ಈ ಪರಿಯಲರ್ಜುನನ ಮನದನು
ತಾಪವನು ಕಾಣುತಾ ಶಾಬರ
ರೂಪರಚನೆಯ ತೆರೆಯ ಮರೆಯಲಿ ಮೆರೆವ ಚಿನ್ಮಯದ
ರೂಪನವ್ಯಾಹತ ನಿಜೋನ್ನತ
ರೂಪರಸದಲಿ ನರನ ಚಿತ್ತದ
ತಾಪವಡಗಲು ತಂಪನೆರೆದನು ತರುಣ ಶಶಿಮೌಳಿ (ಅರಣ್ಯ ಪರ್ವ, ೭ ಸಂಧಿ, ೬೭ ಪದ್ಯ)
ತಾತ್ಪರ್ಯ:
ಈ ರೀತಿ ಅರ್ಜುನನು ಶಿವನ ಬಗ್ಗೆ ತನ್ನ ಮನಸ್ಸಿನಲ್ಲಿದ್ದುದನ್ನು ತೋಡಿಕೊಂಡು ದುಃಖಪಡುವುದನ್ನು ಕಂಡು, ಅವನ ಮನಸ್ಸಿನ ಅನುತಾಪವನ್ನು ತಿಳಿದು, ಕಿರಾತರೂಪಿನ ಮರೆಯಲ್ಲಿದ್ದ ತನ್ನ ಉನ್ನತವಾದ ನಾಶವಿಲ್ಲದ ತರುಣ ರೂಪವನ್ನು ಶಿವನು ತೋರಿಸಿ ಅರ್ಜುನನ ಮನಸ್ಸಿನ ತಾಪವನ್ನು ಹೋಗಲಾಡಿಸಿದನು.
ಅರ್ಥ:
ಪರಿ: ರೀತಿ; ಮನ: ಮನಸ್ಸು; ಅನುತಾಪ: ಪಶ್ಚಾತ್ತಾಪ, ದುಃಖ; ಕಾಣು: ತೋರು; ಶಾಬರ: ಬೇಡ; ರೂಪ: ಆಕಾರ; ರಚನೆ: ನಿರ್ಮಾಣ; ತೆರೆ: ಬಿಚ್ಚುವಿಕೆ; ಮರೆ: ಗುಟ್ಟು, ರಹಸ್ಯ; ಮೆರೆ: ಹೊಳೆ, ಪ್ರಕಾಶಿಸು; ಚಿನ್ಮಯ: ಶುದ್ಧಜ್ಞಾನದಿಂದ ಕೂಡಿದ; ಅವ್ಯಾಹತ: ತಡೆಯಿಲ್ಲದ, ಎಡೆಬಿಡದ; ನಿಜ: ದಿಟ; ಉನ್ನತ: ಶ್ರೇಷ್ಠ; ರಸ: ಸಾರ; ನರ: ಅರ್ಜುನ; ಚಿತ್ತ: ಮನಸ್ಸು; ತಾಪ: ಬಿಸಿ, ಉಷ್ಣತೆ; ಅಡಗು: ಅವಿತುಕೊಳ್ಳು, ಮರೆಯಾಗು; ತಂಪು: ತಣಿವು, ಶೈತ್ಯ; ಎರೆ: ಸುರಿ; ತರುಣ: ಹರೆಯದವನು, ಯುವಕ ; ಶಶಿ: ಚಂದ್ರ; ಮೌಳಿ: ಶಿರ;
ಪದವಿಂಗಡಣೆ:
ಈ ಪರಿಯಲ್+ಅರ್ಜುನನ +ಮನದ್+ಅನು
ತಾಪವನು +ಕಾಣುತಾ +ಶಾಬರ
ರೂಪರಚನೆಯ+ ತೆರೆಯ+ ಮರೆಯಲಿ +ಮೆರೆವ +ಚಿನ್ಮಯದ
ರೂಪನ್+ಅವ್ಯಾಹತ +ನಿಜೋನ್ನತ
ರೂಪ+ರಸದಲಿ+ ನರನ +ಚಿತ್ತದ
ತಾಪವ್+ಅಡಗಲು +ತಂಪನ್+ಎರೆದನು +ತರುಣ +ಶಶಿಮೌಳಿ
ಅಚ್ಚರಿ:
(೧) ರೂಪ – ೩ ಸಾಲಿನ ಮೊದಲ ಪದ
(೨) ರೂಪ, ತಾಪ – ಪ್ರಾಸ ಪದಗಳು
(೩) ಶಿವನ ತೋರಿದ ಪರಿ – ನರನ ಚಿತ್ತದ ತಾಪವಡಗಲು ತಂಪನೆರೆದನು ತರುಣ ಶಶಿಮೌಳಿ