ಪದ್ಯ ೧೨: ಧರ್ಮಜನು ಯಾವ ಆಶ್ರಮವನ್ನು ತಲುಪಿದನು?

ಅರಸ ಕೇಳಾ ದಾನವನ ತನು
ಬಿರಿದು ಬಿದ್ದುದು ಬಾತ ಹೆಣನು
ಬ್ಬರದ ಹೊಲಸಿದಗವಲು ಕವಿದುದು ಕೂಡೆ ವನದೊಳಗೆ
ಧರಣಿಪತಿ ತದ್ಬದರಿಕಾಶ್ರಮ
ವರ ತಪೋವನದಿಂದ ತೆಂಕಲು
ತಿರುಗಿ ಬಂದನು ಸಾರಿದನು ವೃಷಪರ್ವನಾಶ್ರಮವ (ಅರಣ್ಯ ಪರ್ವ, ೧೨ ಸಂಧಿ, ೧೨ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಜಟಾಸುರನ ದೇಹವು ಬಿರಿದು ಬಿದ್ದು ಬಾತುಕೊಂಡಿತು. ಆ ದೇಹದ ಹೊಲಸಿನ ದುರ್ನಾತವು ವನದಲ್ಲೆಲ್ಲಾ ವ್ಯಾಪಿಸಿತು. ಧರ್ಮಜನು ಬದರಿಕ್ರಾಶ್ರಮದಿಂದ ದಕ್ಷಿಣಕ್ಕೆ ತಿರುಗಿ ವೃಷಪರ್ವನ ಆಶ್ರಮಕ್ಕೆ ಬಂದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ದಾನವ: ರಾಕ್ಷಸ; ತನು: ದೇಹ; ಬಿರಿದು: ಸೀಳು; ಬಿದ್ದು: ಕೆಳಗೆ ಕಳಚು; ಬಾತು: ಊತ; ಹೆಣ: ಶವ; ಉಬ್ಬರ: ಅತಿಶಯ; ಹೊಲಸು: ಕೊಳೆ, ಕೊಳಕು; ಗವಲು: ವಾಸನೆ; ಕವಿ: ಆವರಿಸು; ಕೂಡು: ಜೊತೆ; ವನ: ಕಾಡು; ಧರಣಿಪತಿ: ರಾಜ; ವರ: ಶ್ರೇಷ್ಠ; ತಪೋವನ: ತಪಸ್ಸು ಮಾಡುವ ಜಾಗ; ತೆಂಕಲು: ದಕ್ಷಿಣ; ತಿರುಗು: ಹೊರಳು, ಸಂಚರಿಸು; ಬಂದು: ಆಗಮಿಸು; ಸಾರು: ಸಮೀಪಿಸು; ಆಶ್ರಮ: ಕುಟೀರ;

ಪದವಿಂಗಡಣೆ:
ಅರಸ +ಕೇಳ್+ಆ+ ದಾನವನ+ ತನು
ಬಿರಿದು +ಬಿದ್ದುದು +ಬಾತ +ಹೆಣನ್
ಉಬ್ಬರದ +ಹೊಲಸಿದ+ ಗವಲು +ಕವಿದುದು +ಕೂಡೆ+ ವನದೊಳಗೆ
ಧರಣಿಪತಿ+ ತದ್+ಬದರಿಕಾಶ್ರಮ
ವರ +ತಪೋವನದಿಂದ +ತೆಂಕಲು
ತಿರುಗಿ+ ಬಂದನು +ಸಾರಿದನು +ವೃಷಪರ್ವನ್+ಆಶ್ರಮವ

ಅಚ್ಚರಿ:
(೧) ಅರಸ, ಧರಣಿಪತಿ – ಸಮನಾರ್ಥಕ ಪದ