ಪದ್ಯ ೭೬: ಸೇನೆಯು ಏನೆಂದು ನಿಶ್ಚೈಸಿದರು?

ಹುರುಳುಗೆಟ್ಟುದು ಗರುವತನವೆಂ
ದರಸನಾಚಿದನಧಿಕ ಶೌರ್ಯೋ
ತ್ಕರುಷದಲಿ ಕಲಿಯಾಗಿ ನಿಂದನು ಮತ್ತೆ ಕಾಳಗಕೆ
ದೊರೆಯ ದುಗುಡವ ಕಂಡು ತಮತಮ
ಗುರವಣಿಸಿದರು ಸಕಲ ಸುಭಟರು
ಹೊರಳಿಗಟ್ಟಿತು ಸೇನೆ ನಿಚ್ಚಟದಳಿವ ನಿಶ್ಚೈಸಿ (ವಿರಾಟ ಪರ್ವ, ೯ ಸಂಧಿ, ೭೬ ಪದ್ಯ)

ತಾತ್ಪರ್ಯ:
ತಮ್ಮ ಅಭಿಮಾನಕ್ಕೆ ಕುಂದು ಬಂದಿತೆಂದು ಕೌರವನು ನಾಚಿಕೊಂಡು ಮಹಾ ಶೌರ್ಯದಿಂದ ಮತ್ತೆ ಯುದ್ಧಕ್ಕೆ ನಿಂತನು. ರಾಜನಿಗುಂಟಾದ ಸಂಕಟವನ್ನು ಕಂಡು, ಸೈನ್ಯದ ನಾಯಕರು ಗುಂಪುಗಟ್ಟಿ, ಸಾವು ಇಲ್ಲವೆ ಗೆಲುವು ಎರಡರೊಳಗೊಂದಾಗಬೇಕೆಂದು ನಿಶ್ಚೈಸಿದರು.

ಅರ್ಥ:
ಹುರುಳು: ಸತ್ತ್ವ, ಸಾರ; ಕೆಟ್ಟು: ಹಾಳು; ಗರುವ: ಬಲಶಾಲಿ, ಗರ್ವ; ಅರಸ: ರಾಜ; ನಾಚು: ಅವಮಾನ ಹೊಂದು; ಅಧಿಕ: ಹೆಚ್ಚು; ಶೌರ್ಯ: ಪರಾಕ್ರಮ; ಉತ್ಕರುಷ:ಹೆಚ್ಚಳ, ಮೇಲ್ಮೆ; ಕಲಿ: ಶೂರ; ನಿಂದು: ನಿಲ್ಲು; ಕಾಳಗ: ಯುದ್ಧ; ದೊರೆ: ರಾಜ; ದುಗುಡ: ದುಃಖ; ಕಂಡು: ನೋಡು; ಉರವಣಿಸು: ಆತುರಿಸು; ಸಕಲ: ಎಲ್ಲಾ; ಸುಭಟ: ಸೈನಿಕರು; ಹೊರಳಿಗಟ್ಟು: ಒಟ್ಟು ಸೇರು; ಸೇನೆ: ಸೈನ್ಯ; ನಿಚ್ಚಟ: ಸ್ಪಷ್ಟವಾದುದು; ಅಳಿ: ನಾಶ; ನಿಶ್ಚೈಸು: ನಿರ್ಧರಿಸು;

ಪದವಿಂಗಡಣೆ:
ಹುರುಳುಗೆಟ್ಟುದು +ಗರುವತನವೆಂದ್
ಅರಸ+ ನಾಚಿದನ್+ಅಧಿಕ +ಶೌರ್ಯ
ಉತ್ಕರುಷದಲಿ +ಕಲಿಯಾಗಿ+ ನಿಂದನು+ ಮತ್ತೆ +ಕಾಳಗಕೆ
ದೊರೆಯ +ದುಗುಡವ +ಕಂಡು +ತಮತಮಗ್
ಉರವಣಿಸಿದರು +ಸಕಲ +ಸುಭಟರು
ಹೊರಳಿಗಟ್ಟಿತು +ಸೇನೆ +ನಿಚ್ಚಟದಳಿವ +ನಿಶ್ಚೈಸಿ

ಅಚ್ಚರಿ:
(೧) ದುರ್ಯೋಧನ ಶಕ್ತಿ – ಅಧಿಕ ಶೌರ್ಯೋತ್ಕರುಷದಲಿ ಕಲಿಯಾಗಿ ನಿಂದನು ಮತ್ತೆ ಕಾಳಗಕೆ

ಪದ್ಯ ೪೧: ಅಶ್ವತ್ಥಾಮನು ಅರ್ಜುನನಿಗೆ ಹೇಗೆ ಉತ್ತರಿಸಿದ?

