ಪದ್ಯ ೫೨: ಯುದ್ಧದಲ್ಲಿ ಹೇಗೆ ಶಬ್ದವು ಮೊಳಗಿತು?

ಸೂಳವಿಸಿದವು ಲಗ್ಗೆಯಲಿ ನಿ
ಸ್ಸಾಳತತಿ ಸಿಡಿಲೆರಗಿತೆನಲು
ಬ್ಬಾಳು ಮಿಗೆ ಕೈನೆಗಹಿ ಕೈವಾರಿಸುವ ಗಮಕಿಗಳು
ಸಾಲ ಹೆಗ್ಗಹಳೆಗಳು ರಿಪು ಭೂ
ಪಾಲಕರ ಬೈಬೈದು ಗಜರಿದ
ವಾಳುತನದಾಳಾಪ ಬೀರಿತು ಬೆರಗನಹಿತರಿಗೆ (ದ್ರೋಣ ಪರ್ವ, ೪ ಸಂಧಿ, ೫೨ ಪದ್ಯ)

ತಾತ್ಪರ್ಯ:
ಆಕ್ರಮಣ ಪೂರ್ವದಲ್ಲಿ ಭೇರಿಗಳು ಸಿಡಿಲೆರಗಿದಂತೆ ಸದ್ದುಮಾದಿದವು. ಮುಂದೆ ನುಗ್ಗಿಬರುವ ಸೈನಿಕರು ಕೈಯೆತ್ತಿ ಕೇಕೆ ಹಾಕುತ್ತಿದ್ದರು. ಹೆಗ್ಗಹಳೆಗಳು ಶತ್ರುರಾಜರನ್ನು ಬೈದು ಗದರಿಸುವಂತೆ ಮೊಳಗಿದವು. ಈ ಎಲ್ಲಾ ಸದ್ದು ಪಾಂಡವ ಸೈನ್ಯದ ಪರಾಕ್ರಮವನ್ನು ವ್ಯಕ್ತಪಡಿಸಿ, ಕೌರವ ಸೈನ್ಯವನ್ನು ಬೆರಗುಗೊಳಿಸಿದವು.

ಅರ್ಥ:
ಸೂಳು: ಯುದ್ಧ; ಸೂಳೈಸು: ಧ್ವನಿ ಮಾಡು; ಲಗ್ಗೆ: ಮುತ್ತಿಗೆ, ಆಕ್ರಮಣ; ನಿಸ್ಸಾಳ: ಚರ್ಮವಾದ್ಯ; ತತಿ: ಗುಂಪು; ಸಿಡಿಲು: ಅಶನಿ; ಎರಗು: ಬೀಳು; ಉಬ್ಬು: ಹಿಗ್ಗು, ಗರ್ವಿಸು; ಆಳು: ಸೈನಿಕ; ಮಿಗೆ: ಹೆಚ್ಚು; ನೆಗಹು: ಮೇಲೆತ್ತು; ಗಮಕಿ: ವಾಚನ ಮಾಡುವವನು; ಸಾಲ: ಕಡ, ಪ್ರಾಕಾರ; ರಿಪು: ವೈರಿ; ಭೂಪಾಲಕ: ರಾಜ; ಬೈದು: ಜರಿದು; ಗಜರು: ಗರ್ಜನೆ, ಜೋರಾಗಿ ಕೂಗು; ಆಳುತನ: ಪರಾಕ್ರಮ; ಆಳಾಪ: ಕೂಗು; ಬೀರು: ಜೋರು; ಬೆರಗು: ವಿಸ್ಮಯ, ಸೋಜಿಗ; ಅಹಿತ: ವೈರಿ;

ಪದವಿಂಗಡಣೆ:
ಸೂಳವಿಸಿದವು +ಲಗ್ಗೆಯಲಿ +ನಿ
ಸ್ಸಾಳತತಿ+ ಸಿಡಿಲೆರಗಿತೆನಲ್
ಉಬ್ಬ್+ಆಳು +ಮಿಗೆ +ಕೈನೆಗಹಿ+ ಕೈವಾರಿಸುವ +ಗಮಕಿಗಳು
ಸಾಲ +ಹೆಗ್ಗಹಳೆಗಳು +ರಿಪು +ಭೂ
ಪಾಲಕರ +ಬೈಬೈದು +ಗಜರಿದವ್
ಆಳುತನದ್+ಆಳಾಪ +ಬೀರಿತು+ ಬೆರಗನ್+ಅಹಿತರಿಗೆ

ಅಚ್ಚರಿ:
(೧) ರಿಪು, ಅಹಿತ – ಸಮಾನಾರ್ಥಕ ಪದ
(೨) ಗಜರು, ಬೈದು, ಗಮಕಿ, ಸಿಡಿಲು – ಶಬ್ದವನ್ನು ವಿವರಿಸುವ ಪದಗಳ ಬಳಕೆ

ಪದ್ಯ ೧೫: ಧರ್ಮಜನನ್ನು ಕಾಣಲು ಯಾರು ಬಂದರು?

