ಜಲವನಂಜುಳಿಯಿಂದ ಮೊಗೆದೀಂ
ಟಲು ನೆನೆಯಲಭ್ರದಲಿ ಗುಹ್ಯಕ
ನುಲಿದನೆಲೆ ನಕುಲಾಂಕ ಮಾಣೆನಗುತ್ತರವ ರಚಿಸಿ
ಬಳಿಕ ಸಲಿಲವನೀಂಟು ಮಾತುಗ
ಳೊಳವು ಮರುಳಾಗದಿರೆನಲು ಢಗೆ
ಗಳುಕಿ ಬಳಲಿದು ಮೇಲನಾಲಿಸಿ ಮೀರಿದನು ನುಡಿಯ (ಅರಣ್ಯ ಪರ್ವ, ೨೬ ಸಂಧಿ, ೧೫ ಪದ್ಯ)
ತಾತ್ಪರ್ಯ:
ಕೈಗಳಿಂದ ನೀರನ್ನು ಆಚೆ ಈಚೆಗೊತ್ತಿ, ಬೊಗಸೆಯನ್ನು ತುಂಬಿಕೊಂಡು ನೀರನ್ನು ಕುಡಿಯಲು ತುಟಿಗೆ ತಂದನು. ಆಗ ಗುಪ್ತನಾಗಿದ್ದ ಯಕ್ಷನು ಎಲೆ ನಕುಲ, ಈಗ ನೀರನ್ನು ಕುಡಿಯ ಬೇಡ, ನನಗೆ ಉತ್ತರವನ್ನು ಕೊಟ್ಟು ಬಳಿಕ ನೀರನ್ನು ಕುಡಿ ಎನ್ನಲು, ನಕುಲನು ಆ ಮಾತಿಗೆ ಮರುಳಾಗದೆ ಬಾಯಾರಿಕೆಗೆ ಅಳುಕಿ, ನಕುಲನು ತಲೆಯೆತ್ತಿ ಮಾತನ್ನು ಕೇಳಿ ಅದನ್ನು ಮೀರಿದನು.
ಅರ್ಥ:
ಜಲ: ನೀರು; ಅಂಜುಳಿ: ಬೊಗಸೆ; ಮೊಗೆ: ತುಂಬಿಕೊಳ್ಳು, ಬಾಚು; ಈಂಟು: ಕುಡಿ, ಪಾನಮಾಡು; ನೆನೆ: ಒದ್ದೆಯಾಗು; ಅಭ್ರ: ಆಗಸ; ಗುಹ್ಯಕ:ಯಕ್ಷ; ಉಲಿ: ಧ್ವನಿ, ಮಾತು; ಅಂಕ: ವೀರ, ಯುದ್ಧ; ಮಾಣು: ನಿಲ್ಲಿಸು; ಉತ್ತರ: ಪರಿಹಾರ; ರಚಿಸು: ನಿರ್ಮಿಸು; ಬಳಿಕ: ನಂತರ; ಸಲಿಲ: ನೀರು; ಮಾತು: ನುಡಿ; ಒಳವು: ಪ್ರೀತಿ; ಮರುಳು: ಬುದ್ಧಿಭ್ರಮೆ, ಹುಚ್ಚು; ಢಗೆ: ಬಾಯಾರಿಕೆ; ಅಳುಕು: ಹೆದರು; ಬಳಲು: ಆಯಾಸ; ಆಲಿಸು: ಕೇಳು; ಮೀರು: ಉಲ್ಲಂಘಿಸು; ನುಡಿ: ಮಾತು;
ಪದವಿಂಗಡಣೆ:
ಜಲವನ್+ಅಂಜುಳಿಯಿಂದ +ಮೊಗೆದ್+ಈಂ
ಟಲು +ನೆನೆಯಲ್+ಅಭ್ರದಲಿ +ಗುಹ್ಯಕನ್
ಉಲಿದನ್+ಎಲೆ+ ನಕುಲಾಂಕ +ಮಾಣ್+ಎನಗುತ್ತರವ +ರಚಿಸಿ
ಬಳಿಕ +ಸಲಿಲವನ್+ಈಂಟು +ಮಾತುಗಳ್
ಒಳವು+ ಮರುಳಾಗದಿರ್+ಎನಲು +ಢಗೆಗ್
ಅಳುಕಿ +ಬಳಲಿದು+ ಮೇಲನಾಲಿಸಿ+ ಮೀರಿದನು +ನುಡಿಯ
ಅಚ್ಚರಿ:
(೧) ಜಲ, ಸಲಿಲ – ಸಮನಾರ್ಥಕ ಪದ