ಮುಳಿದು ಕಬ್ಬಿನ ತೋಟದಲಿ ನರಿ
ಹುಲಿಯವೋಲ್ ಗರ್ಜಿಸಿತು ಗಡ ಹೆ
ಕ್ಕಳದ ಹೇರಾಳದಲಿ ಹೆಣಗಿದೆ ಬಾಲವೃದ್ಧರಲಿ
ಬಲುಹು ನಿನಗುಂಟಾದಡಿತ್ತಲು
ಫಲುಗುಣನ ಕೂಡಾಡು ನಡೆ ಮರು
ವಲಗೆಯನು ಭೀಮನಲಿ ಬೇಡಿನ್ನೆಂದನಾ ಶಲ್ಯ (ಕರ್ಣ ಪರ್ವ, ೧೩ ಸಂಧಿ, ೪೪ ಪದ್ಯ)
ತಾತ್ಪರ್ಯ:
ಕಬ್ಬಿನ ಗದ್ದೆಯಲ್ಲಿ ನರಿಯು ಸಿಂಹದಂತೆ ಗರ್ಜಿಸಿದಂತೆ, ನೀನು ಹುಡುಗರೊಡನೆ ಮುದುಕರೊಡನೆ ಹೋರಾಡಿದೆ. ನೀನು ನಿಜವಾಗಲೂ ಶಕ್ತನಾದರೆ, ಇತ್ತ ಬಂದು ಅರ್ಜುನನೊಡನೆ ಹೋರಾಡು, ಮತ್ತೊಂದು ಕಾಳಗವನ್ನು ಭೀಮನಲ್ಲಿ ಕೇಳು ಎಂದು ಶಲ್ಯನು ಕರ್ಣನಿಗೆ ಹೇಳಿದನು.
ಅರ್ಥ:
ಮುಳಿ: ಸಿಟ್ಟು, ಕೋಪ; ಕಬ್ಬು: ಇಕ್ಷುದಂಡ; ತೋಟ: ಗದ್ದೆ; ಹುಲಿ: ವ್ಯಾಘ್ರ; ಗರ್ಜಿಸು: ಜೋರಾಗಿ ಕೂಗು; ಗಡ: ಅಲ್ಲವೆ; ಹೆಕ್ಕಳ: ಹೆಚ್ಚಳ, ಅತಿಶಯ; ಹೇರಾಳ: ದೊಡ್ಡ, ವಿಶೇಷ; ಹೆಣಗು: ಹೋರಾಡು, ಕಾಳಗ ಮಾಡು; ಬಾಲ: ಮಕ್ಕಳು; ವೃದ್ಧ: ಮುಪ್ಪು, ಜರ; ಬಲುಹು: ಬಲ, ಶಕ್ತಿ; ಫಲುಗುಣ: ಅರ್ಜುನ; ಕೂಡ: ಜೊತೆ; ಆಡು: ಕಾದಾಡು; ಮರುವಲಗೆ: ಮತ್ತೆ ಆಡುವ; ಬೇಡು: ಕೇಳು;
ಪದವಿಂಗಡಣೆ:
ಮುಳಿದು +ಕಬ್ಬಿನ +ತೋಟದಲಿ +ನರಿ
ಹುಲಿಯವೋಲ್ +ಗರ್ಜಿಸಿತು +ಗಡ +ಹೆ
ಕ್ಕಳದ +ಹೇರಾಳದಲಿ+ ಹೆಣಗಿದೆ+ ಬಾಲ+ವೃದ್ಧರಲಿ
ಬಲುಹು +ನಿನಗುಂಟ್+ಆದಡ್+ಇತ್ತಲು
ಫಲುಗುಣನ+ ಕೂಡಾಡು +ನಡೆ +ಮರು
ವಲಗೆಯನು +ಭೀಮನಲಿ +ಬೇಡಿನ್ನೆಂದನಾ +ಶಲ್ಯ
ಅಚ್ಚರಿ:
(೧) ಉಪಮಾನದ ಪ್ರಯೋಗ – ಮುಳಿದು ಕಬ್ಬಿನ ತೋಟದಲಿ ನರಿ ಹುಲಿಯವೋಲ್ ಗರ್ಜಿಸಿತು ಗಡ