ಪದ್ಯ ೨೬: ದ್ರೌಪದಿಯು ಕೃಷ್ಣನನ್ನು ಹೇಗೆ ಬೇಡಿದಳು?

ಹಿಂದೆ ನಾನಾಪಾಯದಿರುಬಿನ
ಬಂಧನವ ಬಿಡಿಸಿದೆಯೆಲೈ ಗೋ
ವಿಂದ ಶರಣಾನಂದಕಂದ ಮುಕುಂದ ಗುಣವೃಂದ
ಇಂದು ರುದ್ರನು ತಪ್ಪ ಸಾಧಿಸ
ಬಂದರೆಮ್ಮನು ಕಾವರಾರೆಲೆ
ತಂದೆ ನೀನೇ ಗತಿಯೆನುತ ಹಲುಬಿದಳು ಲಲಿತಾಂಗಿ (ಅರಣ್ಯ ಪರ್ವ, ೧೭ ಸಂಧಿ, ೨೬ ಪದ್ಯ)

ತಾತ್ಪರ್ಯ:
ಹಿಂದೆ ಅನೇಕ ಅಪಾಯಗಳಿಗೆ ಸಿಕ್ಕಾಗ ಅಪಾಯದ ಕಟ್ಟನ್ನು ಬಿಡಿಸಿದೆ. ಓ ಗೋವಿಂದ, ಭಕ್ತರ ಆನಂದ ಮೂಲ, ಮುಕುಂದ, ಸಕಲ ಕಲ್ಯಾಣಗುಣ ಪರಿಪೂರ್ಣ, ಈಗ ರುದ್ರಾವತಾರನಾದ ದ್ರೂರ್ವಾಸನು ತಪ್ಪನ್ನು ಸಾಧಿಸಲು ಬಂದರೆ ನಮ್ಮನ್ನು ಕಾಪಾಡುವವರಾರು? ತಂದೆ ಶ್ರೀಕೃಷ್ಣಾ ನೀನೇ ಗತಿ ಎಂದು ದ್ರೌಪದಿಯು ಬೇಡಿದಳು.

ಅರ್ಥ:
ಹಿಂದೆ: ಪೂರ್ವ;ದಲ್ಲಿ; ನಾನಾ: ಹಲವಾರು; ಅಪಾಯ: ತೊಂದರೆ; ಇರುಬು: ಇಕ್ಕಟ್ಟು; ಬಂಧನ: ಪಾಶ; ಬಿಡಿಸು: ಸಡಿಲಗೊಳಿಸು; ಶರಣ: ಭಕ್ತ; ಗುಣ: ಸ್ವಭಾವ; ವೃಂದ: ಗುಂಪು; ರುದ್ರ: ಶಿವನ ಗಣ, ದೂರ್ವಾಸ; ತಪ್ಪು: ಸರಿಯಲ್ಲದ; ಸಾಧಿಸು: ಪಡೆ, ದೊರ ಕಿಸಿಕೊಳ್ಳು; ಬಂದು: ಆಗಮಿಸು; ಕಾವ: ರಕ್ಷಿಸು; ಗತಿ: ಮಾರ್ಗ, ಅವಸ್ಥೆ; ಹಲುಬು: ಬೇಡು; ಲಲಿತಾಂಗಿ: ಬಳ್ಳಿಯಂತೆ ದೇಹವುಳ್ಳವಳು (ದ್ರೌಪದಿ);

ಪದವಿಂಗಡಣೆ:
ಹಿಂದೆ +ನಾನ+ಅಪಾಯದ್+ಇರುಬಿನ
ಬಂಧನವ+ ಬಿಡಿಸಿದೆ+ಎಲೈ +ಗೋ
ವಿಂದ+ ಶರಣಾನಂದ+ಕಂದ+ ಮುಕುಂದ +ಗುಣವೃಂದ
ಇಂದು +ರುದ್ರನು +ತಪ್ಪ +ಸಾಧಿಸ
ಬಂದರ್+ಎಮ್ಮನು +ಕಾವರಾರ್+ಎಲೆ
ತಂದೆ +ನೀನೇ +ಗತಿ+ಎನುತ +ಹಲುಬಿದಳು +ಲಲಿತಾಂಗಿ

ಅಚ್ಚರಿ:
(೧) ಕೃಷ್ಣನನ್ನು ಕರೆದ ಪರಿ – ಗೋವಿಂದ, ಶರಣಾನಂದ, ಕಂದ ಮುಕುಂದ, ಗುಣವೃಂದ, ತಂದೆ