ಅರ್ಜುನನ ಶರವಿದ್ಯೆ ವಿವರಿಸೆ
ದುರ್ಜಯವಲಾ ಗರುವತನದೊಳು
ಗರ್ಜಿಸಿದೊಡೇನಹುದೆನುತೆ ಗುರುಸೂನು ಹರುಷದೊಳು
ನಿರ್ಜರರು ಮಝ ಪೂತುರೆನಲಾ
ವರ್ಜಿಸಿದ ತಿರುವಿನೊಳು ಸಂಗರ
ನಿರ್ಜಿತಾರಿಯನೆಸಲು ಕಣೆಗಳು ಕವಿದವಂಬರಕೆ (ವಿರಾಟ ಪರ್ವ, ೯ ಸಂಧಿ, ೪೧ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ಉತ್ತರಿಸುತ್ತಾ, ಅರ್ಜುನನ ಧನುರ್ವಿದ್ಯೆಯನ್ನು ಅರಿಯಲು ಸಾಧ್ಯವೇ? ಸ್ವಾಭಿಮಾನದಿಂದ ಗರ್ಜಿಸಿದರೆ ಏನು ಪ್ರಯೋಜನ? ಎಂದು ಹೇಳಿ ಸಂತೋಷದಿಂದ ದೇವತೆಗಳೂ, ಹೊಗಳುವಂತೆ, ಬಿಲ್ಲಿನ ಹೆದೆಯನ್ನು ಹದಮಾಡಿ, ಶತ್ರುಗಳನ್ನು ಜಯಿಸಿದನಾದ ಅರ್ಜನನನ್ನು ಬಾಣಗ್ಲೀಮ್ದ ಹೊಡೆಯಲು, ಆಕಾಶವೆಲ್ಲಾ ಬಾಣಮಯವಾಯಿತು.

ಅರ್ಥ:
ಶರ: ಬಾಣ; ವಿವರ: ಹರಡು, ವಿಸ್ತಾರ; ದುರ್ಜಯ: ಜಯಿಸಲಶಕ್ಯನಾದವ; ಗರುವ: ಶ್ರೇಷ್ಠ; ಗರ್ಜಿಸು: ಕೂಗು, ಆರ್ಭಟಿಸು; ಗುರು: ಆಚಾರ್ಯ; ಸೂನು: ಮಗ; ಹರುಷ: ಸಂತೋಷ; ನಿರ್ಜರ: ದೇವತೆ; ಮಝ: ಭಲೇ; ಪೂತು: ಕೊಂಡಾಟದ ಮಾತು; ವರ್ಜಿಸು: ಬಿಡು, ತ್ಯಜಿಸು; ತಿರುವು: ಬಿಲ್ಲಿನ ಹಗ್ಗ, ಹೆದೆ; ಸಂಗರ: ಯುದ್ಧ; ನಿರ್ಜಿತ: ಸೋಲಿಲ್ಲದವನು; ಅರಿ: ವೈರಿ; ಕಣೆ: ಬಾಣ; ಕವಿ: ಆವರಿಸು; ಅಂಬರ: ಆಗಸ;

ಪದವಿಂಗಡಣೆ:
ಅರ್ಜುನನ+ ಶರವಿದ್ಯೆ +ವಿವರಿಸೆ
ದುರ್ಜಯವಲಾ +ಗರುವತನದೊಳು
ಗರ್ಜಿಸಿದೊಡ್+ಏನಹುದೆನುತೆ +ಗುರುಸೂನು +ಹರುಷದೊಳು
ನಿರ್ಜರರು +ಮಝ +ಪೂತುರೆನಲಾ
ವರ್ಜಿಸಿದ +ತಿರುವಿನೊಳು +ಸಂಗರ
ನಿರ್ಜಿತಾರಿಯನ್+ಎಸಲು +ಕಣೆಗಳು+ ಕವಿದವ್+ಅಂಬರಕೆ

ಅಚ್ಚರಿ:
(೧) ಗ ಕಾರದ ತ್ರಿವಳಿ ಪದ – ಗರುವತನದೊಳು ಗರ್ಜಿಸಿದೊಡೇನಹುದೆನುತೆ ಗುರುಸೂನು
(೨) ಅರ್ಜುನನನ್ನು ಹೊಗಳುವ ಪರಿ – ಸಂಗರನಿರ್ಜಿತಾರಿ

ಪದ್ಯ ೬೩: ದುಶ್ಯಾಸನನು ದ್ರೌಪದಿಯನ್ನು ಹೇಗೆ ಜರೆದನು?

