ಮರಳಿ ಶಲ್ಯನನೆಚ್ಚನಾತನ
ಕರದ ವಾಘೆಯ ಕಡಿದನಾ ರಥ
ತುರಗದೊಡಲಲಿ ಹೂಳಿದನು ಹೇರಾಳದಂಬುಗಳ
ಹೊರೆಯ ಹಡಪಿಗ ಚಾಹಿಯರ ಚಾ
ಮರಿಯರನು ನೋಯಿಸಿದ ಗೆಲವಿನ
ಗರುವತನವನು ಬಡ್ಡಿಸಹಿತುಗುಳಿಚಿದನಾ ಪಾರ್ಥ (ಕರ್ಣ ಪರ್ವ, ೨೪ ಸಂಧಿ, ೩೨ ಪದ್ಯ)
ತಾತ್ಪರ್ಯ:
ಅರ್ಜುನನು ತನ್ನ ಬಾಣ ಪ್ರತಾಪವನ್ನು ಮುಂದುವರೆಸುತ್ತಾ, ಶಲ್ಯನನ್ನು ಹೊಡೆದನು, ಅವನ ಕೈಯಲ್ಲಿದ್ದ ವಾಘೆಯನ್ನು ಕತ್ತರಿಸಿ, ರಥದ ಕುರುರೆಗಳ ಮೈಯಲ್ಲಿ ಬಾಣಗಳನ್ನು ನೆಟ್ಟನು. ಅಕ್ಕ ಪಕ್ಕದ ತಾಂಬೂಲ ಛತ್ರ ಚಾಮರಧಾರಿಗಳನ್ನು ನೋಯಿಸಿದನು. ಗೆದ್ದೆನೆಂಬ ಅಹಂಕಾರವನ್ನು ಕರ್ಣನು ಬಡ್ಡಿಸಮೇತ ಉಗುಳಬೇಕಾಯಿತು.
ಅರ್ಥ:
ಮರಳಿ: ಮತ್ತೆ, ಪುನಃ; ಎಚ್ಚು: ಬಾಣಬಿಡು; ಕರ: ಕೈ; ವಾಘೆ: ಲಗಾಮು; ಕಡಿ: ಚೂರಾಗು, ತುಂಡು, ಹೋಳು; ರಥ: ಬಂಡಿ; ತುರಗ: ಕುದುರೆ; ಒಡಲು: ದೇಹ; ಹೂಳು: ಹೂತು ಹಾಕು, ಮುಚ್ಚು; ಹೇರಾಳು: ದೊಡ್ಡ, ವಿಶೇಷ; ಅಂಬು: ಬಾಣ; ಹೊರೆ: ರಕ್ಷಣೆ, ಆಶ್ರಯ; ಹಡಪಿಗ: ಚೀಲವನ್ನಿಟ್ಟುಕೊಂಡಿರುವವನು; ಚಾಹಿ: ಛತ್ರಹಿಡಿದವ; ಚಾಮರಿ: ಚಾಮರ ಬೀಸುವವ; ನೋವು: ಪೆಟ್ಟು; ಗೆಲುವು: ಜಯ; ಗರುವ: ಅಹಂಕಾರ; ಬಡ್ಡಿ:ಸಾಲವಾಗಿ ಕೊಡುವ ಯಾ ಪಡೆಯುವ ಹಣದ ಮೇಲೆ ತೆರುವ ಯಾ ಪಡೆಯುವ ಹೆಚ್ಚಿನ ಹಣ; ಸಹಿತ: ಜೊತೆ; ಉಗುಳಿಸು: ಹೊರಹಾಕು;
ಪದವಿಂಗಡಣೆ:
ಮರಳಿ +ಶಲ್ಯನನ್+ಎಚ್ಚನ್+ಆತನ
ಕರದ+ ವಾಘೆಯ +ಕಡಿದನಾ +ರಥ
ತುರಗದ್+ಒಡಲಲಿ +ಹೂಳಿದನು +ಹೇರಾಳದ್+ಅಂಬುಗಳ
ಹೊರೆಯ +ಹಡಪಿಗ+ ಚಾಹಿಯರ +ಚಾ
ಮರಿಯರನು +ನೋಯಿಸಿದ+ ಗೆಲವಿನ
ಗರುವತನವನು+ ಬಡ್ಡಿ+ಸಹಿತ್+ಉಗುಳಿಚಿದನಾ +ಪಾರ್ಥ
ಅಚ್ಚರಿ:
(೧) ಅಹಂಕಾರವನ್ನು ಮಣ್ಣುಮಾಡಿದನು ಎಂದು ಹೇಳುವ ಪರಿ, ಬಡ್ಡಿ ಪದದ ಬಳಕೆ – ಗೆಲವಿನ ಗರುವತನವನು ಬಡ್ಡಿಸಹಿತುಗುಳಿಚಿದನಾ ಪಾರ್ಥ
(೨) ಜೋಡಿ ಪದಗಳು – ಹೊರೆಯ ಹಡಪಿಗ; ಚಾಹಿಯರ ಚಾಮರಿಯರನು