ಪದ್ಯ ೭೯: ಯುದ್ಧದಲ್ಲಿ ಯಾರು ಆಯಾಸಗೊಂಡರು?

ಗುರುತನುಜ ರವಿಸೂನು ಮಾದ್ರೇ
ಶ್ವರ ಜಯದ್ರಥ ಕೌರವಾದಿಗ
ಳರಿ ಗದಾಘಾತದಲಿ ಕೈ ಮೈ ದಣಿದು ಮನದಣಿದು
ತೆರಳಿದರು ಬಳಿಕಪರಜಲಧಿಯೊ
ಳುರಿವ ವಡಬನ ದೀಪ್ತಶಿಖರದೊ
ಳೆರಗುವಂತೆ ಪತಂಗ ಮಂಡಲವಿಳಿದುದಂಬರವ (ದ್ರೋಣ ಪರ್ವ, ೩ ಸಂಧಿ, ೭೯ ಪದ್ಯ)

ತಾತ್ಪರ್ಯ:
ಅಶ್ವತ್ಥಾಮ, ಕರ್ಣ, ಶಲ್ಯ, ಜಯದ್ರಥ, ಕೌರವರು ಭೀಮನ ಗದೆಯ ಹೊಡೆತದಿಂದ ಕೈ, ಮೈ ಮನಸ್ಸುಗಳಿಂದ ದಣಿದರು. ಅಷ್ಟರಲ್ಲಿ ಪಶ್ಚಿಮ ಸಮುದ್ರದೊಳಕ್ಕೆ ಜ್ವಲಿಸುವ ಬಡಬಾನಲ ಶಿಖರಕ್ಕೆ ಎರಗುವಂತೆ ಸೂರ್ಯಮಂಡಲವು ಆಕಾಶದಿಂದ ಕೆಳಗಿಳಿಯಿತು.

ಅರ್ಥ:
ತನುಜ: ಮಗ; ಗುರು: ಆಚಾರ್ಯ; ರವಿ: ಸೂರ್ಯ; ಸೂನು: ಮಗ; ಮಾದ್ರೇಶ್ವರ: ಶಲ್ಯ, ಮದ್ರ ದೇಶದ ದೊರೆ; ಆದಿ: ಮುಂತಾದ; ಅರಿ: ಕತ್ತರಿಸು; ಗದೆ: ಮುದ್ಗರ; ಆಘಾತ: ಹೊಡೆತ; ಕೈ: ಹಸ್ತ; ಮೈ: ತನು; ದಣಿ: ಆಯಾಸ; ಮನ: ಮನಸ್ಸು; ತೆರಳು: ಹಿಂದಿರುಗು; ಬಳಿಕ: ನಂತರ; ಅಪರ: ಪಶ್ಚಿಮದಿಕ್ಕು; ಜಲಧಿ: ಸಾಗರ; ಉರಿ: ಬೆಂಕಿ; ವಡಬ: ಸಮುದ್ರದಲ್ಲಿರುವ ಬೆಂಕಿ, ಬಡ ಬಾಗ್ನಿ; ದೀಪ್ತ: ಪ್ರಕಾಶವುಳ್ಳ; ಶಿಖರ: ತುದಿ; ಎರಗು: ಬಾಗು; ಪತಂಗ: ಸೂರ್ಯ; ಮಂಡಲ:ವರ್ತುಲಾಕಾರ; ಇಳಿ: ಬಾಗು; ಅಂಬರ: ಆಗಸ;

ಪದವಿಂಗಡಣೆ:
ಗುರು+ತನುಜ +ರವಿ+ಸೂನು +ಮಾದ್ರೇ
ಶ್ವರ +ಜಯದ್ರಥ +ಕೌರವ್+ಆದಿಗಳ್
ಅರಿ +ಗದ+ಆಘಾತದಲಿ +ಕೈ +ಮೈ +ದಣಿದು +ಮನದಣಿದು
ತೆರಳಿದರು +ಬಳಿಕ್+ಅಪರ+ಜಲಧಿಯೊಳ್
ಉರಿವ +ವಡಬನ+ ದೀಪ್ತ+ಶಿಖರದೊಳ್
ಎರಗುವಂತೆ +ಪತಂಗ +ಮಂಡಲವ್+ಇಳಿದುದ್+ಅಂಬರವ

