ಪದ್ಯ ೨೩: ಪಾಂಡು ಯಾರ ಆಶ್ರಮಕ್ಕೆ ಬಂದನು?

ಅರಸ ಕೇಳ್ ಶತಶೃಂಗ ಶೈಲದ
ವರತಪೋಧನರಾಶ್ರಮಕೆ ನಿ
ಮ್ಮರಸ ಬಂದನು ವಂದಿಸಿದನಾ ಪರಮಮುನಿವರರ
ಹರುಷದಲಿ ಜಾಬಾಲಿ ಗಾರ್ಗ್ಯಾಂ
ಗಿರಸ ಗಾಲವ ಗೌತಮಾದ್ಯರು
ಧರಣಿಪನ ಸಂಭಾವಿಸಿದರರ್ಘ್ಯಾಸನಾದಿಯಲಿ (ಆದಿ ಪರ್ವ, ೪ ಸಂಧಿ, ೨೩ ಪದ್ಯ)

ತಾತ್ಪರ್ಯ:
ಪಾಂಡುವು ಕುಂತಿ ಮಾದ್ರಿಯರೊಂದಿಗೆ ಶತಶೃಂಗಪರ್ವತದ ಋಷಿಗಳಾಶ್ರಮಕ್ಕೆ ಹೋಗಿ ಋಷಿಗಳಿಗೆ ನಮಸ್ಕರಿಸಿದನು. ಅಲ್ಲಿದ್ದ ಜಾಬಾಲಿ, ಗಾರ್ಗ್ಯ, ಅಂಗೀರಸ, ಗಾಲವ, ಗೌತಮ ಮೊದಲಾದ ಋಷಿಗಳು ಹರ್ಷದಿಂದ ಅವನನ್ನು ಸ್ವಾಗತಿಸಿ ಆಸನ, ಅರ್ಘ್ಯ, ಮೊದಲಾದವುಗಳಿಂದ ಉಪಚರಿಸಿದರು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಶೈಲ: ಬೆಟ್ಟ; ವರ: ಶ್ರೇಷ್ಠ; ತಪಸ್ಸು: ಧ್ಯಾನ; ತಪೋಧನ: ಶ್ರೇಷ್ಠ ಋಷಿಗಳು; ಆಶ್ರಮ: ಕುಟೀರ; ಬಂದು: ಆಗಮಿಸು; ವಂದಿಸು: ನಮಸ್ಕರಿಸು; ಮುನಿ: ಋಷಿ; ಹರುಷ: ಸಂತಸ; ಧರಣಿಪ: ರಾಜ; ಸಂಭಾವಿಸು: ಗೌರವಿಸು; ಅರ್ಘ್ಯ: ನೀರು; ಆಸನ: ಕುಳಿತುಕೊಳ್ಳುವ ಜಾಗ; ಆದಿ: ಮುಂತಾದ;

ಪದವಿಂಗಡಣೆ:
ಅರಸ +ಕೇಳ್ +ಶತಶೃಂಗ +ಶೈಲದ
ವರತಪೋಧನರ+ ಆಶ್ರಮಕೆ+ ನಿಮ್ಮ್
ಅರಸ +ಬಂದನು +ವಂದಿಸಿದನಾ+ ಪರಮ+ಮುನಿವರರ
ಹರುಷದಲಿ +ಜಾಬಾಲಿ +ಗಾರ್ಗ್ಯ+ಅಂ
ಗಿರಸ +ಗಾಲವ +ಗೌತಮಾದ್ಯರು
ಧರಣಿಪನ+ ಸಂಭಾವಿಸಿದರ್+ಅರ್ಘ್ಯ+ಆಸನಾದಿಯಲಿ

ಅಚ್ಚರಿ:
(೧) ಅರಸ, ಧರಣಿಪ – ಸಮಾನಾರ್ಥಕ ಪದ
(೨) ಮುನಿಗಳ ಹೆಸರು – ಜಾಬಾಲಿ, ಗಾರ್ಗ್ಯ, ಅಂಗಿರಸ, ಗಾಲವ, ಗೌತಮ

ಪದ್ಯ ೨: ಧರ್ಮಜನನ್ನು ನೋಡಲು ಯಾವ ಋಷಿಗಳು ಬಂದರು?

