ಪದ್ಯ ೧೧: ಅರ್ಜುನನಿಗೇಕೆ ಅಳ್ಳೆದೆಯಾಯಿತು?

ಸೇನೆ ಮುರಿಯಲಿ ಕೌರವನ ದು
ಮ್ಮಾನ ಹರಿಯಲಿ ನನಗೆ ಚಿತ್ತ
ಗ್ಲಾನಿಯೆಳ್ಳನಿತಿಲ್ಲ ಕಟ್ಟಲಿ ಗುಡಿಯ ಗಜನಗರ
ಆ ನರೇಂದ್ರನ ಸಿರಿಮೊಗಕೆ ದು
ಮ್ಮಾನವೋ ಮೇಣ್ ಸುರಪುರಕೆ ಸಂ
ಧಾನವೋ ನಾನರಿಯೆನಳ್ಳೆದೆಯಾದುದೆನಗೆಂದ (ಕರ್ಣ ಪರ್ವ, ೧೪ ಸಂಧಿ, ೧೧ ಪದ್ಯ)

ತಾತ್ಪರ್ಯ:
ಅರ್ಜುನನು ತನ್ನ ದುಃಖವನ್ನು ತಡೆಯಲಾರದೆ, ನಮ್ಮ ಸೇನೆ ಸೋತು ಹಿಂದಿರುಗಲಿ, ಕೌರವನ ದುಮ್ಮಾನವಳಿದು ಸಂತೋಷ ಉಕ್ಕಲಿ, ನನ್ನ ಮನಸ್ಸಿನಲ್ಲಿ ಯಾವ ಅಸಂತೋಷವಿಲ್ಲ, ಹಸ್ತಿನಾವತಿಯಲ್ಲಿ ವಿಜಯಧ್ವಜವನ್ನು ಕೌರವನೇ ಕಟ್ಟಲಿ ನನಗೆ ಚಿಂತೆಯಿಲ್ಲ. ನಮ್ಮ ಅಣ್ಣನ ಸಿರಿಮುಖದಲ್ಲಿ ದುಃಖ ಮೂಡಿತೋ ಸ್ವರ್ಗದ ಸಂಧಾನವೋ ನಾನು ತಿಳಿಯೆನು, ಅಳ್ಳೆದೆಯಿಂದ ತೋಳಲುತ್ತಿದ್ದೇನೆ ಎಂದು ಅರ್ಜುನನು ದುಃಖಿಸಿದನು.

ಅರ್ಥ:
ಸೇನೆ: ಸೈನ್ಯ; ಮುರಿ: ಸೀಳು; ದುಮ್ಮಾನ: ಚಿತ್ತಕ್ಷೋಭೆ, ದುಃಖ; ಹರಿ: ಕೊನೆಗೊಳ್ಳು; ಚಿತ್ತ: ಮನಸ್ಸು; ಗ್ಲಾನಿ: ಅಸಂತೋಷ, ಅವನತಿ; ಕಟ್ಟು: ನಿರ್ಮಿಸು; ಗುಡಿ: ಮನೆ, ಆಲಯ; ಗಜನಗರ: ಹಸ್ತಿನಾಪುರ; ನರೇಂದ್ರ: ರಾಜ; ಮೊಗ: ಮುಖ; ಸಿರಿ: ಐಶ್ವರ್ಯ; ಸಿರಿಮೊಗ: ಚಿನ್ನದಂತ ಮುಖ; ಮೇಣ್: ಮತ್ತು; ಸುರಪುರ: ಸ್ವರ್ಗ; ಸಂಧಾನ: ಹೊಂದಿಸುವುದು, ಸಂಯೋಗ; ಅಳ್ಳೆದೆ: ಹೆದರಿಕೆ, ನಡುಗುವ ಎದೆ; ಅರಿ: ತಿಳಿ;

ಪದವಿಂಗಡಣೆ:
ಸೇನೆ+ ಮುರಿಯಲಿ +ಕೌರವನ +ದು
ಮ್ಮಾನ +ಹರಿಯಲಿ +ನನಗೆ +ಚಿತ್ತ
ಗ್ಲಾನಿಯೆಳ್+ಅನಿತಿಲ್ಲ+ ಕಟ್ಟಲಿ +ಗುಡಿಯ +ಗಜನಗರ
ಆ +ನರೇಂದ್ರನ +ಸಿರಿಮೊಗಕೆ +ದು
ಮ್ಮಾನವೋ +ಮೇಣ್ +ಸುರಪುರಕೆ+ ಸಂ
ಧಾನವೋ +ನಾನರಿಯೆನ್+ಅಳ್ಳೆದೆಯಾದುದ್+ಎನಗೆಂದ

ಅಚ್ಚರಿ:
(೧) ದುಮ್ಮಾನವೋ, ಸಂಧಾನವೋ; ಮುರಿಯಲಿ, ಹರಿಯಲಿ – ಪ್ರಾಸ ಪದಗಳು
(೨) ಪರಾಕ್ರಮಿಯಾದ ಅರ್ಜುನನಿಗೂ ಅಳ್ಳೆದೆಯಾದುದು ಎಂದು ತಿಳಿಸುವ ಪದ್ಯ