ಬಂದನವನಬುಜಾಕ್ಷಿಯಿದಿರಲಿ
ನಿಂದನೆಲೆಗೇ ಗರುವತನವಿದು
ಹಿಂದೆ ಸಲುವುದು ಸಲ್ಲದಿದು ಕುರುರಾಜ ಭವನದಲಿ
ಇಂದು ಮರೆ ನಡೆ ನಮ್ಮ ತೊತ್ತಿರ
ಮುಂದೆ ಮೆರೆ ನಡೆ ಮಂಚದಿಂದಿಳಿ
ಯೆಂದು ಜರೆದನು ಕೌರವಾನುಜನಾ ಮಹಾಸತಿಯ (ಸಭಾ ಪರ್ವ, ೧೫ ಸಂಧಿ, ೬೩ ಪದ್ಯ)

ತಾತ್ಪರ್ಯ:
ದುಶ್ಯಾಸನನು ಮಹಾಪತಿವ್ರತೆಯಾದ ದ್ರೌಪದಿಯ ಮುಂದೆ ಬಂದನು, ಎಲೇ, ನಿನ್ನ ಈ ಹಿರಿಮೆ ದರ್ಪವೆಲ್ಲವೂ ಈ ಹಿಂದೆ ಇಂದ್ರಪ್ರಸ್ಥದಲ್ಲಿ ಸಲ್ಲುತ್ತಿದ್ದವು, ಇಂದು ಕೌರವನ ಅರಮನೆಯಲ್ಲಿ ಇವೆಲ್ಲ ಸಲ್ಲದು, ಹಿಂದಿದ್ದ ಠೀವಿಯನ್ನು ಮರೆತುಬಿಡು, ನಡೆ ನಮ್ಮ ದಾಸಿಯರೊಡನೆ ನಿನ್ನ ಹಿರಿಮೆಯನ್ನು ತೋರಿಸು, ನಡೆ ಮಂಚದಿಂದ ಇಳಿ ಎಂದು ದ್ರೌಪದಿಯನ್ನು ತೆಗಳಿದನು.

ಅರ್ಥ:
ಬಂದು: ಆಗಮಿಸು; ಅಬುಜಾಕ್ಷಿ: ಕಮಲದಂತ ಕಣ್ಣುಳ್ಳವಳು (ದ್ರೌಪದಿ); ಇದಿರು: ಎದುರು; ನಿಂದು: ನಿಲ್ಲು; ಗರುವತನ: ಗರ್ವ, ದರ್ಪ; ಹಿಂದೆ: ಮೊದಲು; ಸಲುವು: ಸರಿಹೊಂದು; ಸಲ್ಲದು: ಸರಿಹೊಂದದು; ಭವನ: ಅರಮನೆ; ಮರೆ: ನೆನಪಿನಿಂದ ದೂರ ಮಾಡು; ನಡೆ: ಚಲಿಸು; ತೊತ್ತು: ದಾಸಿ; ಮೆರೆ: ಖ್ಯಾತಿಹೊಂದು; ಮಂಚ: ಪಲ್ಲಂಗ; ಇಳಿ: ಕೆಳಗೆ ಬಾ; ಜರೆ: ಬಯ್ಯು, ತೆಗಳು; ಅನುಜ: ತಮ್ಮ; ಸತಿ: ಪತಿವ್ರತೆ, ಗರತಿ; ಮಹಾ: ಶ್ರೇಷ್ಠ;

ಪದವಿಂಗಡಣೆ:
ಬಂದನ್+ಅವನ್+ಅಬುಜಾಕ್ಷಿ+ಇದಿರಲಿ
ನಿಂದನ್+ಎಲೆಗ್+ಈ+ ಗರುವತನವಿದು
ಹಿಂದೆ +ಸಲುವುದು+ ಸಲ್ಲದಿದು +ಕುರುರಾಜ +ಭವನದಲಿ
ಇಂದು +ಮರೆ +ನಡೆ +ನಮ್ಮ +ತೊತ್ತಿರ
ಮುಂದೆ +ಮೆರೆ +ನಡೆ+ ಮಂಚದಿಂದ್+ಇಳಿ
ಎಂದು +ಜರೆದನು +ಕೌರವ+ಅನುಜನ್+ಆ+ ಮಹಾ+ಸತಿಯ

ಅಚ್ಚರಿ:
(೧) ಮೊದಲನೆ ಸಾಲು ಒಂದೇ ಪದವಾಗಿರುವುದು – ಬಂದನವನಬುಜಾಕ್ಷಿಯಿದಿರಲಿ
(೨) ಮರೆ ನಡೆ, ಮೆರೆ ನಡೆ – ಪದಗಳ ಬಳಕೆ – ೪,೫ ಸಾಲು
(೩) ಸಲುವುದು, ಸಲ್ಲದಿದು – ಪದಗಳ ಬಳಕೆ
(೪) ದ್ರೌಪದಿಯನ್ನು ಅಬುಜಾಕ್ಷಿ, ಮಹಾಸತಿ ಎಂದು ಕರೆದಿರುವುದು

ಪದ್ಯ ೧೩: ಕರ್ಣನ ಸಾಹಸವನ್ನು ಯಾರು, ಹೇಗೆ ತಡೆದರು?

