ಜಗದುಸುರು ಪಸರಿಸಿತು ಹರುಷದ
ಹೊಗರು ಮಸಗಿತು ರಿಪುನೃಪರ ನಿ
ನ್ನಗಡು ಮಗನುತ್ಸಾಹವದ್ದುದು ಖೇದಪಂಕದಲಿ
ಹೊಗೆವ ಮೋರೆಯ ಕಯ್ಯಗಲ್ಲದ
ಬಿಗಿದ ಬೆರಗಿನ ಖತಿಯೊಳುಸುರುವ
ನಗೆಯೊಳಶ್ವತ್ಥಾಮನಿದ್ದನು ಮೊಗದ ಮೋನದಲಿ (ದ್ರೋಣ ಪರ್ವ, ೧೯ ಸಂಧಿ, ೫೧ ಪದ್ಯ)
ತಾತ್ಪರ್ಯ:
ಜಗತ್ತಿಗೆ ಪ್ರಾಣವು ಬಂದಿತು. ಪಾಂಡವರ ಸಂತೋಷ ಹಬ್ಬಿ ಹೆಚ್ಚಿತು. ನಿನ್ನ ಸ್ವೇಚ್ಛಾಚಾರಿಯಾದ ಮಗನ ಉತ್ಸಾಹವು ದುಃಖದ ಕೆಸರಿನಲ್ಲಿ ಮುಳುಗಿತು. ಮುಖದಲ್ಲಿ ಹೊಗೆ ಮಸಗುತ್ತಿರಲು, ಆಶ್ಚರ್ಯದಲ್ಲಿ ಮುಳುಗಿ, ಗಲ್ಲದ ಮೇಲೆ ಕೈಯಿಟ್ಟು ಕೋಪಾತಿರೇಕದಿಂದ ನಕ್ಕ ಅಶ್ವತ್ಥಾಮನು ಮೌನದಿಂದಿದ್ದನು.
ಅರ್ಥ:
ಜಗ: ಪ್ರಪಂಚ; ಉಸುರು: ಜೀವ; ಪಸರಿಸು: ಹರಡು; ಹರುಷ: ಸಂತಸ; ಹೊಗರು: ಕಾಂತಿ, ಪ್ರಕಾಶ; ಮಸಗು: ಬಾಡು; ರಿಪು: ವೈರಿ; ನೃಪ: ರಾಜ; ಅಗಡು: ತುಂಟತನ; ಮಗ: ಸುತ; ಉತ್ಸಾಹ: ಹುರುಪು; ಅದ್ದು: ಮುಳುಗಿಸು; ಖೇದ: ದುಃಖ; ಪಂಕ: ಕೆಸರು; ಹೊಗೆ: ಧೂಮ; ಮೋರೆ: ಮುಖ; ಕಯ್ಯ: ಕೈ, ಹಸ್ತ; ಗಲ್ಲ: ಕೆನ್ನೆ; ಬಿಗಿ: ಗಟ್ಟಿ; ಬೆರಗು: ವಿಸ್ಮಯ, ಸೋಜಿಗ; ಖತಿ: ಕೋಪ; ನಗೆ: ಸಂತಸ, ಹರ್ಷ; ಮೊಗ: ಮುಖ; ಮೋನ: ಮೌನ;
ಪದವಿಂಗಡಣೆ:
ಜಗದ್+ಉಸುರು+ ಪಸರಿಸಿತು +ಹರುಷದ
ಹೊಗರು +ಮಸಗಿತು +ರಿಪುನೃಪರ +ನಿನ್ನ್
ಅಗಡು +ಮಗನ್+ಉತ್ಸಾಹವ್+ಅದ್ದುದು +ಖೇದ+ಪಂಕದಲಿ
ಹೊಗೆವ+ ಮೋರೆಯ +ಕಯ್ಯ+ಗಲ್ಲದ
ಬಿಗಿದ +ಬೆರಗಿನ+ ಖತಿಯೊಳ್+ಉಸುರುವ
ನಗೆಯೊಳ್+ಅಶ್ವತ್ಥಾಮನ್+ಇದ್ದನು +ಮೊಗದ +ಮೋನದಲಿ
ಅಚ್ಚರಿ:
(೧) ರೂಪಕದ ಪ್ರಯೋಗ – ನಿನ್ನಗಡು ಮಗನುತ್ಸಾಹವದ್ದುದು ಖೇದಪಂಕದಲಿ