತಲದ ಮಳಲು ಮೇಲೆದ್ದು ನೀರು ಕದಡಿತು. ಜಲಚರಕಗಳು ವೈರವನ್ನು ಮರೆತು ಒಟ್ಟಾಗಿ ಮೇಲಕ್ಕೆ ನೆಗೆದವು. ಕಮಲಪುಷ್ಪಗಳಲ್ಲಿದ್ದ ದುಂಬಿಗಳು ಬೆದರಿ ಅಲ್ಲಿಯೇ ಅಡಗಿಕೊಂಡವು. ಹಂಸಗಳು ಹಾರಿಹೋದವು. ಚಕ್ರವಾಕ ಪಕ್ಷಿಗಳು ಜಾರಿಕೊಂಡು ಆಚೆಗೆ ಹೋದವು.

ಅರ್ಥ:
ತಳಮಳ: ಗೊಂದಲ; ಮೊಗೆ: ಹೊರಹಾಕು; ಕದಡು: ಬಗ್ಗಡ, ರಾಡಿ, ಕಲಕಿದ ದ್ರವ; ಕೊಳ: ಸರೋವರ; ಜಲಚರ: ನೀರಿನಲ್ಲಿ ವಾಸಿಸುವ ಪ್ರಾಣಿ; ನಿಚಯ: ಗುಂಪು; ಬೊಬ್ಬುಳಿ: ನೀರುಗುಳ್ಳೆ; ಉಬ್ಬು: ಅತಿಶಯ, ಹೆಚ್ಚಾಗು; ನೆಗೆ: ಜಿಗಿ; ವಿಗತ: ಮರೆತ; ವೈರ: ಶತ್ರು, ಹಗೆತನ; ದಳ: ಸೈನ್ಯ; ಬಿಗಿ: ಗಟ್ಟಿ,ದೃಢ; ಅಂಬುಜ: ತಾವರೆ; ಅಡಗು: ಬಚ್ಚಿಟ್ಟುಕೊಳ್ಳು; ಅಳಿ: ದುಂಬಿ; ನಿಕರ: ಗುಂಪು; ಹಾರು: ಲಂಘಿಸು; ಹಂಸ: ಮರಾಲ; ಜವಾಯಿಲತನ: ವೇಗ, ಕ್ಷಿಪ್ರತೆ; ಜಗುಳು: ಜಾರು, ಸಡಿಲವಾಗು; ಜಕ್ಕವಕ್ಕಿ: ಚಕ್ರವಾಕ ಪಕ್ಷಿ; ಆವಳಿ: ಗುಂಪು;

ಪದವಿಂಗಡಣೆ:
ತಳಮಳಲ +ಮೊಗೆಮೊಗೆದು +ಕದಡಿತು
ಕೊಳನ +ಜಲಚರ+ನಿಚಯವ್+ಈ+ ಬೊ
ಬ್ಬುಳಿಕೆ +ಮಿಗಲೊಬ್ಬುಳಿಕೆ+ ನೆಗೆದವು+ ವಿಗತ+ ವೈರದಲಿ
ದಳವ +ಬಿಗಿದ್+ಅಂಬುಜದೊಳ್+ಅಡಗಿದವ್
ಅಳಿ+ನಿಕರ +ಹಾರಿದವು +ಹಂಸಾ
ವಳಿ +ಜವಾಯಿಲತನದಿ +ಜಗುಳ್ದವು +ಜಕ್ಕವಕ್ಕಿಗಳು

ಅಚ್ಚರಿ:
(೧) ನಿಕರ, ನಿಚಯ, ಆವಳಿ – ಸಮಾನಾರ್ಥಕ ಪದ
(೨) ಜ ಕಾರದ ತ್ರಿವಳಿ ಪದ – ಜವಾಯಿಲತನದಿ ಜಗುಳ್ದವು ಜಕ್ಕವಕ್ಕಿಗಳು

ಪದ್ಯ ೧೫: ಜಕ್ಕವಕ್ಕಿಗಳೇಕೆ ಮರುಗುತಿರ್ದವು?

ನಳಿನದಳದೊಳಗಡಗಿದವು ನೈ
ದಿಲುಗಳಲಿ ತನಿ ಮೊರೆವ ತುಂಬಿಯ
ಕಳರವಕೆ ಬೆಚ್ಚಿದವು ಹೊಕ್ಕವು ಬಿಗಿದು ತಿಳಿಗೊಳನ
ಝಳಕೆ ಸೈರಿಸದೆಳಲತೆಯ ನೆಳ
ಲೊಳಗೆ ನಿಂದವು ಬೇಗೆ ಬಲುಹಿಂ
ದಳುಕಿ ಮಮ್ಮಲು ಮರುಗುತಿರ್ದವು ಜಕ್ಕವಕ್ಕಿಗಳು (ದ್ರೋಣ ಪರ್ವ, ೧೭ ಸಂಧಿ, ೧೫ ಪದ್ಯ)

ತಾತ್ಪರ್ಯ:
ಚಕ್ರವಾಕ ಪಕ್ಷಿಗಳು ತಾವರೆಯಲ್ಲಿ ಅಡಗಿ, ನೈದಿಲೆಯಲ್ಲಿ ಝೇಂಕರಿಸುವ ದುಂಬಿಗಳ ಸದ್ದನ್ನು ಕೇಳಿ ಬೆಚ್ಚಿದವು. ಬೆಳದಿಂಗಳ ಝಳವನ್ನು ಸೈರಿಸಲಾರದೆ ಎಳೆ ಬಳ್ಳಿಗಳ ನೆರಳಿನಲ್ಲಿ ನಿಂತು ತಾಪವನ್ನು ತಡೆಯಲಾರದೆ ಮಮ್ಮಲ ಮರುಗಿದವು.

