ದೇವ ರವಿಯಸ್ತಮಿಸಿದನು ನೀ
ವಾವುದುಚಿತವ ಕಂಡಿರೆನೆ ನಿನ
ಗಾವ ಭಯ ಬೇಡಾಡಬಾರದು ತೊಡು ಮಹಾಶರವ
ಈ ವಿರೋಧಿಯ ಕೆಡಹು ಸೂರ್ಯನ
ನಾವು ತೋರಿಸಿ ಕೊಡುವೆವೆನೆ ಗಾಂ
ಡೀವದಲಿ ಹೂಡಿದನು ಫಲುಗುಣ ಪಾಶುಪತಶರವ (ದ್ರೋಣ ಪರ್ವ, ೧೪ ಸಂಧಿ, ೩೮ ಪದ್ಯ)
ತಾತ್ಪರ್ಯ:
ದೇವ, ಸೂರ್ಯನು ಮುಳುಗಿದನು, ಈಗ ಅವನನ್ನು ಕೊಲ್ಲುವುದರಲ್ಲಿ ಯಾವ ಔಚಿತ್ಯವನ್ನು ಕಂಡಿರಿ ಎಂದು ಅರ್ಜುನನು ಹೇಳಲು, ಕೃಷ್ಣನು ಅರ್ಜುನನಿಗೆ ಅಭಯವನ್ನು ನೀಡುತ್ತಾ, ಹೆದರಬೇಡ, ಹೇಳುವ ಹಾಗಿಲ್ಲ, ನೀನು ಮಹಾಸ್ತ್ರದಿಂದ ವೈರಿಯ ತಲೆಯನ್ನು ಕೆಡಹು, ನಾವು ನಿನಗೆ ಸೂರ್ಯನನ್ನು ತೋರಿಸುತ್ತೇವೆ ಎಂದು ಹೇಳಲು, ಅರ್ಜುನನು ಗಾಂಡೀವದಲ್ಲಿ ಪಾಶುಪತಾಸ್ತ್ರವನ್ನು ಹೂಡಿದನು.
ಅರ್ಥ:
ದೇವ: ಭಗವಂತ; ರವಿ: ಸೂರ್ಯ; ಅಸ್ತಮಿಸಿದ: ಮುಳುಗಿಹೋದ; ಉಚಿತ: ಸರಿಯಾದುದು; ಕಂಡು: ನೋಡು; ಭಯ: ಅಂಜಿಕೆ; ಬೇಡ: ಸಲ್ಲದು; ತೊಡು: ಹೂಡು; ಶರ: ಬಾಣ; ವಿರೋಧಿ: ವೈರಿ; ಕೆಡಹು: ಕೊನೆಗಾಣಿಸು, ಬೀಳಿಸು; ಸೂರ್ಯ: ರವಿ; ತೋರು: ಗೋಚರ; ಹೂಡು: ತೊಡು; ಶರ: ಬಾಣ;
ಪದವಿಂಗಡಣೆ:
ದೇವ +ರವಿ+ಅಸ್ತಮಿಸಿದನು +ನೀವ್
ಆವುದ್+ಉಚಿತವ +ಕಂಡಿರ್+ಎನೆ+ ನಿನಗ್
ಆವ +ಭಯ +ಬೇಡಾಡಬಾರದು +ತೊಡು +ಮಹಾಶರವ
ಈ +ವಿರೋಧಿಯ +ಕೆಡಹು +ಸೂರ್ಯನ
ನಾವು +ತೋರಿಸಿ+ ಕೊಡುವೆವ್+ಎನೆ +ಗಾಂ
ಡೀವದಲಿ +ಹೂಡಿದನು +ಫಲುಗುಣ +ಪಾಶುಪತ+ಶರವ
ಅಚ್ಚರಿ:
(೧) ಕೃಷ್ಣನ ಅಭಯ – ಈ ವಿರೋಧಿಯ ಕೆಡಹು ಸೂರ್ಯನ ನಾವು ತೋರಿಸಿ ಕೊಡುವೆವ್
(೨) ಮಹಾಶರವ, ಪಾಶುಪತಶರವ – ಪದಗಳ ಬಳಕೆ