ಅರಿಯರೇ ಮುನಿ ಮುಖ್ಯರೀತನ
ನುರುವ ದೈವವಿದೆಂದು ನೀ ಕ
ಟ್ಟರಿತಗಾರನೆ ರಾಯರಿದೆಲಾ ಸಕಲ ಗುಣಯುತರು
ಕರುಬತನದಲಿ ನೀನಕಟ ತೆರ
ನರಿಯದೆಂಬರೆ ಬಾರೆನುತ ಮುಂ
ಜೆರಗ ಹಿಡಿದೆಳೆದವನ ತಂದನು ಭೂಪಜನ ಸಹಿತ (ಸಭಾ ಪರ್ವ, ೯ ಸಂಧಿ, ೪೫ ಪದ್ಯ)
ತಾತ್ಪರ್ಯ:
ಶಿಶುಪಾಲನೇ, ಇಲ್ಲಿರುವ ಪ್ರಮುಖ ಋಷಿಮುನಿಗಳು ಶೀಕೃಷ್ಣನು ಹೆಚ್ಚಿನ ದೇವರೆಂದು ತಿಳಿದಿಲ್ಲವೇ? ನೀಣು ಅಂತಹ ಮಹಾವೀರನೇ, ಸಕಲಗುಣಗಳನ್ನುಳ್ಳ ರಾಜರು ಸುಮ್ಮನೇ ಇಲ್ಲವೇ? ಹೊಟ್ಟೆಯಕಿಚ್ಚಿನಿಂದ ನೀನು ತಿಳಿಯದೇ ಮಾತನಾಡಬಹುದೇ? ಎನ್ನುತ್ತಾ ಧರ್ಮರಾಜನು ಶಿಶುಪಾಲನ ಉತ್ತರೀಯವನ್ನು ಹಿಡಿದೆಳೆದು ಉಳಿದ ರಾಜರೊಡನೆ ಹಿಂದಕ್ಕೆ ಕರೆತಂದನು.
ಅರ್ಥ:
ಅರಿ: ತಿಳಿ; ಮುನಿ: ಋಷಿ; ಮುಖ್ಯ: ಪ್ರಮುಖ; ಉರು: ಹೆಚ್ಚಾದ, ಶ್ರೇಷ್ಠ; ದೈವ: ಭಗವಮ್ತ; ಕಟ್ಟರಿತಗಾರ: ವಿಶೇಷಜ್ಞಾನವುಳ್ಳ; ರಾಯ: ರಾಜ; ಸಕಲ: ಎಲ್ಲಾ; ಗುಣ: ನಡತೆ, ಸ್ವಭಾವ; ಕರುಬು: ಹೊಟ್ಟೆಕಿಚ್ಚುಪಡು; ಅಕಟ: ಅಯ್ಯೋ; ತೆರ: ಪದ್ಧತಿ; ಅರಿ: ತಿಳಿ; ಎಂಬರೆ: ಹೇಳಿದರೆ; ಬಾ: ಆಗಮಿಸು; ಮುಂಜೆರಗ: ಉತ್ತರೀಯ; ಹಿಡಿದು: ಗ್ರಹಿಸು,ಕೈಕೊಳ್ಳು; ಎಳೆ: ತನ್ನ ಕಡೆಗೆ ಸೆಳೆದುಕೊ; ತಂದನು: ಬರೆಮಾಡು; ಭೂಪ: ರಾಜ; ಜನ: ಸಮುದಾಯ; ಸಹಿತ: ಜೊತೆ;
ಪದವಿಂಗಡಣೆ:
ಅರಿಯರೇ +ಮುನಿ +ಮುಖ್ಯರ್+ಈತನನ್
ಉರುವ +ದೈವವಿದೆಂದು +ನೀ +ಕ
ಟ್ಟರಿತಗಾರನೆ+ ರಾಯರ್+ಇದೆಲಾ +ಸಕಲ+ ಗುಣಯುತರು
ಕರುಬತನದಲಿ+ ನೀನ್+ಅಕಟ +ತೆರನ್
ಅರಿಯದ್+ಎಂಬರೆ+ ಬಾರೆನುತ +ಮುಂ
ಜೆರಗ+ ಹಿಡಿದೆಳೆದವನ+ ತಂದನು+ ಭೂಪಜನ +ಸಹಿತ
ಅಚ್ಚರಿ:
(೧) ಕಟ್ಟರಿತಗಾರ – ಪದದ ಬಳಕೆ