ಅರ್ಥ:
ನಳಿನ: ಕಮಲ; ದಳ: ಎಲೆ, ರೇಕು, ಎಸಳು; ಅಡಗು: ಬಚ್ಚಿಟ್ಟುಕೊಳ್ಳು; ನೈದಿಲೆ: ಕುಮುದ; ತನಿ: ಚೆನ್ನಾಗಿ ಬೆಳೆದುದು; ಮೊರೆ: ಧ್ವನಿ ಮಾಡು, ಝೇಂಕರಿಸು; ತುಂಬಿ: ದುಂಬಿ, ಭ್ರಮರ; ಕಳರವ: ಮಧುರ ಧ್ವನಿ; ಬೆಚ್ಚು: ಭಯ, ಹೆದರಿಕೆ; ಹೊಕ್ಕು: ಸೇರು; ಬಗಿ: ಸೀಳುವಿಕೆ; ಕೊಳ: ನೀರಿನ ಹೊಂಡ, ಸರಸಿ; ಝಳ: ಕಾಂತಿ; ಸೈರಿಸು: ತಾಳು, ಸಹಿಸು; ಎಳೆ: ಚಿಕ್ಕದಾದ; ಲತೆ: ಬಳ್ಳಿ; ನೆಳಲು: ನೆರಳು; ನಿಂದವು: ನಿಲ್ಲು; ಬೇಗೆ: ಬೆಂಕಿ, ಕಿಚ್ಚು; ಬಲು: ಬಹಳ, ಹೆಚ್ಚು; ಅಳುಕು: ಹೆದರು; ಮರುಗು: ತಳಮಳ, ಸಂಕಟ; ಜಕ್ಕವಕ್ಕಿ: ಚಾತಕ ಪಕ್ಷಿ;

ಪದವಿಂಗಡಣೆ:
ನಳಿನ+ದಳದೊಳಗ್+ಅಡಗಿದವು +ನೈ
ದಿಲುಗಳಲಿ +ತನಿ +ಮೊರೆವ +ತುಂಬಿಯ
ಕಳರವಕೆ+ ಬೆಚ್ಚಿದವು +ಹೊಕ್ಕವು +ಬಿಗಿದು +ತಿಳಿ+ಕೊಳನ
ಝಳಕೆ +ಸೈರಿಸದ್+ಎಳಲತೆಯ +ನೆಳ
ಲೊಳಗೆ +ನಿಂದವು +ಬೇಗೆ +ಬಲುಹಿಂದ್
ಅಳುಕಿ +ಮಮ್ಮಲು +ಮರುಗುತಿರ್ದವು +ಜಕ್ಕವಕ್ಕಿಗಳು

ಅಚ್ಚರಿ:
(೧)

ಪದ್ಯ ೪೩: ಸೂರ್ಯೋದಯವು ಹೇಗೆ ಕಂಡಿತು?

ಜಗವರಾಜಕವಾಯ್ತು ಕುಮುದಾ
ಳಿಗಳ ಬಾಗಿಲು ಹೂಡಿದವು ಸೂ
ರೆಗರು ಕವಿದುದು ತುಂಬಿಗಳು ಸಿರಿವಂತರರಮನೆಯ
ಉಗಿದವಂಬರವನು ಮಯೂಖಾ
ಳಿಗಳು ಭುವನದ ಜನದ ಕಂಗಳ
ತಗಹು ತೆಗೆದುದು ಸೆರೆಯ ಬಿಟ್ಟರು ಜಕ್ಕವಕ್ಕಿಗಳ (ದ್ರೋಣ ಪರ್ವ, ೧ ಸಂಧಿ, ೪೩ ಪದ್ಯ)

ತಾತ್ಪರ್ಯ:
ರಾತ್ರಿಯಲ್ಲಿ ಚಂದ್ರನು ರಾಜ್ಯಭಾರ ಮಾಡುತ್ತಿದ್ದನು. ಅವನು ಹೋಗಲು ಅರಾಜಕತೆಯುಂಟಾಯಿತು. ಕುಮುದಗಳು ಬಾಗಿಲುಗಳು ಮುಚ್ಚಿದವು. ದುಂಬಿಗಳು ಮಕರಂದದ ಸಿರಿವಂತರಾದ ಕಮಲಗಳ ಅರಮನೆಗಳನ್ನು ಮುತ್ತಿದವು. ಆಕಾಶವನ್ನು ಸೂರ್ಯರಶ್ಮಿಗಳು ತುಂಬಿದವು. ಜನರ ಕಣ್ಣುಗಳನ್ನು ಮುಚ್ಚಿದ್ದ ರೆಪ್ಪೆಗಳು ತೆರೆದವು. ಚಕ್ರವಾಕ ಪಕ್ಷಿಗಳ ಸೆರೆಯನ್ನು ಬಿಡಿಸಿದರು.

