ಪದ್ಯ ೫೨: ಸುಪ್ರತೀಕ ಗಜವು ಹೇಗೆ ನಿಂತಿತು?

ಇಳುಹಿದನು ಬಲುಗುಳವ ಖಂಡಿಸಿ
ಕಳಚಿದನು ಮೊಗರಂಬವನು ಹೊ
ಮ್ಮಿಳಿಯ ಕುಣಿಕೆಯ ಮುರಿದು ತರಿದನು ಸುತ್ತ ರೆಂಚೆಗಳ
ಹಳವಿಗೆಯನಾ ಛತ್ರ ಚಮರಾ
ವಳಿಯ ಸೀಳಿದು ಬಿಸುಟನಾ ಗಜ
ತಿಲಕ ಮುಂಡಾಸನದಲಿರ್ದುದು ಭೂಪ ಕೇಳೆಂದ (ದ್ರೋಣ ಪರ್ವ, ೩ ಸಂಧಿ, ೫೨ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ಕೇಳು, ಅರ್ಜುನನು ಆನೆಯ ಗುಳವನ್ನು ಕತ್ತರಿಸಿ, ಮೊಗರಂಬವನ್ನು ಕೆಳಬೀಳಿಸಿ, ಬಂಗಾರದ ಮಿಣಿಯ ಕುಣಿಕೆಯನ್ನು ಕತ್ತರಿಸಿ, ರೆಂಚೆ, ಧ್ವಜ, ಛತ್ರ ಚಾಮರಗಳನ್ನು ಸೀಳಿ ಎಸೆಯಲು ಸುಪ್ರತೀಕವು ಯಾವ ರಕ್ಷಣೆಯೂ ಇಲ್ಲದೆ ನಿಂತಿತು.

ಅರ್ಥ:
ಇಳುಹು: ಇಳಿಸು, ಕತ್ತರಿಸು; ಬಲು: ಬಹಳ; ಗುಳ: ಆನೆ ಕುದುರೆಗಳ ಪಕ್ಷರಕ್ಷೆ; ಖಂಡಿಸು: ಕಡಿ, ಕತ್ತರಿಸು; ಕಳಚು: ಬೇರ್ಪಡಿಸು; ಮೊಗರಂಬ: ಮುಖಕ್ಕೆ ತೊಡಿಸುವ ಅಲಂಕಾರದ ಸಾಧನ; ಹೊಮ್ಮು: ಹುರುಪು, ಉತ್ಸಾಹ; ಕುಣಿಕೆ: ಕೊನೆ, ತುದಿ; ಮುರಿ: ಸೀಳು; ತರಿ: ಕಡಿ, ಕತ್ತರಿಸು; ಸುತ್ತ: ಸುತ್ತಲೂ; ರೆಂಚೆ: ಆನೆ, ಕುದುರೆಗಳ ಪಕ್ಕರಕ್ಕೆ; ಹಳವಿಗೆ: ಬಾವುಟ; ಛತ್ರ: ಕೊಡೆ; ಚಮರ: ಚಾಮರ; ಆವಳಿ: ಸಾಲು; ಸೀಳು: ಕತ್ತರಿಸು; ಬಿಸುಟು: ಹೊರಹಾಕು; ಗಜ: ಆನೆ; ತಿಲಕ: ಶ್ರೇಷ್ಠ; ಮುಂಡ: ತಲೆ; ಆಸನ: ಆನೆಯ ಹೆಗಲು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಇಳುಹಿದನು +ಬಲುಗುಳವ +ಖಂಡಿಸಿ
ಕಳಚಿದನು +ಮೊಗರಂಬವನು +ಹೊ
ಮ್ಮಿಳಿಯ +ಕುಣಿಕೆಯ +ಮುರಿದು +ತರಿದನು +ಸುತ್ತ +ರೆಂಚೆಗಳ
ಹಳವಿಗೆಯನಾ +ಛತ್ರ +ಚಮರ
ಆವಳಿಯ +ಸೀಳಿದು +ಬಿಸುಟನ್+ಆ +ಗಜ
ತಿಲಕ +ಮುಂಡಾಸನದಲ್+ಇರ್ದುದು +ಭೂಪ +ಕೇಳೆಂದ

ಅಚ್ಚರಿ:
(೧) ಸುಪ್ರತೀಕವನ್ನು ಗಜತಿಲಕ ಎಂದು ಕರೆದಿರುವುದು
(೨) ಖಂಡಿಸಿ, ಮುರಿ, ತರಿ, ಸೀಳಿ, ಬಿಸುಟು – ಹೋರಾಟವನ್ನು ವಿವರಿಸುವ ಪದಗಳು