ಅಚ್ಚರಿ:
(೧) ಸೂರ್ಯ ಮುಳುಗಿದ ಎಂದು ಹೇಳುವ ಪರಿ – ಅಪರಜಲಧಿಯೊಳುರಿವ ವಡಬನ ದೀಪ್ತಶಿಖರದೊ
ಳೆರಗುವಂತೆ ಪತಂಗ ಮಂಡಲವಿಳಿದುದಂಬರವ

ಪದ್ಯ ೩೭: ಯುಯುತ್ಸುವೇಕೆ ರಥದಿಂದ ಇಳಿದು ಬಂದನು?

ಬಲದೊಳಗೆ ಬೇಹವರ ನಾಲ್ವರ
ನೊಳಗುಮಾಡಿ ಧರಾಧಿಪನು ಮನ
ಗೆಲವಿನಲಿ ಮರಳಿದನು ಕೌರವ ಮೋಹರವನುಳಿದು
ತಿಳಿದು ತನ್ನೊಳು ಭೀಮಸೇನನ
ಬಲು ಗದಾಘಾತದಲಿ ಕುರುಕುಲ
ವಳಿವುದೆಂದು ಯುಯುತ್ಸು ರಥದಿಂದಿಳಿದು ನಡೆತಂದ (ಭೀಷ್ಮ ಪರ್ವ, ೨ ಸಂಧಿ, ೩೭ ಪದ್ಯ)

ತಾತ್ಪರ್ಯ:
ಕೌರವ ಸೈನ್ಯದಲ್ಲಿ ತನಗೆ ಬೇಕಾದ ನಾಲ್ವರಿಂದ ಅಭಯವನ್ನು ಪಡೆದು, ಧರಜನು ಕೌರವ ಸೈನ್ಯದಿಂದ ಹಿಂದಿರುಗುತ್ತಿರುವಾಗ ಯುಯುತ್ಸುವು ಭೀಮನ ಗದೆಯಿಂದ ಕೌರವವಂಶವು ನಾಶವಾಗುವುದು ಖಂಡಿತವೆಂದು ತಿಳಿದು ರಥದಿಂದಿಳಿದು ಬಂದನು.

ಅರ್ಥ:
ಬಲ: ಶಕ್ತಿ; ಬೇಹು: ಗೂಢಚರ್ಯೆ; ಒಳಗುಮಾಡು: ಅಧೀನಮಾಡಿಕೋ; ಧರಾಧಿಪ: ರಾಜ; ಮನ: ಮನಸ್ಸು; ಗೆಲವು: ಜಯ; ಮರಳು: ಹಿಂತಿರುಗು; ಮೋಹರ: ಯುದ್ಧ; ಉಳಿದ: ಮಿಕ್ಕ; ತಿಳಿ: ಅರಿತು; ಬಲು: ಶಕ್ತಿ; ಗದಾಘಾತ: ಗದೆಯ ಪೆಟ್ಟು; ಕುಲ: ವಂಶ; ಅಳಿ: ನಾಶ; ನಡೆ: ಚಲಿಸು;

ಪದವಿಂಗಡಣೆ:
ಬಲದೊಳಗೆ+ ಬೇಹವರ+ ನಾಲ್ವರನ್
ಒಳಗುಮಾಡಿ+ ಧರಾಧಿಪನು+ ಮನ
ಗೆಲವಿನಲಿ +ಮರಳಿದನು+ ಕೌರವ+ ಮೋಹರವನ್+ಉಳಿದು
ತಿಳಿದು+ ತನ್ನೊಳು +ಭೀಮಸೇನನ
ಬಲು +ಗದಾಘಾತದಲಿ+ ಕುರುಕುಲವ್
ಅಳಿವುದೆಂದು+ ಯುಯುತ್ಸು +ರಥದಿಂದ್+ಇಳಿದು+ ನಡೆತಂದ

ಅಚ್ಚರಿ:
(೧) ಧರ್ಮಜನನ್ನು ಧರಾಧಿಪ ಎಂದು ಕರೆದಿರುವುದು
(೨) ಉಳಿದು, ತಿಳಿದು – ಪ್ರಾಸ ಪದಗಳ ಬಳಕೆ