ಪದ್ಯ ೮: ಕೌರವನ ಮಂತ್ರಿಗಳು ಏನೆಂದು ಚಿಂತಿಸಿದರು?

ಅಕಟ ಕೌರವರಾಯ ರಾಜ
ನ್ಯಕ ಶಿರೋಮಣಿಯಿರಲು ಧರೆ ರಾ
ಜಕ ವಿಹೀನ ವಿಡಂಬವಾಯ್ತೇ ಶಿವ ಶಿವಾಯೆನುತ
ಸಕಲದಳ ನಾಯಕರು ಮಂತ್ರಿ
ಪ್ರಕರ ಚಿಂತಾಂಬುಧಿಯೊಳದ್ದಿರೆ
ಶಕುನಿ ಬಂದನು ಕೌರವೇಂದ್ರನ ರಾಜಮಂದಿರಕೆ (ಸಭಾ ಪರ್ವ, ೧೩ ಸಂಧಿ, ೮ ಪದ್ಯ)

ತಾತ್ಪರ್ಯ:
ದುರ್ಯೋಧನನ ಏಕಾಂಗಿ ಸ್ಥಿತಿಯನ್ನು ನೋಡಿದ ಅವನ ಆಪ್ತ ಸಚಿವರು, ಅಯ್ಯೋ ಇದೇನು ರಾಜಕುಲಶಿರೋಮಣಿಯಾದ ಕೌರವರಾಯನೂ ಇದ್ದೂ ಇಂದು ರಾಜ್ಯವು ರಾಜನಿಲ್ಲದ ಹಾಗಾಗಿದೆ ಎಂದು ಚಿಂತಾಸಾಗರದಲ್ಲಿ ಮುಳುಗಿದರು. ಆಗ ಶಕುನಿಯು ಕೌರವನನ್ನು ನೋಡಲು ದುರ್ಯೋಧನನ ಅರಮನೆಗೆ ಬಂದನು.

ಅರ್ಥ:
ಅಕಟ: ಅಯ್ಯೋ; ರಾಜ: ರಾಜ; ರಾಜ:ಒಡೆಯ; ಶಿರೋಮಣಿ: ಶ್ರೇಷ್ಠ; ಧರೆ: ಭೂಮಿ; ರಾಜನ್ಯಕ: ಅರಸರ ಸಮೂಹ; ವಿಹೀನ: ಇಲ್ಲದೆ; ವಿಡಂಬ: ಸೋಗು, ನಟನೆ, ಆಡಂಬರ; ಶಿವ: ಶಂಕರ; ಸಕಲ: ಎಲ್ಲಾ; ದಳ: ಸೈನ್ಯ; ನಾಯಕ: ಒಡೆಯ; ಮಂತ್ರಿ: ಸಚಿವ; ಪ್ರಕರ: ಗುಂಪು, ಸಮೂಹ; ಚಿಂತೆ: ಯೋಚನೆ; ಅಂಬುಧಿ: ಸಾಗರ; ರಾಜಮಂದಿರ: ಆರಮನೆ; ಅದ್ದು: ತೋಯ್ದು, ಒದ್ದೆಯಾಗು;

ಪದವಿಂಗಡಣೆ:
ಅಕಟ +ಕೌರವರಾಯ +ರಾಜ
ನ್ಯಕ +ಶಿರೋಮಣಿಯಿರಲು+ ಧರೆ+ ರಾ
ಜಕ +ವಿಹೀನ +ವಿಡಂಬವಾಯ್ತೇ +ಶಿವ +ಶಿವಾಯೆನುತ
ಸಕಲ+ದಳ+ ನಾಯಕರು +ಮಂತ್ರಿ
ಪ್ರಕರ +ಚಿಂತಾಂಬುಧಿಯೊಳ್+ಅದ್ದಿರೆ
ಶಕುನಿ+ ಬಂದನು +ಕೌರವೇಂದ್ರನ +ರಾಜಮಂದಿರಕೆ

ಅಚ್ಚರಿ:
(೧) ಚಿಂತೆಯ ತೀವ್ರತೆಯನ್ನು ಹೇಳುವ ಬಗೆ – ಸಕಲದಳ ನಾಯಕರು ಮಂತ್ರಿ ಪ್ರಕರ ಚಿಂತಾಂಬುಧಿಯೊಳದ್ದಿರೆ
(೨) ದುರ್ಯೋಧನನನ್ನು ಹೊಗಳುವ ಪರಿ – ರಾಜನ್ಯಕ ಶಿರೋಮಣಿ