ಕಾದಲೆನ್ನಳವಲ್ಲ ಬಲ ದು
ರ್ಭೇದವಿದು ಶಿವಶಿವಯೆನುತ್ತ ವೃ
ಕೋದರನು ಮರಳಿದನು ದುಗುಡಕೆ ತೆತ್ತು ನಿಜಮುಖವ
ಕೈದೆಗೆಯೆ ರಿಪುಬಲದ ಸುಭಟರು
ಕಾದಿದನು ಕಲಿ ಭೀಮ ಗೆಲಿದನು
ಪೋದನೆಂದರು ಕೂಡೆ ಕೈಗಳ ಹೊಯ್ದು ತಮತಮಗೆ (ದ್ರೋಣ ಪರ್ವ, ೪ ಸಂಧಿ, ೩೨ ಪದ್ಯ)
ತಾತ್ಪರ್ಯ:
ಈ ವ್ಯೂಹದಲ್ಲಿ ಯುದ್ಧಮಾಡುವುದು ನನಗೆ ಅಸಾಧ್ಯ, ಇದನ್ನು ಭೇದಿಸಲು ಆಗುವುದಿಲ್ಲ, ಎಂದು ಚಿಂತಿಸಿ ಭೀಮನು ದುಃಖಿಸಿ ಹಿಂದಿರುಗಿದನು. ಅವನು ಹಿಂದಿರುಗಲು ಕೌರವ ಯೋಧರು ಮಹಾ ಪರಾಕ್ರಮಿ ಭೀಮನು ಕಾದಿ ಗೆದ್ದು ಹೋದನು ಎಂದು ಕೈತಟ್ಟಿ ಕೂಗಿದರು.
ಅರ್ಥ:
ಕಾದು: ಹೋರಾದು; ಅಳವು: ಶಕ್ತಿ; ಬಲ: ಸೈನ್ಯ; ಭೇದ: ಬಿರುಕು, ಸೀಳು; ವೃಕೋದರ: ತೋಳದಂತ ಹೊಟ್ಟೆಯುಳ್ಳವ (ಭೀಮ); ಮರಳು: ಹಿಂದಿರುಗು; ದುಗುಡ: ದುಃಖ; ತೆತ್ತು: ಕೊಡು, ನೀಡು; ಮುಖ: ಆನನ; ಕೈದು: ಆಯುಧ; ರಿಪುಬಲ: ವೈರಿ ಸೈನ್ಯ; ಸುಭಟ: ಪರಾಕ್ರಮಿ; ಕಲಿ: ಶೂರ; ಗೆಲಿದ: ಜಯಿಸಿದ; ಪೋದು: ಹೋಗು; ಕೂಡ: ಜೊತೆ; ಹೊಯ್ದು: ಹೋರಾಡು; ಹೊಡೆ;
ಪದವಿಂಗಡಣೆ:
ಕಾದಲೆನ್ನ್+ಅಳವಲ್ಲ+ ಬಲ+ ದು
ರ್ಭೇದವಿದು+ ಶಿವಶಿವ+ಎನುತ್ತ +ವೃ
ಕೋದರನು +ಮರಳಿದನು +ದುಗುಡಕೆ +ತೆತ್ತು +ನಿಜಮುಖವ
ಕೈದೆಗೆಯೆ +ರಿಪುಬಲದ+ ಸುಭಟರು
ಕಾದಿದನು+ ಕಲಿ+ ಭೀಮ +ಗೆಲಿದನು
ಪೋದನೆಂದರು +ಕೂಡೆ +ಕೈಗಳ+ ಹೊಯ್ದು +ತಮತಮಗೆ
ಅಚ್ಚರಿ:
(೧) ವೃಕೋದರ, ಭೀಮ – ಹೆಸರನ್ನು ಕರೆದ ಪರಿ
(೨) ಹಂಗಿಸುವ ಪರಿ – ಕಾದಿದನು ಕಲಿ ಭೀಮ ಗೆಲಿದನುಪೋದನೆಂದರು ಕೂಡೆ ಕೈಗಳ ಹೊಯ್ದು