ನೆನೆದ ಘಳಿಗೆಯೊಳಾತ ಕಟ್ಟು
ಕ್ಕಿನಲಿ ಸರ್ವಾವಯವವನು ಸಂ
ಜನಿಸಿದನು ಪ್ರತಿರೂಪವನು ಪವಮಾನನಂದನನ
ದನುಜರಿಪುಸಹಿತವರು ಬಂದರು
ಮುನಿಯೊಡನೆ ಬಳಿಕಂಧನೃಪತಿಗೆ
ವಿನಯದಲಿ ಮೆಯ್ಯಿಕ್ಕಿದನು ಭಕ್ತಿಯಲಿ ಯಮಸೂನು (ಗದಾ ಪರ್ವ, ೧೧ ಸಂಧಿ, ೩೭ ಪದ್ಯ)
ತಾತ್ಪರ್ಯ:
ಶ್ರೀಕೃಷ್ಣನು ನೆನೆಸಿದೊಡನೆ ವಿಶ್ವಕರ್ಮನು ಕಟ್ಟುಕ್ಕಿನಿಂದ ಭೀಮನ ಪ್ರತಿಮೆಯನ್ನು ಮಾಡಿಕೊಟ್ಟನು. ಶ್ರೀಕೃಷ್ಣ ವೇದ ವ್ಯಾಸರೊಡನೆ ಪಾಂಡವರು ಧೃತರಾಷ್ಟ್ರನ ಬಳಿಗೆ ಬಂದರು. ಧರ್ಮಜನು ಅವನಿಗೆ ಭಕ್ತಿಯಿಂದ ನಮಸ್ಕರಿಸಿದನು.
ಅರ್ಥ:
ನೆನೆದು: ಜ್ಞಾಪಿಸು; ಘಳಿಗೆ: ಕಾಲ; ಉಕ್ಕು: ಹದಮಾಡಿದ ಕಬ್ಬಿಣ; ಕಟ್ಟು: ರಚಿಸು; ಅವಯವ: ದೇಹ; ಸಂಜನಿಸು: ಉಂಟಾಗು, ಸಂಭವಿಸು; ಪ್ರತಿ: ಸಾಟಿ, ಸಮಾನ; ರೂಪ: ಆಕಾರ; ಪವಮಾನ: ವಾಯು; ನಂದನ: ಮಗ; ಪವಮಾನನಂದನ: ಭೀಮ; ದನುಜರಿಪು: ರಾಕ್ಷಸರ ವೈರಿ (ಕೃಷ್ಣ); ಸಹಿತ: ಜೊತೆ; ಬಂದು: ಆಗಮಿಸು; ಮುನಿ: ಋಷಿ; ಬಳಿಕ: ನಂತರ; ಅಂಧನೃಪ: ಕುರುಡ ರಾಜ (ಧೃತರಾಷ್ಟ್ರ); ವಿನಯ: ಒಳ್ಳೆಯತನ, ಸೌಜನ್ಯ; ಮೈಯ್ಯಿಕ್ಕು: ನಮಸ್ಕರಿಸು; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಸೂನು: ಮಗ;
ಪದವಿಂಗಡಣೆ:
ನೆನೆದ +ಘಳಿಗೆಯೊಳ್+ಆತ +ಕಟ್ಟು
ಕ್ಕಿನಲಿ+ ಸರ್ವ+ಅವಯವವನು +ಸಂ
ಜನಿಸಿದನು +ಪ್ರತಿರೂಪವನು +ಪವಮಾನ+ನಂದನನ
ದನುಜರಿಪು+ಸಹಿತ್+ಅವರು +ಬಂದರು
ಮುನಿಯೊಡನೆ +ಬಳಿಕ್+ಅಂಧ+ನೃಪತಿಗೆ
ವಿನಯದಲಿ +ಮೆಯ್ಯಿಕ್ಕಿದನು +ಭಕ್ತಿಯಲಿ +ಯಮಸೂನು
ಅಚ್ಚರಿ:
(೧) ನಮಸ್ಕರಿಸು ಎಂದು ಹೇಳುವ ಪರಿ – ನೃಪತಿಗೆ ವಿನಯದಲಿ ಮೆಯ್ಯಿಕ್ಕಿದನು ಭಕ್ತಿಯಲಿ