ಬಂದು ಕಂಡುದು ನಿಖಿಳ ಪುರಜನ
ವಂದು ಕಾಣಿಕೆಗೊಟ್ಟು ಕೌರವ
ನಂದನರು ಸಚಿವರು ಪಸಾಯ್ತನಿಯೋಗಿ ಮಂತ್ರಿಗಳು
ಸಂದಣಿಸಿದುದು ಕವಿ ಗಮಕಿ ನಟ
ವಂದಿ ಮಾಗಧ ಮಲ್ಲಗಾಯಕ
ವೃಂದ ದೀನಾನಾಥರೋಲಗಿಸಿದರು ಧರ್ಮಜನ (ಸಭಾ ಪರ್ವ, ೧೪ ಸಂಧಿ, ೧೫ ಪದ್ಯ)

ತಾತ್ಪರ್ಯ:
ಪಾಂಡವರು ಬಂದಿರುವುದನ್ನು ತಿಳಿದ ಹಸ್ತಿನಾಪುರದ ಜನರು ಅವರನ್ನು ನೋಡಲು ಬಂದರು. ಪುರದ ಜನ, ಕೌರವರ ಮಕ್ಕಳು, ಸಚಿವರು, ಆಪ್ತರು, ನಿಯೋಗಿಗಳು, ಮಂತ್ರಿಗಳು ಬಂದು ಯುಧಿಷ್ಠಿರನನ್ನು ಕಂಡು ಕಾಣಿಕೆಯನ್ನು ಕೊಟ್ಟರು. ಕವಿಗಳು, ಗಮಕಿಗಳು, ನಟರು, ವಂದಿಮಾಗಧರು, ಜಟ್ಟಿಗಳು, ಗಾಯಕರು, ದೀನರು, ಅನಾಥರು ಮೊದಲಾದವರು ಓಲಗಕ್ಕೆ ಬಂದರು.

ಅರ್ಥ:
ಬಂದು: ಆಗಮಿಸು; ಕಂಡು: ನೋಡಿ; ನಿಖಿಳ: ಎಲ್ಲಾ; ಪುರಜನ: ಊರಿನ ಜನ; ಕಾಣಿಕೆ: ಉಡುಗೊರೆ, ದಕ್ಷಿಣೆ; ನಂದನ: ಮಕ್ಕಳು; ಸಚಿವ: ಮಂತ್ರಿ; ಪಸಾಯ್ತ: ಸಾಮಂತರಾಜ; ನಿಯೋಗಿ: ವಿಶೇಷಾಧಿಕಾರಿ; ಮಂತ್ರಿ: ಸಚಿವ; ಸಂದಣಿ: ಗುಂಪು, ಸಮೂಹ; ಕವಿ: ಕಬ್ಬಿಗ; ಗಮಕಿ: ಹಾಡುವವ; ವಂದಿ ಮಾಗಧ: ಹೊಗಳುಭಟ್ಟರು; ಮಲ್ಲ: ಜಟ್ಟಿ; ಗಾಯಕ: ಹಾಡುಗಾರ; ವೃಂದ: ಗುಂಪು; ದೀನ: ಬಡವ, ದರಿದ್ರ; ಅನಾಥ: ತಬ್ಬಲಿ, ನಿರ್ಗತಿಕ; ಓಲಗಿಸು: ಸೇವೆಮಾಡು, ಉಪಚರಿಸು;

ಪದವಿಂಗಡಣೆ:
ಬಂದು +ಕಂಡುದು +ನಿಖಿಳ +ಪುರಜನವ್
ಅಂದು +ಕಾಣಿಕೆಗೊಟ್ಟು +ಕೌರವ
ನಂದನರು+ ಸಚಿವರು+ ಪಸಾಯ್ತ+ನಿಯೋಗಿ +ಮಂತ್ರಿಗಳು
ಸಂದಣಿಸಿದುದು +ಕವಿ+ ಗಮಕಿ+ ನಟ
ವಂದಿ +ಮಾಗಧ+ ಮಲ್ಲ+ಗಾಯಕ
ವೃಂದ+ ದೀನ+ಅನಾಥರ್+ಓಲಗಿಸಿದರು+ ಧರ್ಮಜನ

ಪದ್ಯ ೩೮: ಗಮಕಿಗಳು ಹೇಗೆ ಪ್ರಶಂಸೆ ಪಡೆಯುತ್ತಿದ್ದರು?