ಅರ್ಥ:
ಜಗ: ಪ್ರಪಂಚ; ಅರಾಜಕ: ಅವ್ಯವಸ್ಥೆ; ಕುಮುದ: ಬಿಳಿಯ ನೈದಿಲೆ, ನೈದಿಲೆ; ಆಳಿ: ಸಮೂಹ; ಬಾಗಿಲು: ದ್ವಾರ; ಹೂಡು: ಅಣಿಗೊಳಿಸು; ಸೂರು: ಧ್ವನಿ, ಉಲಿ, ಸ್ವರ; ಕವಿ: ಆವರಿಸು; ದುಂಬಿ: ಭ್ರಮರ; ಸಿರಿ: ಸಂಪತ್ತು; ಅರಮನೆ: ರಾಜರ ಆಲಯ; ಉಗಿ: ಹೊರಹಾಕು; ಅಂಬರ: ಆಗಸ; ಮಯೂಖ: ಕಿರಣ, ರಶ್ಮಿ; ಆಳಿ: ಗುಂಪು; ಭುವನ: ಭೂಮಿ; ಜನ: ಮನುಷ್ಯ; ಕಂಗಳು: ಕಣ್ಣು; ತಗಹು: ಅಡ್ಡಿ, ತಡೆ; ತೆಗೆ: ಹೊರಹಾಕು; ಸೆರೆ: ಬಂಧನ; ಜಕ್ಕವಕ್ಕಿ: ಚಕ್ರವಾಕ ಪಕ್ಷಿ;

ಪದವಿಂಗಡಣೆ:
ಜಗವ್+ಅರಾಜಕವಾಯ್ತು+ ಕುಮುದಾ
ಳಿಗಳ +ಬಾಗಿಲು +ಹೂಡಿದವು +ಸೂ
ರೆಗರು+ ಕವಿದುದು +ತುಂಬಿಗಳು +ಸಿರಿವಂತರ್+ಅರಮನೆಯ
ಉಗಿದವ್+ಅಂಬರವನು +ಮಯೂಖಾ
ಳಿಗಳು +ಭುವನದ +ಜನದ+ ಕಂಗಳ
ತಗಹು+ ತೆಗೆದುದು +ಸೆರೆಯ +ಬಿಟ್ಟರು +ಜಕ್ಕವಕ್ಕಿಗಳ

ಅಚ್ಚರಿ:
(೧) ಸೂರ್ಯೋದಯವನ್ನು ಅತ್ಯಂತ ಸೃಜನಾತ್ಮಕತೆಯಲ್ಲಿ ವರ್ಣಿಸಿರುವುದು

ಪದ್ಯ ೨೮: ಸೂರ್ಯನು ಏನು ನೋಡಲು ಉದಯಿಸಿದನು?

ಮಗನೊಡನೆ ಮೂದಲಿಸಿ ಭೀಷ್ಮನು
ಹೊಗುವ ಗಡ ಪರಸೇನೆಯನು ಕಾ
ಳೆಗವ ನೋಡುವೆನೆಂಬವೊಲು ತಲೆದೋರಿದನು ದಿನಪ
ನಗೆಯಡಗಿ ನಾಚಿದವು ಕುಮುದಾ
ಳಿಗಳು ಮುಂಗಾಣಿಕೆಯ ಹರುಷದೊ
ಳಗಿದು ವಿರಹವ ಬೀಳುಕೊಟ್ಟವು ಜಕ್ಕವಕ್ಕಿಗಳು (ಭೀಷ್ಮ ಪರ್ವ, ೧ ಸಂಧಿ, ೨೮ ಪದ್ಯ)

ತಾತ್ಪರ್ಯ:
ಸೂರ್ಯನು ತನ್ನ ಮಗ ಕರ್ಣನೊಡನೆ ಮೂದಲೆಯ ವಾಗ್ವಾದವನ್ನು ಮಾಡಿ ಈ ದಿನ ಭೀಷ್ಮನು ಪರ ಸೈನ್ಯಕ್ಕೆ ನುಗ್ಗುತ್ತಾನೆ, ಈ ಯುದ್ಧವನ್ನು ನೋಡುತ್ತೇನೆ ಎಂದು ಹೇಳುವಂತೆ ಸೂರ್ಯನು ಉದಯಿಸಿದನು. ಕನ್ನೈದಿಲೆಗಳು ನಾಚಿ ಮುಚ್ಚಿಕೊಂಡವು, ಚಕ್ರವಾಕ ಪಕ್ಷಿಗಳ ವಿರಹ ಕೊನೆಗೊಂಡಿತು.

ಅರ್ಥ:
ಮಗ: ಸುತ; ಮೂದಲಿಸು: ಹಂಗಿಸು; ಹೊಗು:ಪ್ರವೇಶಿಸು; ಗಡ: ಅಲ್ಲವೆ; ಪರಸೇನೆ: ಶತ್ರುಸೈನ್ಯ; ಕಾಳೆಗ: ಯುದ್ಧ; ನೋಡು: ವೀಕ್ಷಿಸು; ತಲೆದೋರು: ಕಾಣಿಸಿಕೊ; ದಿನಪ: ಸೂರ್ಯ; ನಗೆ: ಸಂತಸ; ಅಡಗು: ಕಡಿಮೆಯಾಗು; ನಾಚು: ಅವಮಾನ ಹೊಂದು; ಕುಮುದ: ನೈದಿಲೆ; ಆಳಿ: ಗುಂಪು; ಮುಂಗಾಣಿಕೆ: ಮುಂದಾಗುವುದನ್ನು ತಿಳಿಯುವಿಕೆ; ಹರುಷ: ಸಂತಸ; ಅಗಿ: ಅಲುಗಾಡು, ಆವರಿಸು; ವಿರಹ:ಅಗಲಿಕೆ, ವಿಯೋಗ; ಬೀಳುಕೊಡು: ತೆರಳು; ಜಕ್ಕವಕ್ಕಿ: ಚಕ್ರವಾಕ ಪಕ್ಷಿಗಳು;

