ಪದ್ಯ ೩೪: ಶಲ್ಯನನ್ನು ಯಾರು ಆವರಿಸಿದರು?

ದೊರೆಗೆ ಬಲುಹೋ ಸಮರ ಶಲ್ಯನ
ಶರವಳೆಗೆ ಹಿಡಿ ಕೊಡೆಯನೆನಲ
ಬ್ಬರದೊಳಗೆ ಗಬ್ಬರಿಸೆ ನೆಲ ಗಾಲಿಗಳ ಘಲ್ಲಣೆಗೆ
ಸರಳ ಹೊದೆಗಳ ತುಂಬಿ ರಥ ಸಾ
ವಿರದಲಾ ಪಾಂಚಾಲಬಲವು
ಪ್ಪರಗುಡಿಯ ಸಿಂಧದ ಸಘಾಡದಲೈದಿತರಿಭಟನ (ಶಲ್ಯ ಪರ್ವ, ೨ ಸಂಧಿ, ೩೪ ಪದ್ಯ)

ತಾತ್ಪರ್ಯ:
ಅರಸನಿಗೆ ಯುದ್ಧವು ಅಸಾಧ್ಯವಾಗುತ್ತಿದೆ, ಶಲ್ಯನ ಬಾಣಗಳ ಮಳೆಗೆ ಕೊಡೆಯನ್ನು ಹಿಡಿಯಿರಿ ಎಂದು ಕೂಗುತ್ತಾ ಪಾಂಚಾಲ ಸೇನೆಯು ಬಾಣಗಳನ್ನು ಸಾವಿರ ರಥಗಳಲ್ಲಿ ತುಂಬಿ, ಗಾಲಿಗಳು ಚೀತ್ಕರಿಸುತ್ತಿರಲು ಶಲ್ಯನನ್ನು ಮುತ್ತಿತು.

ಅರ್ಥ:
ದೊರೆ: ರಾಜ; ಬಲುಹು: ಪರಾಕ್ರಮ; ಸಮರ: ಯುದ್ಧ; ಶರವಳೆ: ಬಾಣಗಳ ಮಳೆ; ಹಿಡಿ: ಗ್ರಹಿಸು; ಕೊಡೆ: ಛತ್ರಿ; ಅಬ್ಬರ: ಗರ್ಜಿಸು; ಗಬ್ಬರಿಸು: ತೋಡು, ಬಿಗಿ; ನೆಲ: ಭೂಮಿ; ಗಾಲಿ: ಚಕ್ರ; ಘಲ್ಲಣೆ: ಘಲ್ ಘಲ್ ಎಂಬ ಶಬ್ದ; ಸರಳ: ಬಾಣ; ಹೊದೆ: ಬಾಣಗಳನ್ನಿಡುವ ಕೋಶ, ಬತ್ತಳಿಕೆ; ತುಂಬ: ಭರ್ತಿ; ರಥ: ಬಂಡಿ; ಸಾವಿರ: ಸಹಸ್ರ; ಬಲ: ಸೈನ್ಯ; ಉಪ್ಪರ: ಅತಿಶಯ; ಸಿಂಧ: ಬಾವುಟ; ಸಘಾಡ:ರಭಸ, ವೇಗ; ಐದು: ಬಂದು ಸೇರು; ಅರಿ: ವೈರಿ; ಭಟ: ಸೈನಿಕ;

ಪದವಿಂಗಡಣೆ:
ದೊರೆಗೆ +ಬಲುಹೋ +ಸಮರ +ಶಲ್ಯನ
ಶರವಳೆಗೆ +ಹಿಡಿ+ ಕೊಡೆಯನ್+ಎನಲ್
ಅಬ್ಬರದೊಳಗೆ +ಗಬ್ಬರಿಸೆ +ನೆಲ +ಗಾಲಿಗಳ +ಘಲ್ಲಣೆಗೆ
ಸರಳ+ ಹೊದೆಗಳ +ತುಂಬಿ +ರಥ +ಸಾ
ವಿರದಲ್+ಆ+ ಪಾಂಚಾಲ+ಬಲವ್
ಉಪ್ಪರಗುಡಿಯ+ ಸಿಂಧದ +ಸಘಾಡದಲ್+ಐದಿತ್+ಅರಿ+ಭಟನ

ಅಚ್ಚರಿ:
(೧) ರಕ್ಷಿಸು ಎಂದು ಹೇಳಲು – ಶರವಳೆಗೆ ಹಿಡಿ ಕೊಡೆಯ
(೨) ಅಬ್ಬರ, ಗಬ್ಬರ – ಪ್ರಾಸ ಪದಗಳು