ನುಡಿದು ತಲೆದೂಗಿಸುವ ಮರೆಗ
ನ್ನಡಕೆ ಹಾ ಹಾಯೆನಿಸಿ ಮೆಚ್ಚನು
ಪಡೆದ ವಾಗ್ಮಿಗಳೋದಿ ಹೊಗಳಿಸಿಕೊಂಬ ಗಮಕಿಗಳು
ಕೊಡುವ ಪದ್ಯಕೆ ಸುಪ್ರಮೇಯದ
ಗಡಣಕಬುಜಭವಾದಿ ವಿಭುಗಳು
ಬಿಡಿಸಲರಿದೆನಿಪತುಳ ತಾರ್ಕಿಕ ಜನಗಳೊಪ್ಪಿದರು (ಉದ್ಯೋಗ ಪರ್ವ, ೮ ಸಂಧಿ, ೩೮ ಪದ್ಯ)

ತಾತ್ಪರ್ಯ:
ಮಾತನಾಡಿ ಅಹುದುದಹುದೆಂದು ತಲೆದೂಗಿಸಿ ರಹಸ್ಯವಾದ ಕನ್ನಡಕೆ ಹಾ ಹಾ ಎಂದು ಹೇಳಿ ಹೊಗಳಿಕೆಯನ್ನು ಪಡೆದು ವಾಗ್ಮಿಗಳು, ಓದಿ ಹೊಗಳಿಕೆಯನ್ನು ಪಡೆದ ಗಮಕಿಗಳು, ಕೊಡುವ ಪದ್ಯಕೆ ಸರಿಯಾಗಿ ವಿವೇಚಿಸಿ, ಪದಗಳನ್ನು ಕೂಡಿಸಿ ತಾವರೆಯ ಇರುವಿಕೆಯನ್ನು ತೋರುವ ಪ್ರಭು, ಬಿಡಿಸಿ ಅರ್ಥೈಸುವ ತಾರ್ಕಿಕ ಜನಗಳನ್ನು ಸಭೆಯಲ್ಲಿ ಒಪ್ಪಿದರು.

ಅರ್ಥ:
ನುಡಿ: ಮಾತು; ತಲೆ: ಶಿರ; ದೂಗಿಸು: ಅಲ್ಲಾಡಿಸು; ಮರೆಗನ್ನಡ: ರಹಸ್ಯವಾದ ಕನ್ನಡ; ಮೆಚ್ಚು: ಒಲುಮೆ, ಪ್ರೀತಿ; ಪಡೆ: ಸೈನ್ಯ, ಬಲ; ವಾಗ್ಮಿ: ಚೆನ್ನಾಗಿ ಮಾತನಾಡುವವನು; ಓದಿ: ತಿಳಿದು; ಹೊಗಳು: ಪ್ರಶಂಶಿಸು; ಗಮಕಿ: ಪದ್ಯಗಳನ್ನು ಹಾಡುವವರು; ಕೊಡು: ನೀಡು; ಪದ್ಯ: ಕಾವ್ಯ; ಪ್ರಮೇಯ: ವಿವೇಚಿಸಬೇಕಾದ, ಅಳೆಯಬಹುದಾದ; ಗಡಣ:ಕೂಡಿಸುವಿಕೆ; ಅಬುಜ: ತಾವರೆ; ಭವ: ಇರುವಿಕೆ, ಅಸ್ತಿತ್ವ; ವಿಭು:ದೇವರು, ಸರ್ವತ್ರವ್ಯಾಪ್ತ, ರಾಜ, ಪ್ರಭು; ಬಿಡಿಸು: ಕಳಚು, ಸಡಿಲಿಸು; ಅರಿ: ತಿಳಿ; ಅತುಳ: ಬಹಳ; ತಾರ್ಕಿಕ: ತರ್ಕಶಾಸ್ತ್ರವನ್ನು ತಿಳಿದವನು; ಜನ: ಮನುಷ್ಯ; ಒಪ್ಪು: ಸಮ್ಮತಿಸು;

ಪದವಿಂಗಡಣೆ:
ನುಡಿದು +ತಲೆದೂಗಿಸುವ+ ಮರೆ+
ಕನ್ನಡಕೆ +ಹಾ +ಹಾಯೆನಿಸಿ +ಮೆಚ್ಚನು
ಪಡೆದ+ ವಾಗ್ಮಿಗಳ್+ಓದಿ+ ಹೊಗಳಿಸಿಕೊಂಬ+ ಗಮಕಿಗಳು
ಕೊಡುವ +ಪದ್ಯಕೆ +ಸುಪ್ರಮೇಯದ
ಗಡಣಕ್+ಅಬುಜ+ಭವಾದಿ +ವಿಭುಗಳು
ಬಿಡಿಸಲ್+ಅರಿದ್+ಎನಿಪ್+ಅತುಳ +ತಾರ್ಕಿಕ +ಜನಗಳ್+ಒಪ್ಪಿದರು

ಅಚ್ಚರಿ:
(೧) ವಾಗ್ಮಿ, ಗಮಕಿ, ವಿಭು, ತಾರ್ಕಿಕ – ಜನಗಳ ಬಳಕೆ