ಪದ್ಯ ೨೫: ರಾಕ್ಷಸರ ಸೈನ್ಯವು ಹೇಗೆ ಕಳಚಿಬಿತ್ತು?

ಕೆಟ್ಟುದಹಿತರ ಚೂಣಿ ರಿಪುಜಗ
ಜಟ್ಟಿಗಳು ನುಗ್ಗಾಯ್ತು ದಿವಿಜರ
ಥಟ್ಟಿನಲಿ ಬೊಬ್ಬಾಟವಾಯ್ತು ಗಭೀರ ಭೇರಿಗಳು
ಬಿಟ್ಟ ಮಂಡೆಯಲಸುರ ಸುಭಟರು
ಕೆಟ್ಟು ಹಾಯ್ದರು ಕೂಡೆ ಹೆಣಸಾ
ಲಿಟ್ಟು ತೊರೆಯೆನಲರುಣಜಲ ನಗರೋಪಕಂಠದಲಿ (ಅರಣ್ಯ ಪರ್ವ, ೧೩ ಸಂಧಿ, ೨೫ ಪದ್ಯ)

ತಾತ್ಪರ್ಯ:
ನಿವಾತಕವಚರ ಸೈನ್ಯವು ನನ್ನ ಹೊಡೆತಕ್ಕೆ ಕೆಟ್ಟಿತು, ರಾಕ್ಷಸರಲ್ಲಿ ಮಹಾವೀರರೆನಿಸಿಕೊಂಡವರು ಪುಡಿಯಾದರು. ದೇವತೆಗಳ ಸೈನ್ಯದ ಉತ್ಸಾಹವು ಹೆಚ್ಚಿತು, ಅವರು ಭೇರಿ ನಗಾರಿಗಳನ್ನು ಬಡಿಯಲಾರಂಭಿಸಿದರು. ಅಸುರವೀರರು ತಮ್ಮ ಕೆದರಿದ ತಲೆಯಲ್ಲಿ ಸತ್ತೆವೋ ಕೆಟ್ಟೆವೋ ಎನ್ನುತ್ತಾ ಓಡಿದರು. ಹೆಣಗಳು ಸಾಲುಸಾಲಾಗಿ ಉರುಳಿದವು. ರಕ್ತವು ಹಳ್ಳವಾಗಿ ಹಿರಣ್ಯಪುರದ ಬಳಿ ಹರಿಯಿತು.

ಅರ್ಥ:
ಕೆಡು: ಹಾಳಾಗು; ಅಹಿತ: ಶತ್ರು; ಚೂಣಿ: ಮುಂಭಾಗ; ರಿಪು: ವೈರಿ; ಜಗಜಟ್ಟಿ: ಶೂರ; ನುಗ್ಗು: ಚೂರು, ನುಚ್ಚು; ದಿವಿಜ: ಸುರರು; ಥಟ್ಟು: ಗುಂಪು; ಬೊಬ್ಬಾಟ: ಕೂಗಾಟ, ಚೀರಾಟ; ಗಭೀರ: ಆಳವಾದುದು, ಗಹನವಾದುದು; ಭೇರಿ: ನಗಾರಿ, ದುಂದುಭಿ; ಬಿಟ್ಟ: ತೊರೆದ; ಮಂಡೆ: ಶಿರ; ಅಸುರ: ರಾಕ್ಷಸ; ಸುಭಟ: ಸೈನಿಕ; ಹಾಯ್ದು: ಓಡು; ಕೂಡೆ: ಜೊತೆ; ಹೆಣ: ಸತ್ತ ಶರೀರ; ಸಾಲು: ಗುಂಪು; ತೊರೆ: ಬಿಡು; ಅರುಣಜಲ: ಕೆಂಪು ನೀರು, ರಕ್ತ; ನಗರ: ಊರು; ಉಪಕಂಠ: ಹತ್ತಿರ;

ಪದವಿಂಗಡಣೆ:
ಕೆಟ್ಟುದ್+ಅಹಿತರ +ಚೂಣಿ +ರಿಪು+ಜಗ
ಜಟ್ಟಿಗಳು +ನುಗ್ಗಾಯ್ತು +ದಿವಿಜರ
ಥಟ್ಟಿನಲಿ +ಬೊಬ್ಬಾಟವಾಯ್ತು +ಗಭೀರ +ಭೇರಿಗಳು
ಬಿಟ್ಟ +ಮಂಡೆಯಲ್+ಅಸುರ +ಸುಭಟರು
ಕೆಟ್ಟು +ಹಾಯ್ದರು +ಕೂಡೆ +ಹೆಣ+ಸಾ
ಲಿಟ್ಟು +ತೊರೆಯೆನಲ್+ಅರುಣಜಲ +ನಗರೋಪಕಂಠದಲಿ

ಅಚ್ಚರಿ:
(೧) ರಕ್ತಹರಿಯಿತು ಎಂದು ಹೇಳುವ ಪರಿ – ಹೆಣಸಾಲಿಟ್ಟು ತೊರೆಯೆನಲರುಣಜಲ ನಗರೋಪಕಂಠದಲಿ
(೨) ಅಹಿತ, ರಿಪು – ಸಮನಾರ್ಥಕ ಪದ