ಶಕುನಿ ಕೃಪ ಗುರುಸೂನು ಕೃತವ
ರ್ಮಕ ಸುಕೇತು ಸುಶರ್ಮ ಸಮಸ
ಪ್ತಕರು ಮಾದ್ರೇಶ್ವರ ಸುಬಾಹು ಸುನಂದ ಚಿತ್ರರಥ
ಸಕಲ ಸುಭಟರು ಸಹಿತ ದಳನಾ
ಯಕರು ಬಂದರು ಕರ್ಣಹಾನಿ
ಪ್ರಕಟ ಕಳಿತ ಶಿರೋವಕುಂಠನ ವೈಮನಸ್ಯದಲಿ (ಶಲ್ಯ ಪರ್ವ, ೧ ಸಂಧಿ, ೧೪ ಪದ್ಯ)
ತಾತ್ಪರ್ಯ:
ಶಕುನಿ, ಕೃಪಾಚಾರ್ಯ, ಅಶ್ವತ್ಥಾಮ, ಕೃತವರ್ಮ, ಸುಕೇತು, ಸುಶರ್ಮ, ಸಂಶಪ್ತಕರು, ಶಲ್ಯ, ಸುಬಾಹು ಸುನಂದ ಚಿತ್ರರಥನೇ ಮೊದಲಾದ ಎಲ್ಲಾ ವೀರರೂ ದಳನಾಯಕರೂ ಕರ್ಣನ ಮರಣದಿಂದಾದ ಭಂಗವನ್ನು ನೆನೆದು ಮುಖಕ್ಕೆ ಮುಸುಕು ಹಾಕಿಕೊಂಡು ಸಭೆಗೆ ಬಂದರು.
ಅರ್ಥ:
ಸೂನು: ಮಗ; ಸಕಲ: ಎಲ್ಲಾ; ಸುಭಟ: ಪರಾಕ್ರಮಿ; ಸಹಿತ: ಜೊತೆ; ದಳ: ಸೈನ್ಯ; ನಾಯಕ: ಒಡೆಯ ಬಂದು: ಆಗಮಿಸು; ಹಾನಿ: ನಾಶ; ಪ್ರಕಟ: ಸ್ಪಷ್ಟ; ಕಳಿತ: ಪೂರ್ಣ ಹಣ್ಣಾದ; ಶಿರ: ತಲೆ; ಶಿರೋವಕುಂಠ: ತಲೆಯ ಮೇಲಿನ ಮುಸುಕು; ವೈಮನಸ್ಯ: ಅಪಾರವಾದ ದುಃಖ;
ಪದವಿಂಗಡಣೆ:
ಶಕುನಿ +ಕೃಪ +ಗುರುಸೂನು +ಕೃತವ
ರ್ಮಕ +ಸುಕೇತು +ಸುಶರ್ಮ +ಸಮಸ
ಪ್ತಕರು +ಮಾದ್ರೇಶ್ವರ +ಸುಬಾಹು +ಸುನಂದ +ಚಿತ್ರರಥ
ಸಕಲ +ಸುಭಟರು+ ಸಹಿತ+ ದಳ+ನಾ
ಯಕರು +ಬಂದರು +ಕರ್ಣ+ಹಾನಿ
ಪ್ರಕಟ+ ಕಳಿತ+ ಶಿರೋವಕುಂಠನ+ ವೈಮನಸ್ಯದಲಿ
ಅಚ್ಚರಿ:
(೧) ದುಃಖವನ್ನು ಹೇಳುವ ಪರಿ – ಶಿರೋವಕುಂಠನ ವೈಮನಸ್ಯದಲಿ
(೨) ಸ ಕಾರದ ಪದಗಳು – ಸುಕೇತು, ಸುಶರ್ಮ, ಸಮಸಪ್ತಕರು, ಸುಬಾಹು, ಸುನಂದ