ಧರೆ ನೆನೆದ ದುಷ್ಕೃತವದೇನೆಂ
ದರಸ ಬೆಸಗೊಂಬೈ ನಿರಂತರ
ಸುರಿವ ರುಧಿರಾಸಾರದಲಿ ಕೆಸರೆದ್ದು ಕಳನೊಳಗೆ
ಹರಿವ ಬಿಂಕದ ರಥದ ಗಾಲಿಯ
ಗರುವತನ ಗಾಳಾಯ್ತಲೇ ಖೊ
ಪ್ಪರಿಸಿ ತಗ್ಗಿತು ತೇರು ತಡೆದುದು ಭಟನ ಸಾಹಸವ (ಕರ್ಣ ಪರ್ವ, ೨೬ ಸಂಧಿ, ೧೩ ಪದ್ಯ)
ತಾತ್ಪರ್ಯ:
ಭೂಮಿಯು ಮಾಡಿದ ದುಷ್ಕರ್ಮವೇನೆಂದು ಕೇಳುವೆಯಾ ರಾಜ ಧೃತರಾಷ್ಟ್ರ? ಇಷ್ಟುದಿನ ಎಡೆಬಿಡದೆ ಸುರಿದ ರಕ್ತದ ಧಾರೆಯಿಂದ ರಣರಂಗದಲ್ಲಿ ಕೆಸರೆದ್ದು ಚಲಿಸುತ್ತಿದ್ದ ಕರ್ಣನ ರಥದ ಗಾಲಿಗಳ ಬಿಂಕ ಬಯಲಾಗಿ, ರಥವು ಭೂಮಿಯಲ್ಲಿ ಸಿಕ್ಕುಹಾಕಿಕೊಂಡು ಕರ್ಣನ ಸಾಹಸವನ್ನು ತಡೆಯಿತು.
ಅರ್ಥ:
ಧರೆ: ಭೂಮಿ; ನೆನೆ: ತೋಯು; ದುಷ್ಕೃತ: ಕೆಟ್ಟ ಕೆಲಸ; ಅರಸ: ರಾಜ; ಬೆಸ: ಆದೇಶ, ಕೇಳು; ನಿರಂತರ: ಯಾವಾಗಲು; ಸುರಿ: ವರ್ಷಿಸು; ರುಧಿರ: ರಕ್ತ; ಆಸಾರ: ಜಡಿಮಳೆ, ಮುತ್ತಿಗೆ ಹಾಕುವುದು; ಕೆಸರು: ರಾಡಿ, ಪಂಕ; ಕಳ: ರಣರಂಗ; ಹರಿ: ಪ್ರವಾಹ, ನೀರಿನ ಹರಿವು; ಬಿಂಕ: ಗರ್ವ, ಜಂಬ; ರಥ: ಬಂಡಿ; ಗಾಲಿ: ಚಕ್ರ; ಗರುವ: ಸೊಕ್ಕು; ಗಾಳ: ಕೊಕ್ಕೆ, ಕುತಂತ್ರ; ಖೊಪ್ಪರಿಸು: ಮೀರು, ಹೆಚ್ಚು; ತಗ್ಗು: ಕಡಿಮೆಯಾಗು; ತೇರು: ರಥ; ತಡೆ: ನಿಲ್ಲು; ಭಟ: ಸೈನಿಕ; ಸಾಹಸ: ಪರಾಕ್ರಮ;
ಪದವಿಂಗಡಣೆ:
ಧರೆ +ನೆನೆದ +ದುಷ್ಕೃತವದ್+ಏನೆಂದ್
ಅರಸ+ ಬೆಸಗೊಂಬೈ +ನಿರಂತರ
ಸುರಿವ +ರುಧಿರ+ಆಸಾರದಲಿ +ಕೆಸರೆದ್ದು +ಕಳನೊಳಗೆ
ಹರಿವ+ ಬಿಂಕದ +ರಥದ+ ಗಾಲಿಯ
ಗರುವತನ+ ಗಾಳಾಯ್ತಲೇ+ ಖೊ
ಪ್ಪರಿಸಿ+ ತಗ್ಗಿತು+ ತೇರು +ತಡೆದುದು +ಭಟನ+ ಸಾಹಸವ
ಅಚ್ಚರಿ:
(೧) ತ್ರಿವಳಿ ಪದಗಳು – ಗಾಲಿಯ ಗರುವತನ ಗಾಳಾಯ್ತಲೇ; ತಗ್ಗಿತು ತೇರು ತಡೆದುದು