ಪದ್ಯ ೬೩: ಪಾಂಡವರ ಆನಂದವು ಹೇಗಿತ್ತು?

ನೃಪನ ಮುದವನು ಭೀಮಸೇನನ
ವಿಪುಳ ಸಂತೋಷವನು ನಕುಲನ
ಚಪಳ ಮದವನು ಪುಳಕವನು ಸಹದೇವನವಯವದ
ದ್ರುಪದಸುತೆಯುತ್ಸವವ ಮುನಿಜನ
ದಪಗತ ಗ್ಲಾನಿಯನು ಪರಿಜನ
ದುಪಚಿತಾನಂದವನು ಬಣ್ಣಿಸಲರಿಯೆ ನಾನೆಂದ (ಅರಣ್ಯ ಪರ್ವ, ೧೩ ಸಂಧಿ, ೬೩ ಪದ್ಯ)

ತಾತ್ಪರ್ಯ:
ಧರ್ಮರಾಯನ ಸಂತೋಷ, ಭೀಮನ ಅತಿಶಯ ಮುದ, ನಕುಲನ ಉಬ್ಬು, ಸಹದೇವನ ರೋಮಾಂಚನ, ದ್ರೌಪದಿಯ ಮನಸ್ಸಿನ ಉತ್ಸವ, ಮುನಿಗಳು ಚಿಂತೆಯನ್ನು ಬಿಟ್ಟು ಸಮಚಿತ್ತವನ್ನು ಪಡೆದುದು, ಪರಿಜನರ ಆನಂದಗಳು ಇವನ್ನು ನಾನು ವರ್ಣಿಸಲಾರೆ.

ಅರ್ಥ:
ನೃಪ: ರಾಜ; ಮುದ: ಸಂತಸ; ವಿಪುಳ: ಬಹಳ, ಹೆಚ್ಚು; ಚಪಲ: ಚುರುಕಾದ; ಮದ: ಸೊಕ್ಕು, ಗರ್ವ; ಪುಳಕ: ಮೈನವಿರೇಳುವಿಕೆ; ಅವಯವ: ಅಂಗ; ಸುತೆ: ಮಗಳು; ಉತ್ಸವ: ಸಂಭ್ರಮ; ಮುನಿ: ಋಷಿ; ಪರಿಜನ: ಸಂಬಂಧಿಕರು; ಅಪಗತ: ದೂರ ಸರಿದ; ಗ್ಲಾನಿ: ಬಳಲಿಕೆ, ದಣಿವು; ಉಪಚಿತ: ಯೋಗ್ಯವಾದ; ಬಣ್ಣಿಸು: ವರ್ಣಿಸು; ಅರಿ: ತಿಳಿ;

ಪದವಿಂಗಡಣೆ:
ನೃಪನ +ಮುದವನು +ಭೀಮಸೇನನ
ವಿಪುಳ +ಸಂತೋಷವನು +ನಕುಲನ
ಚಪಳ +ಮದವನು +ಪುಳಕವನು +ಸಹದೇವನ್+ಅವಯವದ
ದ್ರುಪದಸುತೆ+ಉತ್ಸವವ +ಮುನಿಜನದ್
ಅಪಗತ+ ಗ್ಲಾನಿಯನು +ಪರಿಜನದ್
ಉಪಚಿತ್+ಆನಂದವನು +ಬಣ್ಣಿಸಲರಿಯೆ +ನಾನೆಂದ

ಅಚ್ಚರಿ:
(೧) ಚಪಳ, ವಿಪುಳ – ಪ್ರಾಸ ಪದಗಳು
(೨) ಮುದ, ಸಂತೋಷ – ಸಮನಾರ್ಥಕ ಪದ