ಪರುಷ ಕಲ್ಲೆಂದಳುಕಿ ಸುರತರು
ಮರನು ತೆಗೆಯೆಂದಮರಧೇನುವ
ಪರರ ಮನೆಯಲಿ ಮಾರಿ ಚಿಂತಾಮಣಿಗೆ ಕೈದುಡುಕಿ
ಹರಳು ತೆಕ್ಕೆಯಿದೆಂಬ ಪಾಪಿಗೆ
ಪರಮಗುರು ನಾನಾದೆನೈ ಮುರ
ಹರನ ಮೈದುನನೆಂದು ಗರ್ವಿಸಿ ಕೆಟ್ಟೆನಕಟೆಂದ (ಭೀಷ್ಮ ಪರ್ವ, ೩ ಸಂಧಿ, ೭೧ ಪದ್ಯ)
ತಾತ್ಪರ್ಯ:
ಪರುಷವನ್ನು ಕಲ್ಲೆಂದು, ಕಲ್ಪವೃಕ್ಷವನ್ನು ಮರವೆಂದೂ ತಿಳಿದು ಉಪೇಕ್ಷಿಸಿ, ಕಾಮಧೇನುವು ಹಸುವೆಂದು ಮಾರರಿಗೆ ಮಾರಿ, ಚಿಂತಾಮಣಿಯನ್ನು ಹಿಡಿದು ಗಾಜೆಂದು ಭಾವಿಸುವ ಪಾಪಿಗೆ ನಾನು ಗುರುವಾದೆ, ಕೃಷ್ಣನ ಮೈದುನನೆಂದು ಗರ್ವಿಸಿ ಕೆಟ್ಟೆ ಎಂದು ಅರ್ಜುನನು ಕಳವಳಗೊಂಡನು.
ಅರ್ಥ:
ಪರುಷ: ಸ್ಪರ್ಷಮಣಿ; ಕಲ್ಲು: ಶಿಲೆ; ಅಳುಕು: ಹೆದರು; ಸುರತರು: ಕಲ್ಪವೃಕ್ಷ; ಮರ: ತರು; ಅಮರದೇನು: ಕಾಮಧೇನು; ಪರ: ಬೇರೆ; ಮನೆ: ಆಲಯ; ಮಾರು: ವಿಕ್ರಯಿಸು; ಚಿಂತಾಮಣಿ: ಸ್ವರ್ಗಲೋಕದ ಒಂದು ದಿವ್ಯ ರತ್ನ; ದುಡುಕು: ಉದ್ಧಟತನ, ಆತುರ; ಹರಳು: ಕಲ್ಲಿನ ಚೂರು; ತೆಕ್ಕೆ: ಗುಂಪು; ಪಾಪಿ: ದುಷ್ಟ; ಪರಮ: ಶ್ರೇಷ್ಠ; ಗುರು: ಆಕಾರ್ಯ; ಮುರಹರ: ಕೃಷ್ಣ; ಮೈದುನ: ತಂಗಿಯ ಗಂಡ; ಗರ್ವ: ಅಹಂಕಾರ; ಕೆಟ್ಟೆ: ಹಾಳಾದೆ; ಏಕತಾ: ಅಯ್ಯೋ;
ಪದವಿಂಗಡಣೆ:
ಪರುಷ +ಕಲ್ಲೆಂದ್ +ಅಳುಕಿ +ಸುರತರು
ಮರನು+ ತೆಗೆಯೆಂದ್ +ಅಮರಧೇನುವ
ಪರರ+ ಮನೆಯಲಿ +ಮಾರಿ +ಚಿಂತಾಮಣಿಗೆ+ ಕೈದುಡುಕಿ
ಹರಳು +ತೆಕ್ಕೆಯಿದ್+ಎಂಬ + ಪಾಪಿಗೆ
ಪರಮಗುರು+ ನಾನಾದೆನೈ + ಮುರ
ಹರನ+ ಮೈದುನನೆಂದು +ಗರ್ವಿಸಿ+ ಕೆಟ್ಟೆನ್ +ಅಕಟೆಂದ
ಅಚ್ಚರಿ:
(೧) ಉಪಮಾನಗಳ ಬಳಕೆ: ಪರುಷ ಕಲ್ಲೆಂದಳುಕಿ, ಸುರತರು ಮರನು ತೆಗೆಯೆಂದಮರಧೇನುವ ಪರರ ಮನೆಯಲಿ ಮಾರಿ, ಚಿಂತಾಮಣಿಗೆ ಕೈದುಡುಕಿ ಹರಳು ತೆಕ್ಕೆಯಿದ್