ಪದ್ಯ ೧: ಯಾವ ಜನರು ಧರ್ಮಜನನ್ನು ನೋಡಲು ಬಂದರು?

ಕೇಳು ಜನಮೇಜಯ ಧರಿತ್ರೀ
ಪಾಲ ಹಿಮಗಿರಿ ತೊಡಗಿ ಸಾಗರ
ವೇಲೆ ಪರಿಯಂತಖಿಳ ನಗರ ಗ್ರಾಮ ಪುರವರದ
ಮೇಲುವರ್ಣಪ್ರಮುಖವಾ ಚಾಂ
ಡಾಲರವಧಿ ಸಮಸ್ತ ಭೂಜನ
ಜಾಲ ಹಸ್ತಿನಪುರಿಗೆ ಬಂದುದು ಕಂಡುದವನಿಪನ (ಗದಾ ಪರ್ವ, ೧೩ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಹಿಮಗಿರಿಯಿಂದ ಸಮುದ್ರದವರೆಗಿರುವ ಎಲ್ಲಾ ನಗರಗಲ ಗ್ರಾಮಗಲ ಎಲ್ಲಾ ವರ್ಣಗಳ ಎಲ್ಲಾ ಜನರೂ ಹಸ್ತಿನಾಪುರಕ್ಕೆ ಬಂದು ಯುಧಿಷ್ಠಿರನನ್ನು ಕಂಡು ಕಾಣಿಕೆ ನೀಡಿದರು.

ಅರ್ಥ:
ಕೇಳು: ಆಲಿಸು; ಧರಿತ್ರೀ: ಭೂಮಿ; ಧರಿತ್ರೀಪಾಲ: ರಾಜ; ಹಿಮಗಿರಿ: ಹಿಮಾಲಯ; ತೊಡಗು: ಒದಗು; ಸಾಗರ: ಸಮುದ್ರ; ಪರಿಯಂತ: ವರೆಗೂ; ನಗರ: ಪುರ; ಗ್ರಾಮ: ಹಳ್ಳಿ; ಪುರ: ಊರು; ವರ್ಣ: ಬಣ, ಪಂಗಡ; ಪ್ರಮುಖ: ಮುಖ್ಯ; ಅವಧಿ: ಕಾಲ; ಸಮಸ್ತ: ಎಲ್ಲಾ; ಭೂ: ಭೂಮಿ; ಜನ: ಗುಂಪು; ಜಾಲ: ಗುಂಪು; ಬಂದು: ಆಗಮಿಸು; ಅವನಿಪ: ರಾಜ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಹಿಮಗಿರಿ +ತೊಡಗಿ +ಸಾಗರ
ವೇಲೆ +ಪರಿಯಂತ್+ಅಖಿಳ +ನಗರ +ಗ್ರಾಮ +ಪುರವರದ
ಮೇಲುವರ್ಣನ+ಪ್ರಮುಖವಾ+ ಚಾಂ
ಡಾಲರ್+ಅವಧಿ +ಸಮಸ್ತ+ ಭೂಜನ
ಜಾಲ +ಹಸ್ತಿನಪುರಿಗೆ +ಬಂದುದು +ಕಂಡುದ್+ಅವನಿಪನ

ಅಚ್ಚರಿ:
(೧) ಧರಿತ್ರೀಪಾಲ, ಅವನಿಪ – ಸಮಾನಾರ್ಥಕ ಪದ
(೨) ಭಾರತದ ವಿಸ್ತಾರವನ್ನು ಹೇಳುವ ಪರಿ – ಹಿಮಗಿರಿ ತೊಡಗಿ ಸಾಗರವೇಲೆ ಪರಿಯಂತ

ಪದ್ಯ ೨೦: ಗಾಳಿ ಬಿಸಿಲುಗಳೇಕೆ ರಾಣಿಯರ ಮೇಲೆರಗಿದವು?

