ಪದ್ಯ ೩೭: ಧರ್ಮಜನು ಭೀಮನನ್ನು ಯಾವ ಸ್ಥಿತಿಯಲ್ಲಿ ನೋಡಿದನು?

ಹುದುಗಿದಗ್ಗದ ಸತ್ವದುತ್ಸಾ
ಹದ ನಿರೂಢಶ್ವಾಸದಲಿ ಗದ
ಗದಿಪಕಂಠದ ತಳಿತ ಭಂಗದ ತಿರುಗುವಾಲಿಗಳ
ಹೆದರೆದೆಯ ಹೇರಾಳ ಶೋಕದ
ಕೆದರುಗೇಶದ ಕೆಳಕೆ ಜೋಲಿದ
ಗದೆಯ ಗರುವಾಯಳಿದ ಭೀಮನ ಕಂಡನವನೀಶ (ಅರಣ್ಯ ಪರ್ವ, ೧೪ ಸಂಧಿ, ೩೭ ಪದ್ಯ)

ತಾತ್ಪರ್ಯ:
ಸರ್ಪದ ಹಿಡಿತದಲ್ಲಿದ್ದ ಭೀಮನು ದೀರ್ಘಶ್ವಾಸವನ್ನು ಬಿಡುತ್ತಾ, ಸತ್ವ ಉತ್ಸಾಹಗಳನ್ನು ಕಳೆದುಕೊಂಡು ಕಂಠವು ಗದ್ಗದಿಸುತ್ತಿರಲು, ಅಪಮಾನಗೊಂಡು ಕಣ್ಗುಡ್ಡೆಗಳು ತಿರುಗುತ್ತಿರಲು, ಧೈರ್ಯವನ್ನು ಕಳೆದುಕೊಂಡುದನ್ನು ಯುಧಿಷ್ಠಿರನು ನೋಡಿದನು. ಮುಖದಲ್ಲಿ ಶೋಕ ವ್ಯಕ್ತವಾಗುತ್ತಿತ್ತು. ಕೂದಲುಗಳು ಕೆದರಿದ್ದವು, ಗದೆ ಜೋಲಾಡುತ್ತಿತ್ತು, ಸ್ಥೈರ್ಯವು ಮಾಯವಾಗಿತ್ತು.

ಅರ್ಥ:
ಹುದುಗು: ಅಡಗು, ಮರೆಯಾಗು; ಅಗ್ಗ: ಶ್ರೇಷ್ಠ; ಸತ್ವ: ಶಕ್ತಿ, ಬಲ; ಉತ್ಸಾಹ: ಹುರುಪು, ಆಸಕ್ತಿ; ನಿರೂಢಿ: ಸಾಮಾನ್ಯ; ಶ್ವಾಸ: ಉಸಿರಾಟ, ಗಾಳಿ; ಗದಗದಿಪ: ನಡುಗು; ಕಂಠ: ಕೊರಳು; ತಳಿತ: ಚಿಗುರಿದ; ಭಂಗ: ತುಂಡು, ಕಷ್ಟ; ತಿರುಗು: ಚಲಿಸುವ, ಸುತ್ತಾಡು; ಆಲಿ: ಕಣ್ಣು; ಹೆದರು: ಭಯಪಡು; ಹೇರಾಳ: ದೊಡ್ಡ, ವಿಶೇಷ; ಶೋಕ: ದುಃಖ; ಕೆದರು: ಹರಡಿದ; ಕೇಶ: ಕೂದಲು; ಕೆಳಕೆ: ಜೋಲು: ಇಳಿಬೀಳು; ಗದೆ: ಮುದ್ಗರ; ಗರುವ: ಬಲಶಾಲಿ; ಅಳಿ: ನಾಶ; ಕಂಡು: ನೋಡು; ಅವನೀಶ: ರಾಜ;

ಪದವಿಂಗಡಣೆ:
ಹುದುಗಿದ್+ಅಗ್ಗದ +ಸತ್ವದ್+ಉತ್ಸಾ
ಹದ +ನಿರೂಢ+ಶ್ವಾಸದಲಿ +ಗದ
ಗದಿಪ+ಕಂಠದ +ತಳಿತ +ಭಂಗದ +ತಿರುಗುವ್+ಆಲಿಗಳ
ಹೆದರೆದೆಯ +ಹೇರಾಳ +ಶೋಕದ
ಕೆದರು+ಕೇಶದ +ಕೆಳಕೆ +ಜೋಲಿದ
ಗದೆಯ +ಗರುವಾಯಳಿದ+ ಭೀಮನ+ ಕಂಡನ್+ಅವನೀಶ

ಅಚ್ಚರಿ:
(೧) ಭೀಮನ ಸ್ಥಿತಿ – ಹುದುಗಿದಗ್ಗದ ಸತ್ವದುತ್ಸಾಹದ ನಿರೂಢಶ್ವಾಸದಲಿ ಗದಗದಿಪಕಂಠದ ತಳಿತ ಭಂಗದ ತಿರುಗುವಾಲಿಗಳ