ಧರಣಿಪತಿ ಕೇಳ್ ಕೊಳನ ತಡಿಯಲಿ
ಕುರುಕುಲಾಗ್ರಣಿ ನಿಂದು ನೋಡಿದ
ನರಿಭಟರ ಸುಮ್ಮಾನವನು ಸಂಭ್ರಾಂತಚೇತನವ
ಉರಿದುದಾ ಮಸ್ತಕದ ರೋಷೋ
ತ್ಕರದ ಝಳಝಾಡಿಸಿತು ಶುಭ್ರ
ಸ್ಫುರಣದಂತನಿಪೀಡಿತಾಧರನಾದನಾ ಭೂಪ (ಗದಾ ಪರ್ವ, ೫ ಸಂಧಿ, ೩೭ ಪದ್ಯ)
ತಾತ್ಪರ್ಯ:
ಎಲೈ ಧೃತರಾಷ್ಟ್ರನೇ ಕೇಳು, ದುರ್ಯೋಧನನು ಸರೋವರದ ದಡದಮೇಲೆ ನಿಂತು ಶತ್ರುಗಳ ಸುಮ್ಮಾನವನ್ನು ಸಂಭ್ರಮವನ್ನು ನೋಡಿದನು. ಅವನ ದೇಹವು ಕಾಲಿಂದ ಮುಖದವರೆಗೆ ಕೋಪದಿಂದುರಿಯಿತು. ನಿರ್ಮಲವಾದ ಹಲ್ಲುಗಳಿಂದ ಅವನ ಕೆಳತುಟಿಯನ್ನು ಕಚ್ಚಿದನು.
ಅರ್ಥ:
ಧರಣಿಪತಿ: ರಾಜ; ಕೇಳು: ಆಲಿಸು; ಕೊಳ: ಸರೋವರ; ತಡಿ: ದಡ; ಕುಲ: ವಂಶ; ಅಗ್ರಣಿ: ಶ್ರೇಷ್ಠ, ಮೊದಲಿಗ; ನಿಂದು: ನಿಲ್ಲು; ನೋಡು: ವೀಕ್ಷಿಸು; ಅರಿ:ವೈರಿ; ಭಟ: ಸೈನಿಕ; ಸುಮ್ಮಾನ: ಸಂತೋಷ; ಸಂಭ್ರಾಂತ: ಸಂಭ್ರಮ; ಚೇತನ: ಮನಸ್ಸು, ಬುದ್ಧಿ, ಪ್ರಜ್ಞೆ; ಉರಿ: ಜ್ವಾಲೆ, ಸಂಕಟ; ಮಸ್ತಕ: ಶಿರ; ರೋಷ: ಕೋಪ; ಉತ್ಕರ: ಹೆಚ್ಚು; ಝಳ: ಶಾಖ, ಪ್ರಕಾಶ; ಶುಭ್ರ: ನಿರ್ಮಲ; ಸ್ಫುರಣ: ನಡುಗುವುದು, ಕಂಪನ; ದಂತ: ಹಲ್ಲು; ಪೀಡಿತ: ನೋವು; ಅಧರ: ಕೆಳತುಟಿ; ಭೂಪ: ರಾಜ;
ಪದವಿಂಗಡಣೆ:
ಧರಣಿಪತಿ +ಕೇಳ್ +ಕೊಳನ +ತಡಿಯಲಿ
ಕುರುಕುಲಾಗ್ರಣಿ+ ನಿಂದು +ನೋಡಿದನ್
ಅರಿ+ಭಟರ +ಸುಮ್ಮಾನವನು+ ಸಂಭ್ರಾಂತ+ಚೇತನವ
ಉರಿದುದಾ +ಮಸ್ತಕದ +ರೋಷೋ
ತ್ಕರದ +ಝಳಝಾಡಿಸಿತು+ ಶುಭ್ರ
ಸ್ಫುರಣ+ದಂತ+ನಿಪೀಡಿತ+ಅಧರನ್+ಆದನಾ +ಭೂಪ
ಅಚ್ಚರಿ:
(೧) ಒಂದೇ ಪದವಾಗಿ ರಚನೆ – ಶುಭ್ರಸ್ಫುರಣದಂತನಿಪೀಡಿತಾಧರನಾದನಾ
(೨) ಧರಣಿಪತಿ, ಭೂಪ – ಸಮಾನಾರ್ಥಕ ಪದ, ಪದ್ಯದ ಮೊದಲ ಹಾಗು ಕೊನೆ ಪದ
(೩) ದುರ್ಯೋಧನನನ್ನು ಕುರುಕುಲಾಗ್ರಣಿ ಎಂದು ಕರೆದಿರುವುದು