ಗಾಳಿಯರಿಯದು ಮುನ್ನ ರವಿಕಿರ
ಣಾಳಿ ಸೋಂಕದಪೂರ್ವರೂಪಿನ
ಮೇಲೆ ಬೀಳುವವೆಂಬವೊಲು ಕಡುವಿಸಿಲು ಬಿರುಗಾಳಿ
ತೂಳಿದವು ತರುಣಿಯರನಾವವ
ರಾಲಿಯರಿಯದ ನೆಲೆಯನಾ ಚಾಂ
ಡಾಲಜನಪರಿಯಂತ ಕಂಡುದು ರಾಯ ರಾಣಿಯರ (ಗದಾ ಪರ್ವ, ೧೧ ಸಂಧಿ, ೨೦ ಪದ್ಯ)

ತಾತ್ಪರ್ಯ:
ಈ ರಾಣಿಯರ ರೂಪವನ್ನು ಗಾಳಿ ಬಿಸಿಲುಗಳೇ ಈ ಮೊದಲು ಕಂಡಿರಲಿಲ್ಲ. ಇಂತಹ ಅಪೂರ್ವ ರೂಪವನ್ನ ಆವರಿಸುವೆವು ಎಂದು ಕಡು ಬಿಸಿಲೂ ಬಿರುಗಾಳಿಯೂ ಅವರನ್ನು ಹಿಂಸಿಸಿದವು. ಅವರೆಂದೂ ಕಾಣದ ಜಾಗಕ್ಕೆ ಅವರನ್ನು ದಬ್ಬಿದವು. ಸಮಾಜದ ಸಮಸ್ತರೂ ಅವರನ್ನು ಕಂಡರು.

ಅರ್ಥ:
ಗಾಳಿ: ವಾಯು; ಅರಿ: ತಿಳಿ; ಮುನ್ನ: ಮೊದಲು; ರವಿ: ಸೂರ್ಯ; ಕಿರಣ: ರಶ್ಮಿ, ಬೆಳಕಿನ ಕದಿರು; ಆಳಿ: ಸಾಲು, ಸಮೂಹ; ಸೋಂಕು: ತಾಗು; ಅಪೂರ್ವ: ಹಿಂದೆಂದೂ ಕಾಣದ, ಅಪರೂಪವಾದ; ರೂಪ: ಆಕಾರ, ಚೆಲುವು; ಬೀಳು: ತಗುಲು; ಕಡು: ಬಹಳ; ವಿಸಿಲು: ಬಿಸಿಲು, ತಾಪ; ಬಿರುಗಾಳಿ: ಜೋರಾದ ಗಾಳಿ; ತೂಳು: ಆವೇಶ, ಉನ್ಮಾದ; ತರುಣಿ: ಹೆಣ್ಣು; ನೆಲೆ: ಭೂಮಿ; ಚಾಂಡಾಲ: ದುಷ್ಟ; ಪರಿಯಂತ: ಅಲ್ಲಿಯವರೆಗೂ; ಕಂಡು: ನೋಡು; ರಾಯ: ರಾಜ; ರಾಣಿ: ಅರಸಿ; ಆಲಿ: ಕಣ್ಣು;

ಪದವಿಂಗಡಣೆ:
ಗಾಳಿ+ಅರಿಯದು +ಮುನ್ನ+ ರವಿ+ಕಿರ
ಣಾಳಿ +ಸೋಂಕದ್+ಅಪೂರ್ವ+ರೂಪಿನ
ಮೇಲೆ +ಬೀಳುವವ್+ಎಂಬವೊಲು +ಕಡು+ಬಿಸಿಲು +ಬಿರುಗಾಳಿ
ತೂಳಿದವು +ತರುಣಿಯರನ್+ಆವವರ್
ಆಲಿ + ಅರಿಯದ+ ನೆಲೆಯನ್+ಆ+ ಚಾಂ
ಡಾಲ+ಜನ+ಪರಿಯಂತ +ಕಂಡುದು +ರಾಯ +ರಾಣಿಯರ

ಅಚ್ಚರಿ:
(೧) ಕವಿಯ ಕಲ್ಪನೆಯ ಸೊಬಗು – ಗಾಳಿಯರಿಯದು ಮುನ್ನ ರವಿಕಿರಣಾಳಿ ಸೋಂಕದಪೂರ್ವರೂಪಿನ
ಮೇಲೆ ಬೀಳುವವೆಂಬವೊಲು