ಅರಸ ಕೇಳಾ ದಾನವನ ತನು
ಬಿರಿದು ಬಿದ್ದುದು ಬಾತ ಹೆಣನು
ಬ್ಬರದ ಹೊಲಸಿದಗವಲು ಕವಿದುದು ಕೂಡೆ ವನದೊಳಗೆ
ಧರಣಿಪತಿ ತದ್ಬದರಿಕಾಶ್ರಮ
ವರ ತಪೋವನದಿಂದ ತೆಂಕಲು
ತಿರುಗಿ ಬಂದನು ಸಾರಿದನು ವೃಷಪರ್ವನಾಶ್ರಮವ (ಅರಣ್ಯ ಪರ್ವ, ೧೨ ಸಂಧಿ, ೧೨ ಪದ್ಯ)
ತಾತ್ಪರ್ಯ:
ಜನಮೇಜಯ ರಾಜ ಕೇಳು, ಜಟಾಸುರನ ದೇಹವು ಬಿರಿದು ಬಿದ್ದು ಬಾತುಕೊಂಡಿತು. ಆ ದೇಹದ ಹೊಲಸಿನ ದುರ್ನಾತವು ವನದಲ್ಲೆಲ್ಲಾ ವ್ಯಾಪಿಸಿತು. ಧರ್ಮಜನು ಬದರಿಕ್ರಾಶ್ರಮದಿಂದ ದಕ್ಷಿಣಕ್ಕೆ ತಿರುಗಿ ವೃಷಪರ್ವನ ಆಶ್ರಮಕ್ಕೆ ಬಂದನು.
ಅರ್ಥ:
ಅರಸ: ರಾಜ; ಕೇಳು: ಆಲಿಸು; ದಾನವ: ರಾಕ್ಷಸ; ತನು: ದೇಹ; ಬಿರಿದು: ಸೀಳು; ಬಿದ್ದು: ಕೆಳಗೆ ಕಳಚು; ಬಾತು: ಊತ; ಹೆಣ: ಶವ; ಉಬ್ಬರ: ಅತಿಶಯ; ಹೊಲಸು: ಕೊಳೆ, ಕೊಳಕು; ಗವಲು: ವಾಸನೆ; ಕವಿ: ಆವರಿಸು; ಕೂಡು: ಜೊತೆ; ವನ: ಕಾಡು; ಧರಣಿಪತಿ: ರಾಜ; ವರ: ಶ್ರೇಷ್ಠ; ತಪೋವನ: ತಪಸ್ಸು ಮಾಡುವ ಜಾಗ; ತೆಂಕಲು: ದಕ್ಷಿಣ; ತಿರುಗು: ಹೊರಳು, ಸಂಚರಿಸು; ಬಂದು: ಆಗಮಿಸು; ಸಾರು: ಸಮೀಪಿಸು; ಆಶ್ರಮ: ಕುಟೀರ;
ಪದವಿಂಗಡಣೆ:
ಅರಸ +ಕೇಳ್+ಆ+ ದಾನವನ+ ತನು
ಬಿರಿದು +ಬಿದ್ದುದು +ಬಾತ +ಹೆಣನ್
ಉಬ್ಬರದ +ಹೊಲಸಿದ+ ಗವಲು +ಕವಿದುದು +ಕೂಡೆ+ ವನದೊಳಗೆ
ಧರಣಿಪತಿ+ ತದ್+ಬದರಿಕಾಶ್ರಮ
ವರ +ತಪೋವನದಿಂದ +ತೆಂಕಲು
ತಿರುಗಿ+ ಬಂದನು +ಸಾರಿದನು +ವೃಷಪರ್ವನ್+ಆಶ್ರಮವ
ಅಚ್ಚರಿ:
(೧) ಅರಸ, ಧರಣಿಪತಿ – ಸಮನಾರ್ಥಕ ಪದ