ಮುರಿಯೆಸುತ ಮಾದ್ರೇಶ್ವರನ ಹೊ
ಕ್ಕುರುಬಿದನು ಗುರುಸುತನ ಸೂತನ
ನಿರಿದು ಸಮಸಪ್ತಕರ ಸೋಲಿಸಿ ಕೃಪನನಡಹಾಯ್ಸಿ
ತರುಬಿದನು ಕುರುಪತಿಯರ್ನರ್ಜುನ
ನೊರಲಿಸಿದನೀ ಸೈನ್ಯ ಸುಭಟರ
ನೆರವಣಿಗೆ ನಿಪ್ಪಸರದಲಿ ಮುಸುಕಿತು ಧನಂಜಯನ (ಶಲ್ಯ ಪರ್ವ, ೨ ಸಂಧಿ, ೫೩ ಪದ್ಯ)
ತಾತ್ಪರ್ಯ:
ಅರ್ಜುನನು ಶಲ್ಯನ ಬಾಣಗಳನ್ನು ಖಂಡಿಸಿ, ಮುನ್ನುಗ್ಗಿದನು. ಅಶ್ವತ್ಥಾಮನ ಸಾರಥಿಯನ್ನು ಕೊಂದನು. ಸಂಶಪ್ತಕರನ್ನು ಸೋಲಿಸಿ ಕೃಪನನ್ನು ಅಡ್ಡಗಟ್ಟಿ ದುರ್ಯೋಧನನು ಒರಲುವಂತೆ ಮಾಡಿದನು. ಆಗ ಕುರುವೀರರೆಲ್ಲರೂ ರಭಸದಿಂದ ಮುಂದುವರೆದು ಅರ್ಜುನನನ್ನು ಮುತ್ತಿದರು.
ಅರ್ಥ:
ಮುರಿ: ಸೀಳು; ಎಸು: ಬಾಣ ಪ್ರಯೋಗ ಮಾಡು; ಹೊಕ್ಕು: ಸೇರು; ಉರುಬು: ಅತಿಶಯವಾದ ವೇಗ; ಸುತ: ಮಗ; ಸೂತ: ರಥವನ್ನು ನಡೆಸುವವನು, ಸಾರ; ಇರಿ: ಚುಚ್ಚು; ಸಮಸಪ್ತಕ: ಪ್ರಮಾಣ ಮಾಡಿ ಯುದ್ಧ ಮಾಡುವವ; ಸೋಲು: ಪರಾಭವ; ಅಡಹಾಯ್ಸು: ಮಧ್ಯ ಪ್ರವೇಶಿಸು; ತರುಬು: ತಡೆ, ನಿಲ್ಲಿಸು; ಒರಲು: ಅರಚು, ಕೂಗಿಕೊಳ್ಳು; ಸುಭಟ: ಪರಾಕ್ರಮಿ, ಶೂರ; ಎರವಳಿ: ತೊರೆ; ನಿಪ್ಪಸರ: ಅತಿಶಯ, ಹೆಚ್ಚಳ; ಮುಸುಕು: ಆವರಿಸು;
ಪದವಿಂಗಡಣೆ:
ಮುರಿ+ಎಸುತ +ಮಾದ್ರೇಶ್ವರನ+ ಹೊಕ್ಕ್
ಉರುಬಿದನು +ಗುರುಸುತನ+ ಸೂತನನ್
ಇರಿದು +ಸಮಸಪ್ತಕರ+ ಸೋಲಿಸಿ +ಕೃಪನನ್+ಅಡಹಾಯ್ಸಿ
ತರುಬಿದನು +ಕುರುಪತಿಯನ್+ಅರ್ಜುನನ್
ಒರಲಿಸಿದನ್+ಈ+ ಸೈನ್ಯ +ಸುಭಟರನ್
ಎರವಣಿಗೆ +ನಿಪ್ಪಸರದಲಿ +ಮುಸುಕಿತು +ಧನಂಜಯನ
ಅಚ್ಚರಿ:
(೧) ಗುರುಸುತನ ಸೂತನನಿರಿದು – ಸುತ, ಸೂತ – ಪದಗಳ ಬಳಕೆ –