ಪದವಿಂಗಡಣೆ:
ಮಗನೊಡನೆ +ಮೂದಲಿಸಿ +ಭೀಷ್ಮನು
ಹೊಗುವ +ಗಡ +ಪರಸೇನೆಯನು +ಕಾ
ಳೆಗವ+ ನೋಡುವೆನೆಂಬವೊಲು+ ತಲೆದೋರಿದನು +ದಿನಪ
ನಗೆಯಡಗಿ +ನಾಚಿದವು+ ಕುಮುದಾ
ಳಿಗಳು+ ಮುಂಗಾಣಿಕೆಯ +ಹರುಷದೊಳ್
ಅಗಿದು +ವಿರಹವ +ಬೀಳುಕೊಟ್ಟವು +ಜಕ್ಕವಕ್ಕಿಗಳು

ಅಚ್ಚರಿ:
(೧) ಸುರ್ಯೋದಯವನ್ನು ವಿವರಿಸುವ ಪರಿ – ನಗೆಯಡಗಿ ನಾಚಿದವು ಕುಮುದಾಳಿಗಳು ಮುಂಗಾಣಿಕೆಯ ಹರುಷದೊಳಗಿದು ವಿರಹವ ಬೀಳುಕೊಟ್ಟವು ಜಕ್ಕವಕ್ಕಿಗಳು

ಪದ್ಯ ೬೭: ಸಂಜೆಯಾದುದನ್ನು ಹೇಗೆ ವಿವರಿಸಲಾಗಿದೆ?

ಎಸಳುಮೊನೆ ಮೇಲಾಗಿ ತಾವರೆ
ಮುಸುಕುತಿದೆ ನೈದಿಲಿನ ನೆತ್ತಿಯ
ಬೆಸುಗೆ ಬಿಡುತಿದೆ ಜಕ್ಕವಕ್ಕಿಯ ತೆಕ್ಕೆ ಸಡಿಲುತಿದೆ
ದೆಸೆದೆಸೆಯ ತಾಣಾಂತರದ ಹೊಂ
ಬಿಸಿಲು ಬೀತುದು ಜೀಯ ಬಿನ್ನಹ
ವಸುಧೆ ತಂಪೇರಿತ್ತು ಬಿಜಯಂಗೈಯಬೇಕೆಂದ (ವಿರಾಟ ಪರ್ವ, ೧೧ ಸಂಧಿ, ೬೭ ಪದ್ಯ)

ತಾತ್ಪರ್ಯ:
ತಾವರೆಯ ದಳಗಲ ಮೇಲುಭಾಗಗಳು ಮುಚ್ಚುತ್ತಿವೆ, ಕನ್ನೈದಿಲೆಯ ನೆತ್ತಿಯು ಅರಳುತ್ತಿದೆ, ಚಕ್ರವಾಕ ಪಕ್ಷಿಗಳ ಆಲಿಂಗನವು ಸಡಿಲುತ್ತಿದೆ, ಎಲ್ಲೆಡೆಯಿದ್ದ ಹೊಂಬಿಸಿಲು ಮೆಲ್ಲಗೆ ಮಾಯವಾಗುತ್ತಿದೆ, ನೀವಿನ್ನು ದಯಮಾಡಿಸಿ ಎಂದು ಧರ್ಮಜನು ಕೃಷ್ಣನಿಗೆ ಹೇಳಿದನು.

ಅರ್ಥ:
ಎಸಳು: ಹೂವಿನ ದಳ; ಮೊನೆ: ಮುಖ; ತಾವರೆ: ಕಮಲ; ಮುಸುಕು: ಹೊದಿಕೆ; ನೆತ್ತಿ: ಮೇಲ್ಭಾಗ, ಶಿರ; ಬೆಸುಗೆ: ಪ್ರೀತಿ; ಬಿಡು: ತೊರೆ; ಜಕ್ಕವಕ್ಕಿ: ಚಕ್ರ ವಾಕ; ತೆಕ್ಕೆ: ಅಪ್ಪುಗೆ, ಆಲಿಂಗನ; ಸಡಿಲು: ಬಿಗಿಯಿಲ್ಲದಿರುವುದು; ದೆಸೆ: ದಿಕ್ಕು; ತಾಣ: ನೆಲೆ, ಬೀಡು; ಹೊಂಬಿಸಿಲು: ಚಿನ್ನದಂತಹ ಸೂರ್ಯನ ಕಿರಣ; ಬೀತು: ಕಳೆದು; ಜೀಯ: ಒಡೆಯ; ಬಿನ್ನಹ: ಕೋರಿಕೆ; ವಸುಧೆ: ಭೂಮಿ; ತಂಪು: ತಣಿವು, ಶೈತ್ಯ; ಬಿಜಯಂಗೈ: ದಯಮಾಡು;

