ಪದ್ಯ ೨೮: ಯುಧಿಷ್ಠಿರನ ಮನಸ್ಥಿತಿ ಹೇಗಾಯಿತು?

ಬೆರಗು ಬೆಳೆದುದು ಮನದ ಮಿಡುಕಿನ
ಮರುಕ ಮುಂದಲೆಗೊಟ್ಟುದರಿವಿನ
ಸೆರಗು ಹಾರಿತು ಲಜ್ಜೆ ಬೆಳಗಿತು ಬಿಟ್ಟಬೀದಿಯಲಿ
ಉರುಬಿತಪದೆಸೆ ರಾಜ್ಯಲಕ್ಷ್ಮಿಯ
ತುರುಬು ಕೈದೊಳಸಾಯ್ತು ಹಗೆಗಾ
ನರಿಯೆನರಸನ ವಿರಸ ಚೀತೋಭಾವ ಭಂಗಿಗಳ (ಸಭಾ ಪರ್ವ, ೧೫ ಸಂಧಿ, ೨೮ ಪದ್ಯ)

ತಾತ್ಪರ್ಯ:
ಯುಧಿಷ್ಠಿರನ ಆಶ್ಚರ್ಯವು ಹೆಚ್ಚಾಯಿತು, ಮನಸ್ಸನ್ನು ಆವರಿಸಿದ ದುಗುಡವು ಅವನ ತಲೆಯ ಮುಂಭಾಗವನ್ನು ಹಿಡಿಯಿತು, ಜ್ಞಾನದ ಸೆರಗು ಕಳಚಿತು, ನಡುಬೀದಿಯಲ್ಲಿ ಮಾನವು ಅಪಹರಣವಾಯಿತು. ದುರಾದೃಷ್ಟವು ಅವನನ್ನು ಆಕ್ರಮಿಸಿತು. ಅವನ ರಾಜ್ಯಲಕ್ಷ್ಮಿಯ ತುರುಬನ್ನು ಶತ್ರುವು ಹಿಡಿದನು. ಅವನ ಅರಿವಿನ ಭಾವಗಳ ಬಗೆಯನ್ನು ನಾನು ತಿಳಿಯೆ ಜನಮೇಜಯ ಎಂದು ವೈಶಂಪಾಯನರು ಹೇಳಿದರು.

ಅರ್ಥ:
ಬೆರಗು: ಆಶ್ಚರ್ಯ; ಬೆಳೆದು: ಹೆಚ್ಚಾಗು; ಮನ: ಮನಸ್ಸು; ಮಿಡುಕು: ಅಲುಗಾಟ, ಚಲನೆ, ನಡುಕ; ಮರುಕ: ಬೇಗುದಿ, ಅಳಲು; ಮುಂದಲೆ: ತಲೆಯ ಮುಂಭಾಗ; ಅರಿವು: ತಿಳುವಳಿಕೆ; ಸೆರಗು: ಬಟ್ಟೆಯ ತುದಿಯ ಭಾಗ; ಹಾರು: ಎಗರು, ಜಿಗಿ; ಲಜ್ಜೆ: ಬೆಳಗು: ಹೊಳಪು, ಕಾಂತಿ; ಬೀದಿ: ಮಾರ್ಗ, ದಾರಿ; ಬಿಟ್ಟಬೀದಿ: ನಡುರಸ್ತೆ; ಉರುಬು: ಅತಿಶಯವಾದ ವೇಗ; ಅಪದೆಸೆ: ದುರದೃಷ್ಟ; ತುರುಬು: ಕೂದಲಿನ ಗಂಟು, ಮುಡಿ; ಕೈ: ಹಸ್ತ; ಹಗೆ: ವೈರಿ; ಅರಿ: ತಿಳಿ; ಅರಸ: ರಾಜ; ವಿರಸ: ಸತ್ವವಿಲ್ಲದ, ವಿರೋಧ; ಚೇತಸ್ಸು: ಪ್ರಜ್ಞೆ, ಬುದ್ಧಿ ಶಕ್ತಿ; ಭಂಗಿ: ಠೀವಿ, ಗತ್ತು;

ಪದವಿಂಗಡಣೆ:
ಬೆರಗು +ಬೆಳೆದುದು +ಮನದ +ಮಿಡುಕಿನ
ಮರುಕ +ಮುಂದಲೆ+ಕೊಟ್ಟುದ್+ಅರಿವಿನ
ಸೆರಗು +ಹಾರಿತು +ಲಜ್ಜೆ +ಬೆಳಗಿತು+ ಬಿಟ್ಟಬೀದಿಯಲಿ
ಉರುಬಿತ್+ಅಪದೆಸೆ +ರಾಜ್ಯಲಕ್ಷ್ಮಿಯ
ತುರುಬು +ಕೈದೊಳಸಾಯ್ತು +ಹಗೆಗ್
ಆನ್+ಅರಿಯೆನ್+ಅರಸನ+ ವಿರಸ +ಚೀತೋಭಾವ +ಭಂಗಿಗಳ

ಅಚ್ಚರಿ:
(೧) ಯುಧಿಷ್ಠಿರನ ಸ್ಥಿತಿ: ಅರಿವಿನ ಸೆರಗು ಹಾರಿತು ಲಜ್ಜೆ ಬೆಳಗಿತು ಬಿಟ್ಟಬೀದಿಯಲಿ
(೨) ಅರಸ, ವಿರಸ – ಪ್ರಾಸ ಪದ
(೩) ರಾಜ್ಯವು ಕಳಚಿತು ಎಂದು ಹೇಳಲು – ರಾಜ್ಯಲಕ್ಷ್ಮಿಯ ತುರುಬು ಕೈದೊಳಸಾಯ್ತು ಹಗೆಗ್