ಧರೆ ನೆನೆದ ದುಷ್ಕೃತವದೇನೆಂ
ದರಸ ಬೆಸಗೊಂಬೈ ನಿರಂತರ
ಸುರಿವ ರುಧಿರಾಸಾರದಲಿ ಕೆಸರೆದ್ದು ಕಳನೊಳಗೆ
ಹರಿವ ಬಿಂಕದ ರಥದ ಗಾಲಿಯ
ಗರುವತನ ಗಾಳಾಯ್ತಲೇ ಖೊ
ಪ್ಪರಿಸಿ ತಗ್ಗಿತು ತೇರು ತಡೆದುದು ಭಟನ ಸಾಹಸವ (ಕರ್ಣ ಪರ್ವ, ೨೬ ಸಂಧಿ, ೧೩ ಪದ್ಯ)

ತಾತ್ಪರ್ಯ:
ಭೂಮಿಯು ಮಾಡಿದ ದುಷ್ಕರ್ಮವೇನೆಂದು ಕೇಳುವೆಯಾ ರಾಜ ಧೃತರಾಷ್ಟ್ರ? ಇಷ್ಟುದಿನ ಎಡೆಬಿಡದೆ ಸುರಿದ ರಕ್ತದ ಧಾರೆಯಿಂದ ರಣರಂಗದಲ್ಲಿ ಕೆಸರೆದ್ದು ಚಲಿಸುತ್ತಿದ್ದ ಕರ್ಣನ ರಥದ ಗಾಲಿಗಳ ಬಿಂಕ ಬಯಲಾಗಿ, ರಥವು ಭೂಮಿಯಲ್ಲಿ ಸಿಕ್ಕುಹಾಕಿಕೊಂಡು ಕರ್ಣನ ಸಾಹಸವನ್ನು ತಡೆಯಿತು.

ಅರ್ಥ:
ಧರೆ: ಭೂಮಿ; ನೆನೆ: ತೋಯು; ದುಷ್ಕೃತ: ಕೆಟ್ಟ ಕೆಲಸ; ಅರಸ: ರಾಜ; ಬೆಸ: ಆದೇಶ, ಕೇಳು; ನಿರಂತರ: ಯಾವಾಗಲು; ಸುರಿ: ವರ್ಷಿಸು; ರುಧಿರ: ರಕ್ತ; ಆಸಾರ: ಜಡಿಮಳೆ, ಮುತ್ತಿಗೆ ಹಾಕುವುದು; ಕೆಸರು: ರಾಡಿ, ಪಂಕ; ಕಳ: ರಣರಂಗ; ಹರಿ: ಪ್ರವಾಹ, ನೀರಿನ ಹರಿವು; ಬಿಂಕ: ಗರ್ವ, ಜಂಬ; ರಥ: ಬಂಡಿ; ಗಾಲಿ: ಚಕ್ರ; ಗರುವ: ಸೊಕ್ಕು; ಗಾಳ: ಕೊಕ್ಕೆ, ಕುತಂತ್ರ; ಖೊಪ್ಪರಿಸು: ಮೀರು, ಹೆಚ್ಚು; ತಗ್ಗು: ಕಡಿಮೆಯಾಗು; ತೇರು: ರಥ; ತಡೆ: ನಿಲ್ಲು; ಭಟ: ಸೈನಿಕ; ಸಾಹಸ: ಪರಾಕ್ರಮ;

ಪದವಿಂಗಡಣೆ:
ಧರೆ +ನೆನೆದ +ದುಷ್ಕೃತವದ್+ಏನೆಂದ್
ಅರಸ+ ಬೆಸಗೊಂಬೈ +ನಿರಂತರ
ಸುರಿವ +ರುಧಿರ+ಆಸಾರದಲಿ +ಕೆಸರೆದ್ದು +ಕಳನೊಳಗೆ
ಹರಿವ+ ಬಿಂಕದ +ರಥದ+ ಗಾಲಿಯ
ಗರುವತನ+ ಗಾಳಾಯ್ತಲೇ+ ಖೊ
ಪ್ಪರಿಸಿ+ ತಗ್ಗಿತು+ ತೇರು +ತಡೆದುದು +ಭಟನ+ ಸಾಹಸವ

ಅಚ್ಚರಿ:
(೧) ತ್ರಿವಳಿ ಪದಗಳು – ಗಾಲಿಯ ಗರುವತನ ಗಾಳಾಯ್ತಲೇ; ತಗ್ಗಿತು ತೇರು ತಡೆದುದು