ಅಳಹಿರಿ ನಿಮಗಂಜುವೆನು ಕಾ
ಲಳ ಹೊಯ್ಯೆನು ಕುದುರೆಕಾರರು
ಮೇಲುವಾಯಲಿ ರಥಿಕರೊಡೆಹಾಯಿಸಲಿ ತೇರುಗಳ
ತೂಳಿಸಲಿ ಗಜದಳವನವರಿಗೆ
ಕೋಲ ತೊಡಚುವನಲ್ಲ ನೆರೆ ಹೀ
ಹಾಳಿಯುಳ್ಳರೆ ಬರಲಿ ಕರ್ಣ ದ್ರೋಣ ಕೃಪರೆನುತ (ದ್ರೋಣ ಪರ್ವ, ೧೫ ಸಂಧಿ, ೭೦ ಪದ್ಯ)
ತಾತ್ಪರ್ಯ:
ಘಟೋತ್ಕಚನು, ವೀರರಾದ ನಿಮಗೆ ನಾನು ಹೆದರುತ್ತೇನೆ. ಕಾಲಾಳುಗಳು ಮೇಲೆ ಬೀಳಲಿ, ನನ್ನ ಮೇಲೆ ರಥಗಳನ್ನು ಹಾಯಿಸಿರಿ, ಆನೆಗಳನ್ನು ನನ್ನ ಮೇಲೆ ಬಿಡಲಿ, ಅವರಾರನ್ನೂ ನನ್ನ ಬಾಣಗಳಿಂದ ಹೊಡೆಯುವುದಿಲ್ಲ, ಛಲ ಹುರುಡುಗಳಿದ್ದರೆ ಕರ್ಣ, ದ್ರೋಣ, ಕೃಪರು ನನ್ನೊಡನೆ ಯುದ್ಧಕ್ಕೆ ಬರಲಿ ಎಂದನು.
ಅರ್ಥ:
ಆಳು: ಸೇವಕ; ಹಿರಿ: ದೊಡ್ಡವ; ಅಂಜು: ಹೆದರು; ಕಾಲಾಳು: ಸೈನಿಕ; ಹೊಯ್ದು: ಹೊಡೆದು; ಕುದುರೆ: ಅಶ್ವ; ರಥಿಕ: ರಥದಲ್ಲಿ ಕುಳಿತು ಯುದ್ಧ ಮಾಡುವವನು; ತೇರು: ಬಂಡಿ; ತೂಳು: ಹೊಡೆ; ಗಜ: ಆನೆ; ದಳ: ಗುಂಪು, ಸೈನ್ಯ; ಕೋಲ: ಬಾಣ; ತೊಡಚು: ಕಟ್ಟು, ಬಂಧಿಸು; ನೆರೆ: ಗುಂಪು; ಹೀಹಾಳಿ: ಗಳಿಕೆ, ಅವಹೇಳನ; ಬರಲಿ: ಆಗಮಿಸು;
ಪದವಿಂಗಡಣೆ:
ಅಳಹಿರಿ +ನಿಮಗ್+ಅಂಜುವೆನು +ಕಾ
ಲಳ ಹೊಯ್ಯೆನು ಕುದುರೆಕಾರರು
ಮೇಲುವಾಯಲಿ +ರಥಿಕರೊಡೆ+ಹಾಯಿಸಲಿ +ತೇರುಗಳ
ತೂಳಿಸಲಿ +ಗಜದಳವನ್+ಅವರಿಗೆ
ಕೋಲ +ತೊಡಚುವನಲ್ಲ +ನೆರೆ+ ಹೀ
ಹಾಳಿಯುಳ್ಳರೆ +ಬರಲಿ+ ಕರ್ಣ +ದ್ರೋಣ +ಕೃಪರೆನುತ
ಅಚ್ಚರಿ:
(೧) ಹೊಯ್ಯೆನು, ಹಾಯಿಸು, ಹೀಹಾಳಿ – ಹ ಕಾರದ ಪದಗಳು