ರಾಹುವೆತ್ತಲು ಲಲಿತ ತಾರಾ
ವ್ಯೂಹವೆತ್ತಲು ದಳ್ಳಿಸುವ ದವ
ದಾಹವೆತ್ತಲು ನೀರಸದ ತೃಣರಾಶಿ ತಾನೆತ್ತ
ಗಾಹುಗತಕವನುಳಿದು ಕಾದುವ
ಡಾಹವಕೆ ಗುರು ಭೀಷ್ಮರಿಗೆ ಸರಿ
ಸಾಹಸಿಕರಾರುಂಟು ಮುರಿದುದು ಪಾಂಡುಸುತಸೇನೆ (ದ್ರೋಣ ಪರ್ವ, ೧೭ ಸಂಧಿ, ೨೪ ಪದ್ಯ)
ತಾತ್ಪರ್ಯ:
ರಾಹುವೆಲ್ಲಿ? ಸುಂದರವಾದ ನಕ್ಷತ್ರಗಳೆಲ್ಲಿ? ಉರಿಯುವ ಕಾಡು ಕಿಚ್ಚೆಲ್ಲಿ, ಒಣಗಿದ ಹುಲ್ಲೆಲ್ಲಿ? ಕಪಟತನವನ್ನು ಬಿಟ್ಟು ಯುದ್ಧಮಾಡಿದರೆ ಭೀಷ್ಮದ್ರೋಣರಿಗೆ ಸರಿಯಾದ ವೀರರುಂಟೇ? ಪಾಂಡವ ಸೈನ್ಯವು ಮುರಿದುಹೋಯಿತು.
ಅರ್ಥ:
ರಾಹು: ಒಂದು ಗ್ರಹದ ಹೆಸರು; ಲಲಿತ: ಸುಂದರ; ತಾರ: ನಕ್ಷತ್ರ; ವ್ಯೂಹ: ಗುಂಪು; ದಳ್ಳಿಸು: ಧಗ್ ಎಂದು ಉರಿ; ಕಿಡಿ: ಬೆಂಕಿ; ದವದಾಹ: ಕಾಡುಕಿಚ್ಚು; ನೀರಸ: ಒಣಗಿದ; ತೃಣ: ಹುಲ್ಲು; ರಾಶಿ: ಗುಂಪು; ಗಾಹು: ಮೋಸ, ವಂಚನೆ; ಉಳಿದು: ಮಿಕ್ಕ; ಕಾದು: ಹೋರಾಡು; ಆಹವ: ಯುದ್ಧ; ಗುರು: ಆಚಾರ್ಯ; ಸರಿ: ಸಮಾನ; ಸಾಹಸಿ: ಪರಾಕ್ರಮಿ; ಮುರಿ: ಸೀಳು; ಸುತ: ಮಕ್ಕಳು; ಸೇನೆ: ಸೈನ್ಯ;
ಪದವಿಂಗಡಣೆ:
ರಾಹುವೆತ್ತಲು +ಲಲಿತ +ತಾರಾ
ವ್ಯೂಹವೆತ್ತಲು +ದಳ್ಳಿಸುವ +ದವ
ದಾಹವೆತ್ತಲು +ನೀರಸದ +ತೃಣರಾಶಿ +ತಾನೆತ್ತ
ಗಾಹುಗತಕವನ್+ಉಳಿದು +ಕಾದುವಡ್
ಆಹವಕೆ +ಗುರು +ಭೀಷ್ಮರಿಗೆ +ಸರಿ
ಸಾಹಸಿಕರ್+ಆರುಂಟು +ಮುರಿದುದು +ಪಾಂಡುಸುತಸೇನೆ
ಅಚ್ಚರಿ:
(೧) ಉಪಮಾನದ ಪ್ರಯೋಗ – ರಾಹುವೆತ್ತಲು ಲಲಿತ ತಾರಾವ್ಯೂಹವೆತ್ತಲು ದಳ್ಳಿಸುವ ದವದಾಹವೆತ್ತಲು ನೀರಸದ ತೃಣರಾಶಿ ತಾನೆತ್ತ