ಪದ್ಯ ೧೮: ದುರ್ಯೋಧನನು ಎಲ್ಲಿ ನಿಂತಿದ್ದನು?

ಶಕುನಿ ಸಹದೇವನನುಳೂಕನು
ನಕುಲನನು ಕುರುರಾಯನನುಜರು
ಚಕಿತ ಚಾಪನ ಕೆಣಕಿದರು ಪವಮಾನನಂದನನ
ಅಕಟ ಫಲುಗುಣ ಎನುತ ಸಮಸ
ಪ್ತಕರು ಕವಿದರು ನೂರು ಗಜದಲಿ
ಸಕಲದಳಕೊತ್ತಾಗಿ ನಿಂದನು ಕೌರವರಾಯ (ಗದಾ ಪರ್ವ, ೨ ಸಂಧಿ, ೧೮ ಪದ್ಯ)

ತಾತ್ಪರ್ಯ:
ಶಕುನಿಯು ಸಹದೇವನನ್ನು, ಉಲೂಕನು, ನಕುಲನನ್ನು, ಕೌರವನ ತಮ್ಮಂದಿರು ಭೀಮನನ್ನೂ, ಸಂಶಪ್ತಕರು ಅರ್ಜುನನನ್ನೂ ಎದುರಿಸಿದರು. ಇವರ ಹಿಂದೆ ನೂರಾನೆಗಳ ನಡುವೆ ದುರ್ಯೋಧನನು ಬೆಂಬಲವಾಗಿ ನಿಂತನು.

ಅರ್ಥ:
ಅನುಜ: ತಮ್ಮ; ಚಕಿತ: ವಿಸ್ಮಿತನಾದ; ಚಾಪ: ಬಿಲ್ಲು; ಕೆಣಕು: ರೇಗಿಸು; ಪವಮಾನ: ವಾಯು; ನಂದನ: ಮಗ; ಅಕಟ: ಅಯ್ಯೋ; ಸಮಸಪ್ತಕ: ಪ್ರಮಾಣ ಮಾಡಿ ಹೋರಾಟ ಮಾಡುವವರು; ಕವಿ: ಆವರಿಸು; ನೂರು: ಶತ; ಗಜ: ಆನೆ; ಸಕಲ: ಎಲ್ಲ; ದಳ: ಸೈನ್ಯ; ಒತ್ತು: ಮುತ್ತು; ನಿಂದು: ನಿಲ್ಲು; ರಾಯ: ರಾಜ;

ಪದವಿಂಗಡಣೆ:
ಶಕುನಿ +ಸಹದೇವನನ್+ಉಳೂಕನು
ನಕುಲನನು +ಕುರುರಾಯನ್+ಅನುಜರು
ಚಕಿತ +ಚಾಪನ +ಕೆಣಕಿದರು +ಪವಮಾನ+ನಂದನನ
ಅಕಟ +ಫಲುಗುಣ +ಎನುತ +ಸಮಸ
ಪ್ತಕರು +ಕವಿದರು +ನೂರು +ಗಜದಲಿ
ಸಕಲ+ದಳಕೊತ್ತಾಗಿ +ನಿಂದನು +ಕೌರವರಾಯ

ಅಚ್ಚರಿ:
(೧) ಚ ಕಾರದ ಜೋಡಿ ಪದ – ಚಕಿತ ಚಾಪನ
(೨) ಕುರುರಾಯ, ಕೌರವರಾಯ – ದುರ್ಯೋಧನನನ್ನು ಕರೆದ ಪರಿ