ಪದ್ಯ ೧೬: ಯುಧಿಷ್ಠಿರನು ಯಾರ ಚರಿತೆಯನ್ನು ತಿಳಿದನು?

ಬಂದನವನಿಪನಾ ಪ್ರಭಾಸದ
ವಂದನೆಗೆ ಬಳಿಕಲ್ಲಿ ಯಾದವ
ವೃಂದ ದರ್ಶನವಾಯ್ತು ಬಹುವಿಧತೀರ್ಥ ತೀರದಲಿ
ಮಿಂದನಾತಗೆ ಗಯನ ಚರಿತವ
ನಂದು ರೋಮಶ ಹೇಳಿದನು ನಲ
ವಿಂದ ಶರ್ಯಾತಿ ಚ್ಯವನ ಸಂವಾದ ಸಂಗತಿಯ (ಅರಣ್ಯ ಪರ್ವ, ೧೦ ಸಂಧಿ, ೧೬ ಪದ್ಯ)

ತಾತ್ಪರ್ಯ:
ಪ್ರಭಾಸತೀರ್ಥಕ್ಕೆ ಧರ್ಮಜನು ಬಂದಾಗ ಅಲ್ಲಿ ಯಾದವರನ್ನು ನೋಡಿದರು. ಅನೇಕ ತೀರ್ಥಗಳಲ್ಲಿ ಸ್ನಾನ ಮಾಡಿದನು. ರೋಮಶರು ಧರ್ಮಜನಿಗೆ ಗಯನ ಚರಿತ್ರೆಯನ್ನು ಚ್ಯವನ ಶರ್ಯಾತಿ ಸಂವಾದದ ವಿಷಯವನ್ನೂ ತಿಳಿಸಿದರು.

ಅರ್ಥ:
ಬಂದನು: ಆಗಮಿಸು; ಅವನಿಪ: ರಾಜ; ಅವನಿ: ಭೂಮಿ; ವಂದನೆ: ನಮಸ್ಕರಿಸು; ಬಳಿಕ: ನಂತರ; ವೃಂದ: ಗುಂಪು; ದರ್ಶನ: ನೋಟ; ಬಹು: ಬಹಳ; ವಿಧ: ರೀತಿ; ತೀರ್ಥ: ಪವಿತ್ರವಾದ ಜಲ; ತೀರ: ದಡ; ಮಿಂದು: ಮುಳುಗು; ಚರಿತ: ಕಥೆ; ನಲವು: ಸಂತೋಷ; ಸಂವಾದ: ಸಂಭಾಷಣೆ; ಸಂಗತಿ: ವಿಚಾರ;

ಪದವಿಂಗಡಣೆ:
ಬಂದನ್+ಅವನಿಪನ್+ಆ+ ಪ್ರಭಾಸದ
ವಂದನೆಗೆ +ಬಳಿಕಲ್ಲಿ+ ಯಾದವ
ವೃಂದ +ದರ್ಶನವಾಯ್ತು +ಬಹುವಿಧ+ತೀರ್ಥ +ತೀರದಲಿ
ಮಿಂದನ್+ಆತಗೆ+ ಗಯನ+ ಚರಿತವನ್
ಅಂದು +ರೋಮಶ +ಹೇಳಿದನು +ನಲ
ವಿಂದ +ಶರ್ಯಾತಿ +ಚ್ಯವನ +ಸಂವಾದ +ಸಂಗತಿಯ

ಅಚ್ಚರಿ:
(೧) ರೋಮಶ, ಶರ್ಯಾತಿ, ಚ್ಯವ, ಗಯ – ಹೆಸರುಗಳ ಪರಿಚಯ

ಪದ್ಯ ೫: ಭೀಮನ ಸೈನ್ಯವು ಮುಂದೆ ಯಾರ ಮೇಲೆ ಧಾಳಿ ಮಾಡಿತು?

ಆಳುನಡೆದುದು ಚೂಣಿಯಲಿ ಗೋ
ಪಾಲನೆಂಬನ ಮುರಿಯೆ ತೆತ್ತುದ
ಹೇಳಲರಿಯೆನು ಸಂಖ್ಯೆಯನು ಮುಂದತ್ತಪಾಲಕನ
ಜಾಳಿಸಿದನಾ ಕಾಶಿರಾಜನ
ಧಾಳಿಯಲಿ ಕೊಂದನು ಸುಪಾರ್ಶ್ವನ
ಮೇಲೆ ನಡೆದನು ಗಯನ ಮತ್ಸ್ಯನ ಗೆಲಿದನಾ ಭೀಮ (ಸಭಾ ಪರ್ವ, ೪ ಸಂಧಿ, ೫ ಪದ್ಯ)

ತಾತ್ಪರ್ಯ:
ಸೈನ್ಯದೊಡನೆ ಹೋಗಿ ಗೋಪಾಲನೆನ್ನುವವನನ್ನು ಗೆಲ್ಲಲು ಅವನ ತೆತ್ತ ಹಣವೆಷ್ಟೆಂದು ಹೇಳಲಸಾಧ್ಯ. ಕಾಶಿರಾಜನ ಭಂಡಾರವನ್ನು ಸೂರೆ ಮಾಡಿ, ಸುಪಾರ್ಶ್ವನನ್ನು ಕೊಂದು, ಗಯ, ಮತ್ಸ್ಯರಾಜರನ್ನು ಗೆದ್ದನು.

ಅರ್ಥ:
ಆಳು: ಸೈನ್ಯ; ನಡೆ: ಮುನ್ನುಗ್ಗು; ಚೂಣಿ: ಮುಂದಿನ ಸಾಲು, ಮುಂಭಾಗ; ಮುರಿ: ಸೀಳು; ತೆತ್ತು: ಕೊಡು; ಹೇಳು: ಮಾತಾಡು; ಅರಿ: ತಿಳಿ; ಸಂಖ್ಯೆ: ಎಣಿಸುವ ಸಾಧನ; ಪಾಲಕ: ; ಜಾಳಿಸು: ಹೊಡೆ; ಧಾಳಿ: ಆಕ್ರಮಣ; ಕೊಂದು: ಸಾಯಿಸು; ಗೆಲಿ: ಜಯ;

ಪದವಿಂಗಡಣೆ:
ಆಳು+ನಡೆದುದು +ಚೂಣಿಯಲಿ +ಗೋ
ಪಾಲ+ನೆಂಬನ+ ಮುರಿಯೆ +ತೆತ್ತುದ
ಹೇಳಲ್+ಅರಿಯೆನು +ಸಂಖ್ಯೆಯನು +ಮುಂದತ್ತ+ಪಾಲಕನ
ಜಾಳಿಸಿದನಾ +ಕಾಶಿರಾಜನ
ಧಾಳಿಯಲಿ +ಕೊಂದನು +ಸುಪಾರ್ಶ್ವನ
ಮೇಲೆ +ನಡೆದನು +ಗಯನ +ಮತ್ಸ್ಯನ +ಗೆಲಿದನಾ +ಭೀಮ

ಅಚ್ಚರಿ:
(೧) ಜಾಳಿ, ಧಾಳಿ – ಪ್ರಾಸ ಪದ