ಪದವಿಂಗಡಣೆ:
ಎಸಳು+ಮೊನೆ+ ಮೇಲಾಗಿ +ತಾವರೆ
ಮುಸುಕುತಿದೆ+ ನೈದಿಲಿನ +ನೆತ್ತಿಯ
ಬೆಸುಗೆ +ಬಿಡುತಿದೆ +ಜಕ್ಕವಕ್ಕಿಯ +ತೆಕ್ಕೆ +ಸಡಿಲುತಿದೆ
ದೆಸೆದೆಸೆಯ +ತಾಣಾಂತರದ +ಹೊಂ
ಬಿಸಿಲು +ಬೀತುದು +ಜೀಯ +ಬಿನ್ನಹ
ವಸುಧೆ +ತಂಪೇರಿತ್ತು +ಬಿಜಯಂಗೈಯ+ಬೇಕೆಂದ

ಅಚ್ಚರಿ:
(೧) ಸಂಜೆಯಾಗುವುದನ್ನು ಸುಂದರವಾಗಿ ವರ್ಣಿಸುವ ಪರಿ – ಎಸಳುಮೊನೆ ಮೇಲಾಗಿ ತಾವರೆ
ಮುಸುಕುತಿದೆ ನೈದಿಲಿನ ನೆತ್ತಿಯ ಬೆಸುಗೆ ಬಿಡುತಿದೆ ಜಕ್ಕವಕ್ಕಿಯ ತೆಕ್ಕೆ ಸಡಿಲುತಿದೆ

ಪದ್ಯ ೩: ಸೂರ್ಯೋದಯವು ಹೇಗೆ ಕಂಡಿತು?

ಸರಸಿಜದ ಪರಿಮಳಕೆ ತುಂಬಿಯ
ಬರವ ಕೊಟ್ಟನು ಚಂದ್ರಕಾಂತಕೆ
ಬೆರಗನಿತ್ತನು ಜಕ್ಕವಕ್ಕಿಯ ಸೆರೆಯ ಬಿಡಿಸಿದನು
ಕೆರಳಿ ನೈದಿಲೆ ಸಿರಿಯ ಸೂರೆಯ
ತರಿಸಿದನು ರಿಪುರಾಯರಾಜ್ಯವ
ನೊರಸಿದನು ರವಿ ಮೂಡಣಾದ್ರಿಯೊಳಿತ್ತನೋಲಗವ (ವಿರಾಟ ಪರ್ವ, ೧೧ ಸಂಧಿ, ೩ ಪದ್ಯ)

ತಾತ್ಪರ್ಯ:
ಕಮಲದ ಪರಿಮಳಕ್ಕೆ ಉಡುಗೊರೆಯಾಗಿ ದುಂಬಿಯನ್ನು ಕಳಿಸಿದನು, ಶತ್ರು ಪಕ್ಷಕ್ಕೆ ಸೇರಿದ ಚಂದ್ರಕಾಂತ ಶಿಲೆಗೆ ಆಶ್ಚರ್ಯಕರವಾದ ಪರಾಭವವನ್ನು ಕೊಟ್ಟನು, ಚಕ್ರವಾಕ ಪಕ್ಷಿಗಳ ಬಂಧನವನ್ನು ಕೊನೆಗೊಳಿಸಿದನು, ಕೋಪದಿಂದ ಶತ್ರುರಾಜನ ಗೆಳತಿಯಾದ ಕನ್ನೈದಿಲೆಯ ಹರ್ಷವನ್ನು ಸೂರೆಗೊಂಡನು, ರಾತ್ರಿಯ ರಾಜ್ಯವನ್ನು ಕೊನೆಗೊಳಿಸಿ ಪೂರ್ವಪರ್ವತದ ಶಿಖರದ ಮೇಲೆ ಕುಳಿತು ಸೂರ್ಯನು ಓಲಗವನ್ನಿತ್ತನು.

ಅರ್ಥ:
ಸರಸಿಜ: ಕಮಲ; ಪರಿಮಳ: ಸುಗಂಧ; ತುಂಬಿ: ದುಂಬಿ; ಬರವ: ಆಗಮನ; ಕೊಡು: ನೀಡು; ಚಂದ್ರಕಾಂತ: ಶಶಿಕಾಂತ ಶಿಲೆ; ಬೆರಗು: ವಿಸ್ಮಯ, ಸೋಜಿಗ; ಜಕ್ಕವಕ್ಕಿ: ಎಣೆವಕ್ಕಿ, ಚಕ್ರವಾಕ; ಸೆರೆ: ಬಂಧನ; ಬಿಡಿಸು: ಕಳಚು, ಸಡಿಲಿಸು, ನಿವಾರಿಸು; ಕೆರಳು: ಕೋಪಗೊಳ್ಳು; ಸಿರಿ: ಐಶ್ವರ್ಯ; ಸೂರೆ: ಕೊಳ್ಳೆ, ಲೂಟಿ; ತರಿಸು: ಬರೆಮಾಡು; ರಿಪು: ವೈರಿ; ರಾಯ: ರಾಜ; ಒರಸು: ನಾಶಮಾಡು; ರವಿ: ಭಾನು; ಮೂಡಣ: ಪೂರ್ವ; ಅದ್ರಿ: ಬೆಟ್ಟ; ಓಲಗ: ಸೇವೆ, ದರ್ಬಾರು;

ಪದವಿಂಗಡಣೆ:
ಸರಸಿಜದ+ ಪರಿಮಳಕೆ +ತುಂಬಿಯ
ಬರವ +ಕೊಟ್ಟನು +ಚಂದ್ರಕಾಂತಕೆ
ಬೆರಗನಿತ್ತನು+ ಜಕ್ಕವಕ್ಕಿಯ +ಸೆರೆಯ +ಬಿಡಿಸಿದನು
ಕೆರಳಿ+ ನೈದಿಲೆ+ ಸಿರಿಯ +ಸೂರೆಯ
ತರಿಸಿದನು +ರಿಪುರಾಯ+ರಾಜ್ಯವನ್
ಒರಸಿದನು +ರವಿ+ ಮೂಡಣ+ಅದ್ರಿಯೊಳ್+ ಇತ್ತನ್+ಓಲಗವ