ಚ್ಯವನ ಮುದ್ಗಲ ಕಣ್ವ ಕಠ ಭಾ
ರ್ಗವ ಭರದ್ವಾಜಾಂಗಿರಸ ಗಾ
ಲವ ಪುಲಸ್ತ್ಯ ರುಮಣ್ವ ಗೌತಮ ಯಾಜ್ಞವಲ್ಕ್ಯಮುನಿ
ಧ್ರುವ ವಿಭಾಂಡಕ ಗಾರ್ಗ್ಯ ಘಟಸಂ
ಭವ ಮೃಕಂಡುಸುತಾದಿ ಭೂಮಿ
ಪ್ರವರ ಮುನಿಗಳು ಬಂದು ಕಂಡರು ಧರ್ಮನಂದನನ (ಗದಾ ಪರ್ವ, ೧೩ ಸಂಧಿ, ೨ ಪದ್ಯ)

ತಾತ್ಪರ್ಯ:
ಚ್ಯವನ, ಮುದ್ಗಲ, ಕಣ್ವ, ಕಠ, ಭಾರ್ಗವ, ಭಾರದ್ವಾಜ, ಅಂಗಿರಸ, ಗಾಲವ, ಪುಲಸ್ತ್ಯ, ರುಮಣ್ವ, ಗೌತಮ, ಯಾಜ್ಞವಲ್ಕ್ಯ, ಧ್ರುವ, ವಿಭಾಂಡಕ, ಗಾರ್ಗ್ಯ, ಅಗಸ್ತ್ಯ, ಮಾರ್ಕಂಡೇಯನೇ ಮೊದಲಾದ ಬ್ರಹ್ಮರ್ಷಿಗಳು ಬಂದು ಧರ್ಮಪುತ್ರನನ್ನು ಕಂಡು ಆಶೀರ್ವದಿಸಿದರು.

ಅರ್ಥ:
ಆದಿ: ಮುಂತಾದ; ಭೂಮಿ: ಧರಿತ್ರೀ; ಪ್ರವರ: ಪ್ರಧಾನ ವ್ಯಕ್ತಿ; ಮುನಿ: ಋಷಿ; ಬಂದು: ಆಗಮಿಸು; ಕಂಡು: ನೋಡು; ನಂದನ: ಮಗ; ಸುತ: ಮಗ;

ಪದವಿಂಗಡಣೆ:
ಚ್ಯವನ +ಮುದ್ಗಲ+ ಕಣ್ವ +ಕಠ +ಭಾ
ರ್ಗವ +ಭರದ್ವಾಜ+ಅಂಗಿರಸ +ಗಾ
ಲವ +ಪುಲಸ್ತ್ಯ+ ರುಮಣ್ವ+ ಗೌತಮ +ಯಾಜ್ಞವಲ್ಕ್ಯ+ಮುನಿ
ಧ್ರುವ +ವಿಭಾಂಡಕ +ಗಾರ್ಗ್ಯ +ಘಟಸಂ
ಭವ +ಮೃಕಂಡುಸುತ+ಆದಿ +ಭೂಮಿ
ಪ್ರವರ +ಮುನಿಗಳು +ಬಂದು +ಕಂಡರು +ಧರ್ಮನಂದನನ

ಅಚ್ಚರಿ:
(೧) ೧೭ ಮುನಿಗಳ ಹೆಸರನ್ನು ಹೇಳುವ ಪದ್ಯ

ಪದ್ಯ ೧೪: ಕೃಷ್ಣನು ಯಾವ ಮುನಿಗಳನ್ನು ಕಂಡನು?

