ಪದ್ಯ ೧೭: ಲೋಮಶನು ಯಾರ ಚರಿತ್ರೆಯನ್ನು ಧರ್ಮಜನಿಗೆ ತಿಳಿಸಿದನು?

ಚ್ಯವನ ಮುನಿಯ ವಿವಾಹವನು ರೂ
ಪವನು ಮುನಿಗಶ್ವಿನಿಗಳಿತ್ತುದ
ನವರಿಗಾ ಮುನಿಮಖ ಹವಿರ್ಭಾಗ ಪ್ರಸಂಗತಿಯ
ಅವರಿಗಿಂದ್ರನ ಮತ್ಸರವ ದಾ
ನವನ ನಿರ್ಮಾಣವನು ಬಳಿಕಿನೊ
ಳವನಿಪಗೆ ಮಾಂಧಾತ ಚರಿತವನೊರೆದನಾ ಮುನಿಪ (ಅರಣ್ಯ ಪರ್ವ, ೧೦ ಸಂಧಿ, ೧೭ ಪದ್ಯ)

ತಾತ್ಪರ್ಯ:
ಚ್ಯವನನ ವಿವಾಹ ಅಶ್ವಿನೀದೇವತೆತಳು ಅವನಿಗೆ ರೂಪವನ್ನು ಕೊಟ್ಟದ್ದು, ಅವರಿಗೆ ಯಾಗದ ಹವಿರ್ಭಾಗವನ್ನು ಕೊಟ್ಟಿದ್ದು ಅದರಿಂದ ಇಂದ್ರನಿಗೆ ಬಂದ ಹೊಟ್ಟೆಕಿಚ್ಚು, ರಾಕ್ಷಸನ ನಿರ್ಮಾಣ ಮೊದಲಾದವುಗಳನ್ನು ಹೇಳಿ ಲೋಮಶನು ಮಾಂಧಾತ ಚರಿತ್ರೆಯನ್ನು ಧರ್ಮಜನಿಗೆ ತಿಳಿಸಿದನು.

ಅರ್ಥ:
ಮುನಿ: ಋಷಿ; ವಿವಾಹ: ಮದುವೆ; ರೂಪ: ಆಕಾರ; ಮಖ: ಯಜ್ಞ; ಹವಿಸ್ಸು: ಹವಿ, ಚರು; ಹವಿ: ಯಜ್ಞದಲ್ಲಿ ಆಹುತಿ ಕೊಡುವ ತುಪ್ಪ; ಭಾಗ: ಅಂಶ, ಪಾಲು; ಪ್ರಸಂಗ: ಸೇರಿಕೆ, ಕೂಟ; ಮತ್ಸರ: ಹೊಟ್ಟೆಕಿಚ್ಚು; ದಾನವ: ರಾಕ್ಷಸ; ನಿರ್ಮಾಣ: ರಚಿಸು; ಬಳಿಕ: ನಂತರ; ಅವನಿಪ: ರಾಜ; ಚರಿತ: ಕಥೆ; ಉರೆ: ಅತಿಶಯವಾಗಿ;

ಪದವಿಂಗಡಣೆ:
ಚ್ಯವನ +ಮುನಿಯ +ವಿವಾಹವನು +ರೂ
ಪವನು +ಮುನಿಗ್+ಅಶ್ವಿನಿಗಳ್+ಇತ್ತುದನ್
ಅವರಿಗ್+ಆ+ ಮುನಿ+ಮಖ +ಹವಿರ್ಭಾಗ +ಪ್ರಸಂಗತಿಯ
ಅವರಿಗ್+ಇಂದ್ರನ +ಮತ್ಸರವ +ದಾ
ನವನ +ನಿರ್ಮಾಣವನು +ಬಳಿಕಿನೊಳ್
ಅವನಿಪಗೆ +ಮಾಂಧಾತ +ಚರಿತವನೊರೆದನಾ +ಮುನಿಪ

ಅಚ್ಚರಿ:
(೧) ಮುನಿ – ೧-೩ ಸಾಲಿನ ಎರಡನೇ ಪದ

ಪದ್ಯ ೧೬: ಯುಧಿಷ್ಠಿರನು ಯಾರ ಚರಿತೆಯನ್ನು ತಿಳಿದನು?

ಬಂದನವನಿಪನಾ ಪ್ರಭಾಸದ
ವಂದನೆಗೆ ಬಳಿಕಲ್ಲಿ ಯಾದವ
ವೃಂದ ದರ್ಶನವಾಯ್ತು ಬಹುವಿಧತೀರ್ಥ ತೀರದಲಿ
ಮಿಂದನಾತಗೆ ಗಯನ ಚರಿತವ
ನಂದು ರೋಮಶ ಹೇಳಿದನು ನಲ
ವಿಂದ ಶರ್ಯಾತಿ ಚ್ಯವನ ಸಂವಾದ ಸಂಗತಿಯ (ಅರಣ್ಯ ಪರ್ವ, ೧೦ ಸಂಧಿ, ೧೬ ಪದ್ಯ)

ತಾತ್ಪರ್ಯ:
ಪ್ರಭಾಸತೀರ್ಥಕ್ಕೆ ಧರ್ಮಜನು ಬಂದಾಗ ಅಲ್ಲಿ ಯಾದವರನ್ನು ನೋಡಿದರು. ಅನೇಕ ತೀರ್ಥಗಳಲ್ಲಿ ಸ್ನಾನ ಮಾಡಿದನು. ರೋಮಶರು ಧರ್ಮಜನಿಗೆ ಗಯನ ಚರಿತ್ರೆಯನ್ನು ಚ್ಯವನ ಶರ್ಯಾತಿ ಸಂವಾದದ ವಿಷಯವನ್ನೂ ತಿಳಿಸಿದರು.

ಅರ್ಥ:
ಬಂದನು: ಆಗಮಿಸು; ಅವನಿಪ: ರಾಜ; ಅವನಿ: ಭೂಮಿ; ವಂದನೆ: ನಮಸ್ಕರಿಸು; ಬಳಿಕ: ನಂತರ; ವೃಂದ: ಗುಂಪು; ದರ್ಶನ: ನೋಟ; ಬಹು: ಬಹಳ; ವಿಧ: ರೀತಿ; ತೀರ್ಥ: ಪವಿತ್ರವಾದ ಜಲ; ತೀರ: ದಡ; ಮಿಂದು: ಮುಳುಗು; ಚರಿತ: ಕಥೆ; ನಲವು: ಸಂತೋಷ; ಸಂವಾದ: ಸಂಭಾಷಣೆ; ಸಂಗತಿ: ವಿಚಾರ;

ಪದವಿಂಗಡಣೆ:
ಬಂದನ್+ಅವನಿಪನ್+ಆ+ ಪ್ರಭಾಸದ
ವಂದನೆಗೆ +ಬಳಿಕಲ್ಲಿ+ ಯಾದವ
ವೃಂದ +ದರ್ಶನವಾಯ್ತು +ಬಹುವಿಧ+ತೀರ್ಥ +ತೀರದಲಿ
ಮಿಂದನ್+ಆತಗೆ+ ಗಯನ+ ಚರಿತವನ್
ಅಂದು +ರೋಮಶ +ಹೇಳಿದನು +ನಲ
ವಿಂದ +ಶರ್ಯಾತಿ +ಚ್ಯವನ +ಸಂವಾದ +ಸಂಗತಿಯ

ಅಚ್ಚರಿ:
(೧) ರೋಮಶ, ಶರ್ಯಾತಿ, ಚ್ಯವ, ಗಯ – ಹೆಸರುಗಳ ಪರಿಚಯ