ಅಚ್ಚರಿ:
(೧) ಸೂರ್ಯೋದಯದ ಬಹು ಸೊಗಸಾದ ವರ್ಣನೆ
(೨) ನೈದಿಲೆಯು ಮುದುಡಿತು ಎಂದು ಹೇಳಲು – ಕೆರಳಿ ನೈದಿಲೆ ಸಿರಿಯ ಸೂರೆಯ ತರಿಸಿದನು
(೩) ರಾತ್ರಿಯನ್ನು ಹೋಗಲಾಡಿಸಿದನು ಎಂದು ಹೇಳಲು – ರಿಪುರಾಯರಾಜ್ಯವನೊರಸಿದನು
(೪) ಕಮಲವನ್ನು ಅರಳಿಸಿದನು ಎಂದು ಹೇಳಲು – ಸರಸಿಜದ ಪರಿಮಳಕೆ ತುಂಬಿಯ ಬರವ ಕೊಟ್ಟನು

ಪದ್ಯ ೫೪: ಭೀಮನ ಗದ್ದಲಕ್ಕೆ ಪಕ್ಷಿಗಳೇನು ಮಾಡಿದವು?

ಹಾರಿದವು ಹಂಸೆಗಳು ತುದಿಮರ
ಸೇರಿದವು ನವಿಲುಗಳು ತುಂಡವ
ನೂರಿ ನೀರೊಳು ಮುಳುಗಿ ಮರಳ್ದವು ಜಕ್ಕವಕ್ಕಿಗಳು
ಚೀರಿದವು ಕೊಳರ್ವಕ್ಕಿ ದಳದಲಿ
ಜಾರಿ ತಾವರೆಯೆಲೆಯ ಮರೆಗಳ
ಲಾರಡಿಗಳಡಗಿದವು ಕೋಳಾಹಳಕೆ ಪವನಜನ (ಅರಣ್ಯ ಪರ್ವ, ೧೧ ಸಂಧಿ, ೫೪ ಪದ್ಯ)

ತಾತ್ಪರ್ಯ:
ಭೀಮನ ಕೋಲಾಹಲಕ್ಕೆ ಹಂಸಗಳು ಹಾರಿ ಹೋದವು. ನವಿಲುಗಳು ಮರದ ತುದಿಗಳನ್ನು ಏರಿದವು. ಚಕ್ರವಾಕ ಪಕ್ಷಿಗಳು ಕೊಕ್ಕುಗಳನ್ನು ನೀರಲ್ಲಿ ಮೂರಿ ಮುಳುಗಿ ಏಳುತ್ತಿದ್ದವು. ಸರೋವರದ ಪಕ್ಷಿಗಳು ಚೀರಿದವು. ತಾವರೆಯೆಲೆಗಳ ಮರೆಯಲ್ಲಿ ದುಂಬಿಗಳು ಅಡಗಿದವು.

ಅರ್ಥ:
ಹಾರು: ಲಂಘಿಸು; ಹಂಸ: ಮರಾಲ; ತುದಿ: ಅಗ್ರಭಾಗ; ಮರ: ತರು; ಸೇರು: ತಲುಪು, ಮುಟ್ಟು; ನವಿಲು: ಮಯೂರ, ಶಿಖಿ; ತುಂಡ: ಮುಖ, ಆನನ; ಊರು: ನೆಲೆಸು; ನೀರು: ಜಲ; ಮುಳುಗು: ನೀರಿನಲ್ಲಿ ಮೀಯು; ಮರಳು: ಹಿಂದಿರುಗು; ಜಕ್ಕವಕ್ಕಿ: ಎಣೆವಕ್ಕಿ, ಚಕ್ರ ವಾಕ; ಚೀರು: ಜೋರಾಗಿ ಕೂಗು; ಕೊಳ: ಹೊಂಡ, ಸರೋವರ; ದಳ: ಗುಂಪು; ಜಾರು: ಕೆಳಗೆ ಬೀಳು; ತಾವರೆ: ಕಮಲ; ಎಲೆ: ಪರ್ಣ; ಮರೆ: ಗುಟ್ಟು, ರಹಸ್ಯ; ಆರಡಿ: ಆರು ಕಾಲುಗಳುಳ್ಳ ಕೀಟ, ದುಂಬಿ; ಅಡಗು: ಬಚ್ಚಿಟ್ಟುಕೊಳ್ಳು; ಕೋಳಾಹಲ: ಗದ್ದಲ; ಪವನಜ: ಭೀಮ;

ಪದವಿಂಗಡಣೆ:
ಹಾರಿದವು +ಹಂಸೆಗಳು +ತುದಿಮರ
ಸೇರಿದವು +ನವಿಲುಗಳು +ತುಂಡವನ್
ಊರಿ+ ನೀರೊಳು +ಮುಳುಗಿ +ಮರಳ್ದವು+ ಜಕ್ಕವಕ್ಕಿಗಳು
ಚೀರಿದವು +ಕೊಳರ್ವಕ್ಕಿ+ ದಳದಲಿ
ಜಾರಿ +ತಾವರೆ+ಎಲೆಯ +ಮರೆಗಳಲ್
ಆರಡಿಗಳ್+ಅಡಗಿದವು +ಕೋಳಾಹಳಕೆ +ಪವನಜನ

ಅಚ್ಚರಿ:
(೧) ದುಂಬಿಗಳನ್ನು ಚಿತ್ರಿಸಿದ ಪರಿ – ದಳದಲಿಜಾರಿ ತಾವರೆಯೆಲೆಯ ಮರೆಗಳ ಲಾರಡಿಗಳಡಗಿದವು

ಪದ್ಯ ೧೬: ಕುಂತಿ ಕೃಷ್ಣನನ್ನು ನೋಡಲು ಬಂದಾಗ ಅವಳಿಗಾದ ಅನುಭವವೇನು?

