ಪದ್ಯ ೮೨: ಅರ್ಜುನನು ಕೃಷ್ಣನನ್ನು ಹೇಗೆ ವರ್ಣಿಸಿದನು?

ಪರಮಪುಣ್ಯ ಶ್ಲೋಕ ಪಾವನ
ಚರಿತ ಚಾರುವಿಲಾಸ ನಿರ್ಮಲ
ವರ ಕಥನ ಲೀಲಾ ಪ್ರಯುಕ್ತ ಪ್ರಕಟಭುವನಶತ
ನಿರವಯವ ನಿರ್ದ್ವಂದ್ವ ನಿಸ್ಪೃಹ
ನಿರುಪಮಿತ ನಿರ್ಮಾಯ ಕರುಣಾ
ಕರ ಮಹಾತ್ಮ ಮನೋಜವಿಗ್ರಹ ಕರುಣಿಸೆನಗೆಂದ (ಭೀಷ್ಮ ಪರ್ವ, ೩ ಸಂಧಿ, ೮೨ ಪದ್ಯ)

ತಾತ್ಪರ್ಯ:
ನೆನೆದ ಮಾತ್ರದಿಂದ ಪರಮಪುಣ್ಯವನ್ನು ಕೊಡುವವನೇ, ಪಾವನ ಚರಿತ್ರನೇ, ಸುಂದರವಾದ ವಿಲಾಸವುಳ್ಲವನೇ, ನಿರ್ಮಲನೇ, ಲೀಲೆಗಾಗಿ ಅನೇಕ ಭುವನಗಳನ್ನು ಪ್ರಕಟಿಸಿದವನೇ, ಅವಯವಗಳಿಲ್ಲದವನೇ, ದ್ವಂದ್ವಗಳಿಲ್ಲದವನೇ, ನಿಸ್ಪೃಹನೇ, ಸಾಟಿಯಿಲ್ಲದವನೇ, ಮಾಯೆಯನ್ನು ಗೆದ್ದವನೇ, ಕರುಣಾಸಾಗರನೇ, ಶ್ರೇಷ್ಠನೇ, ಸುಂದರ ರೂಪವುಳ್ಳವನೇ ನನ್ನನ್ನು ಕರುಣಿಸು ತಂದೆ ಎಂದು ಅರ್ಜುನನು ಬೇಡಿದನು.

ಅರ್ಥ:
ಪರಮ: ಶ್ರೇಷ್ಠ; ಪುಣ್ಯ: ಶುಭವಾದ; ಶ್ಲೋಕ: ದೇವತಾ ಸ್ತುತಿ; ಪಾವನ: ಮಂಗಳ; ಚರಿತ: ಕಥೆ; ಚಾರು: ಸುಂದರ; ವಿಲಾಸ: ಅಂದ, ಸೊಬಗು; ನಿರ್ಮಲ: ಶುದ್ಧ; ವರ: ಶ್ರೇಷ್ಠ; ಕಥನ: ಹೊಗಳುವುದು; ಪ್ರಯುಕ್ತ: ನಿಮಿತ್ತ; ಪ್ರಕಟ: ತೋರು; ಭುವನ: ಜಗತ್ತು; ಶತ: ನೂರು; ನಿರವಯವ: ಅವಯವಗಳಿಲ್ಲದಿರುವವ; ನಿರ್ದ್ವಂದ್ವ: ದ್ವಂದ್ವಗಳಿಲ್ಲದಿರುವವ; ನಿಸ್ಪೃಹ:ಮುಟ್ಟಲಾಗದ; ನಿರ್ಮಾಯ: ಮಾಯೆಯನ್ನು ಮೀರಿದವನು; ಕರುಣಾಕರ: ದಯಾಸಾಗರ; ಮಹಾತ್ಮ: ಶ್ರೇಷ್ಠ; ಮನೋಜ: ಮನ್ಮಥ; ವಿಗ್ರಹ: ರೂಪ; ಕರುಣಿಸು: ದಯೆತೋರು;

ಪದವಿಂಗಡಣೆ:
ಪರಮಪುಣ್ಯ+ ಶ್ಲೋಕ +ಪಾವನ
ಚರಿತ +ಚಾರುವಿಲಾಸ +ನಿರ್ಮಲ
ವರ +ಕಥನ +ಲೀಲಾ +ಪ್ರಯುಕ್ತ +ಪ್ರಕಟ+ಭುವನ+ಶತ
ನಿರವಯವ +ನಿರ್ದ್ವಂದ್ವ +ನಿಸ್ಪೃಹ
ನಿರುಪಮಿತ +ನಿರ್ಮಾಯ +ಕರುಣಾ
ಕರ+ ಮಹಾತ್ಮ +ಮನೋಜ+ವಿಗ್ರಹ +ಕರುಣಿಸೆನಗೆಂದ

ಅಚ್ಚರಿ:
(೧) ನಿ ಕಾರದ ಪದಗಳು – ನಿರವಯವ ನಿರ್ದ್ವಂದ್ವ ನಿಸ್ಪೃಹ ನಿರುಪಮಿತ ನಿರ್ಮಾಯ