ವಟ್ಟಿ ಮುರಿದುದು ಸೀಸಕದ ಗದೆ
ನಟ್ಟುದರಸನ ನೊಸಲ ರುಧಿರದ
ಕಟ್ಟೆಯೊಡೆದಂದದಲಿ ಕವಿದುದು ನೃಪನ ತನು ನನೆಯೆ
ಕೊಟ್ಟ ಘಾಯಕೆ ಬಳಲಿ ಮರವೆಗೆ
ಬಿಟ್ಟು ಮನವನು ನಿಮಿಷದಲಿ ಜಗ
ಜಟ್ಟಿ ಕೌರವರಾಯ ಕೊಂಡನು ನಿಜಗದಾಯುಧವ (ಗದಾ ಪರ್ವ, ೭ ಸಂಧಿ, ೨೨ ಪದ್ಯ)
ತಾತ್ಪರ್ಯ:
ಕೌರವನ ಸೀಸಕವು ಮುರಿಯಿತು. ಹಣೆಯಲ್ಲಿ ಆಯುಧವು ನೆಟ್ಟು ರಕ್ತದ ಕಟ್ಟೆಯೊಡೆದಂತಾಗಿ ಕೌರವನ ಮೈನೆನೆಯಿತು. ಗಾಯದಿಂದ ಬಳಲಿ ಒಂದು ನಿಮಿಷ ಮೂರ್ಛೆ ಹೋಗಿ ಎದ್ದು ಕೌರವನು ಗದೆಯನ್ನು ತೆಗೆದುಕೊಂಡನು.
ಅರ್ಥ:
ಮುರಿ: ಸೀಳು; ಸೀಸಕ: ಶಿರಸ್ತ್ರಾಣ; ಗದೆ: ಮುದ್ಗರ; ಅರಸ: ರಾಜ; ನೊಸಲು: ಹಣೆ; ರುಧಿರ: ರಕ್ತ; ಕಟ್ಟೆ: ಒಡ್ಡು; ಒಡೆ: ಸೀಳು, ಬಿರುಕು; ಕವಿ: ಆವರಿಸು; ನೃಪ: ರಾಜ; ತನು: ದೇಹ; ನೆನೆ: ತೋಯು; ಕೊಟ್ಟು: ನೀಡು; ಘಾಯ: ಪೆಟ್ಟು; ಬಳಲಿ: ಆಯಾಸ; ಮರವೆ: ಮರವು, ಜ್ಞಾಪಕವಿಲ್ಲದಿರುವುದು; ಬಿಟ್ಟು: ತೊರೆ; ಮನ: ಮನಸ್ಸು; ನಿಮಿಷ: ಕ್ಷಣ ಮಾತ್ರದಲಿ; ಜಗಜಟ್ಟಿ: ಪರಾಕ್ರಮಿ;
ಪದವಿಂಗಡಣೆ:
ವಟ್ಟಿ +ಮುರಿದುದು +ಸೀಸಕದ +ಗದೆ
ನಟ್ಟುದ್+ಅರಸನ +ನೊಸಲ +ರುಧಿರದ
ಕಟ್ಟೆ+ಒಡೆದಂದದಲಿ +ಕವಿದುದು +ನೃಪನ +ತನು +ನನೆಯೆ
ಕೊಟ್ಟ+ ಘಾಯಕೆ +ಬಳಲಿ +ಮರವೆಗೆ
ಬಿಟ್ಟು+ ಮನವನು +ನಿಮಿಷದಲಿ +ಜಗ
ಜಟ್ಟಿ+ ಕೌರವರಾಯ+ ಕೊಂಡನು +ನಿಜ+ಗದಾಯುಧವ
ಅಚ್ಚರಿ:
(೧) ರೂಪಕದ ಪ್ರಯೋಗ – ರುಧಿರದಕಟ್ಟೆಯೊಡೆದಂದದಲಿ ಕವಿದುದು ನೃಪನ ತನು ನನೆಯೆ