ತೊಲಗಿದಸು ಬಂದಂತೆ ತರಣಿಯ
ಹೊಳಹು ಸೋಂಕಿದ ಜಕ್ಕವಕ್ಕಿಯ
ಬಳಗದಂತಿರೆ ಕೃಷ್ಣರಾಯನ ಬರವ ತಾ ಕೇಳ್ದು
ಪುಳಕ ಪಸರಿಸಿ ಪರಮಹರುಷವ
ತಳೆದು ದೇವನ ಕಾಣಿಕೆಯ ಕಂ
ಗಳಿಗೆ ಕಡುಲೋಲುಪತೆ ಮಿಗೆ ಹರಿತಂದಳಾ ಕುಂತಿ (ಉದ್ಯೋಗ ಪರ್ವ, ೮ ಸಂಧಿ, ೧೬ ಪದ್ಯ)

ತಾತ್ಪರ್ಯ:
ಹೋದ ಪ್ರಾಣವು ಮತ್ತೆ ಬಂದಂತೆ, ಸೂರ್ಯನ ರಶ್ಮಿಯ ಕಾಂತಿಯನ್ನು ಸ್ಪರ್ಶಿಸಿದ ಚಕ್ರವಾಕ ಪಕ್ಷಿಗಳ ಬಳಗದಂತೆ, ಕೃಷ್ಣನ ಆಗಮನವನ್ನು ಕೇಳಿದ ಕುಂತಿಯು ರೋಮಾಂಚನಗೊಂಡು ಅತ್ಯಂತ ಹರುಷದಿಂದ ಕೃಷ್ಣನನ್ನು ನೋಡುವ ಭಾಗ್ಯವನ್ನು ತನ್ನ ಕಣ್ಣುಗಳಿಗೆ ಕಾಣಿಕೆಯಾಗಿ ನೀಡಲು ಅತ್ಯಂತ ಆಸೆಯಿಂದ ಓಡೋಡಿ ಬಂದಳು.

ಅರ್ಥ:
ತೊಲಗು: ಹೋಗು; ಅಸು: ಪ್ರಾಣ; ಬಂದು: ಆಗಮಿಸು; ತರಣಿ: ಸೂರ್ಯ; ಹೊಳಹು: ಕಾಂತಿ; ಸೋಂಕು: ಸ್ಪರ್ಶ; ಜಕ್ಕವಕ್ಕಿ: ಎಣೆವಕ್ಕಿ, ಚಕ್ರ ವಾಕ; ಬಳಗ: ಗುಂಪು; ಬರವ: ಆಗಮನ; ಕೇಳು: ಆಲಿಸು; ಪುಳಕ: ಮೈನವಿರೇಳುವಿಕೆ, ರೋಮಾಂಚನ; ಪಸರಿಸು: ಹರಡು; ಪರಮ: ಶ್ರೇಷ್ಠ; ಹರುಷ: ಸಂತೋಷ; ತಳೆದು: ತಾಳಿ; ದೇವ: ಭಗವಂತ; ಕಾಣಿಕೆ: ಉಡುಗೊರೆ; ಕಂಗಳು: ಕಣ್ಣು; ಕಡು: ಹೆಚ್ಚು; ಲೋಲುಪ: ಅತಿಯಾಸೆಯುಳ್ಳವನು; ಮಿಗೆ: ಹೆಚ್ಚಾಗಿ; ಹರಿ: ಪ್ರವಾಹ;

ಪದವಿಂಗಡಣೆ:
ತೊಲಗಿದ್+ಅಸು +ಬಂದಂತೆ +ತರಣಿಯ
ಹೊಳಹು +ಸೋಂಕಿದ +ಜಕ್ಕವಕ್ಕಿಯ
ಬಳಗದಂತಿರೆ+ ಕೃಷ್ಣರಾಯನ +ಬರವ +ತಾ +ಕೇಳ್ದು
ಪುಳಕ+ ಪಸರಿಸಿ+ ಪರಮ+ಹರುಷವ
ತಳೆದು +ದೇವನ +ಕಾಣಿಕೆಯ+ ಕಂ
ಗಳಿಗೆ+ ಕಡುಲೋಲುಪತೆ+ ಮಿಗೆ +ಹರಿತಂದಳಾ +ಕುಂತಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ತೊಲಗಿದಸು ಬಂದಂತೆ; ತರಣಿಯ ಹೊಳಹು ಸೋಂಕಿದ ಜಕ್ಕವಕ್ಕಿಯ ಬಳಗದಂತಿರೆ
(೨) ‘ಪ’ ಕಾರದ ತ್ರಿವಳಿ ಪದ – ಪುಳಕ ಪಸರಿಸಿ ಪರಮಹರುಷವ
(೩) ಬೇಗ ಬಂದಳು ಎಂದು ಹೇಳಲು – ‘ಹರಿತಂದಳಾ’ ಪದ ಪ್ರಯೋಗ

ಪದ್ಯ ೨೩: ಪಕ್ಷಿಗಳು ಕೃಷ್ಣನನ್ನು ಹೇಗೆ ಸ್ವಾಗತಿಸಿದವು?