ಮರಳಿದಳು ತರಳಾಕ್ಷಿ ಮುರರಿಪು
ಬರುತಲಾ ಬಟ್ಟೆಯಲಿ ಕಂಡನು
ವರ ಭರದ್ವಾಜಾಖ್ಯ ಗೌತಮ ಕಣ್ವಮುನಿವರರ
ಉರಗಮಾಲಿ ಮತಂಗ ಗಾರ್ಗ್ಯಾಂ
ಗಿರಸ ನಾರದ ಶುಕ ಪರಾಶರ
ಪರಶುರಾಮ ಶ್ವೇತಕೇತು ಪ್ರಮುಖ ಮುನಿವರರ (ಉದ್ಯೋಗ ಪರ್ವ, ೭ ಸಂಧಿ, ೧೪ ಪದ್ಯ)

ತಾತ್ಪರ್ಯ:
ಚಂಚಲಕಣ್ಣುಳ್ಳವಳಾದ ದ್ರೌಪದಿಯು ಕೃಷ್ಣನ ಅಭಯವನ್ನು ಪಡೆದು ಮರಳಿದಳು. ಕೃಷ್ಣನು ತನ್ನ ಮಾರ್ಗದಲ್ಲಿ ಬರುತ್ತಾ ಶ್ರೇಷ್ಠರಾದ ಭರದ್ವಾಜ, ಗೌತಮ, ಕಣ್ವ, ಉರಗಮಾಲಿ, ಮತಂಗ, ಗಾರ್ಗ್ಯ, ಅಂಗಿರಸ, ನಾರದ, ಶುಕ, ಪರಾಶರ, ಪರಶುರಾಮ, ಶ್ವೇತಕೇತು ಮುನಿಗಳನ್ನು ಕಂಡನು.

ಅರ್ಥ:
ಮರಳು: ಹಿಂದಿರುಗು; ತರಳ:ಚಂಚಲವಾದ; ಅಕ್ಷಿ: ಕಣ್ಣು; ರಿಪು: ವೈರಿ; ಬಟ್ಟೆ: ಹಾದಿ, ಮಾರ್ಗ; ಬರುತ: ಆಗಮಿಸು; ಕಂಡನು: ನೋಡಿದನು; ಪ್ರಮುಖ: ಮುಖ್ಯ; ಮುನಿ: ಋಷಿ; ವರ: ಶ್ರೇಷ್ಠ; ಆಖ್ಯ: ಹೆಸರು

ಪದವಿಂಗಡಣೆ:
ಮರಳಿದಳು +ತರಳಾಕ್ಷಿ +ಮುರರಿಪು
ಬರುತಲಾ +ಬಟ್ಟೆಯಲಿ+ ಕಂಡನು
ವರ +ಭರದ್ವಾಜ+ಆಖ್ಯ+ ಗೌತಮ+ ಕಣ್ವಮುನಿವರರ
ಉರಗಮಾಲಿ +ಮತಂಗ +ಗಾರ್ಗ್ಯ+ಅಂ
ಗಿರಸ+ ನಾರದ +ಶುಕ +ಪರಾಶರ
ಪರಶುರಾಮ +ಶ್ವೇತಕೇತು+ ಪ್ರಮುಖ +ಮುನಿವರರ

ಅಚ್ಚರಿ:
(೧) ಮುನಿಗಳ ಹೆಸರುಳ್ಳ ಪದ್ಯ: ಭರದ್ವಾಜ, ಗೌತಮ, ಕಣ್ವ, ಉರಗಮಾಲಿ, ಮತಂಗ, ಗಾರ್ಗ್ಯ, ಅಂಗಿರಸ, ನಾರದ, ಶುಕ, ಪರಾಶರ, ಪರಶುರಾಮ, ಶ್ವೇತಕೇತು
(೨) ದ್ರೌಪದಿಯನ್ನು ತರಳಾಕ್ಷಿ ಎಂದು ಕರೆದಿರುವುದು