ಗಿಳಿಯ ತುಂಬಿಯ ಹಂಸೆಗಳ ಕೋ
ಗಿಲೆಯ ಕೊಳರ್ವಕ್ಕಿಗಳ ಕೊಂಚೆಯ
ಕೊಳಲುವಕ್ಕಿಯ ಜಕ್ಕವಕ್ಕಿಯ ನವಿಲು ಪಾರಿವದ
ಕಲರುಚಿಯ ಕರ್ಣಾಮೃತದ ತನಿ
ವಳೆಯ ಕರೆದುದು ಯಾದವೇಂದ್ರನ
ಬಲದ ಕಿವಿಗಳಲಿಭಪುರಿಯ ಹೊರವಳಯದುದ್ಯಾನ (ಉದ್ಯೋಗ ಪರ್ವ, ೭ ಸಂಧಿ, ೨೩ ಪದ್ಯ)

ತಾತ್ಪರ್ಯ:
ಕೃಷ್ಣನ ಆಗಮನವು ಯಾವ ರೀತಿ ಮನುಷ್ಯರನ್ನು ಪಾವನಗೊಳಿಸಿತೋ ಅದೇ ರೀತಿ ಪಕ್ಷಿಗಳು ಯಾದವೇಂದ್ರನ ಆಗಮನದಿಂದ ಸಂತಸಗೊಂಡು ಇಂಪಾದ ಧ್ವನಿಯಿಂದ ಸ್ವಾಗತಿಸಿದರು. ಗಿಳಿ, ದುಂಬಿ, ಹಂಸ, ಕೋಗಿಲೆ, ಕೊಳರ್ವಕ್ಕಿ, ಕ್ರೌಂಚಪಕ್ಷಿ, ಕೊಳಲುವಕ್ಕಿ, ಜಕ್ಕವಕ್ಕಿ, ನವಿಲು, ಪಾರಿವಾಳ ಹೀಗೆ ಹಲವು ಹಕ್ಕಿಗಳ ನಿನಾದದ ಚೆಲುವು ಹಸ್ತಿನಾಪುರದ ಹೊರವಳಯದಲ್ಲಿ ಕೃಷ್ಣನ ಬಲಕಿವಿಗೆ ಅಮೃತವನ್ನು ಮತ್ತು ಸವಿಯನ್ನು ನೀಡಿದವು.

ಅರ್ಥ:
ಗಿಳಿ: ಶುಕ; ತುಂಬಿ: ದುಂಬಿ; ಹಂಸ: ಬಿಳಿಯ ಬಣ್ಣದ ಪಕ್ಷಿ; ಕೋಗಿಲೆ: ಕೋಕಿಲ, ಪಿಕ; ಕೊಂಚೆ: ಕ್ರೌಂಚಪಕ್ಷಿ; ನವಿಲು: ಮಯ್ಯೂರ; ಪಾರಿವ: ಪಾರಿವಾಳ; ಕಲ: ಮಧುರ ಧ್ವನಿ; ರುಚಿ: ಸವಿ; ಕರ್ಣ: ಕಿವಿ; ಅಮೃತ: ಸುಧೆ; ತನಿ:ಸವಿಯಾದುದು, ಹೊಸತು; ಕರೆ: ಬರೆಮಾಡು; ಇಭಪುರಿ: ಹಸ್ತಿನಾಪುರಿ; ಹೊರವಳಯ: ಹೊರಭಾಗದ; ಉದ್ಯಾನ: ಕೈತೋಟ; ಜಕ್ಕವಕ್ಕಿ: ಚಕ್ರವಾಕ ಪಕ್ಷಿ;

ಪದವಿಂಗಡಣೆ:
ಗಿಳಿಯ +ತುಂಬಿಯ +ಹಂಸೆಗಳ+ ಕೋ
ಗಿಲೆಯ +ಕೊಳರ್ವಕ್ಕಿಗಳ+ ಕೊಂಚೆಯ
ಕೊಳಲುವಕ್ಕಿಯ+ ಜಕ್ಕವಕ್ಕಿಯ+ ನವಿಲು +ಪಾರಿವದ
ಕಲರುಚಿಯ +ಕರ್ಣಾಮೃತದ+ ತನಿ
ವಳೆಯ +ಕರೆದುದು +ಯಾದವೇಂದ್ರನ
ಬಲದ +ಕಿವಿಗಳಲ್+ಇಭಪುರಿಯ +ಹೊರವಳಯದ್+ಉದ್ಯಾನ

ಅಚ್ಚರಿ:
(೧) ಪಕ್ಷಿಗಳ ಹೆಸರನ್ನು ತಿಳಿಸುವ ಪದ್ಯ
(೨) ಪಕ್ಷಿಗಳು ಕೃಷ್ಣನನ್ನು ಕರೆದ ಬಗೆ – ಕಲರುಚಿಯ ಕರ್ಣಾಮೃತದ ತನಿವಳೆಯ ಕರೆದುದು ಯಾದವೇಂದ್ರನ