ಸೆಳೆದು ತಕ್ಕೈಸಿದನು ತಾವರೆ
ಗೊಳದ ತೋಟಿಯ ಹದಕೆ ಕಂಪಿಸಿ
ಬಳಿಕ ಕಪಿದರ್ಶನದ ಕೌತೂಹಲಕೆ ಭುಲ್ಲವಿಸಿ
ನಳಿನಗಂಧದ ಗಾಢತರ ಸುಖ
ದೊಳಗೆ ಹೊಂಪುಳಿಯೋಗಿ ಭೂಪತಿ
ತಿಲಕನಿದ್ದನು ಗಂಧಮಾದನ ಗಿರಿಯ ತಪ್ಪಲಲಿ (ಅರಣ್ಯ ಪರ್ವ, ೧೨ ಸಂಧಿ, ೫ ಪದ್ಯ)
ತಾತ್ಪರ್ಯ:
ಧರ್ಮಜನು ಭೀಮನನ್ನು ನೋಡಿ ಸೆಳೆದು ಪ್ರೀತಿಯಿಂದ ತಬ್ಬಿಕೊಂಡು ನಡೆದುದನ್ನು ಕೇಳಿದನು, ಸರೋವರದಲ್ಲಿ ನಡೆದ ಕದನವನ್ನು ಕೇಳಿ ನಡುಗಿ, ಹನುಮನ ದರ್ಶನದ ವಿವರವನ್ನು ಕೇಳಿ ಆಶ್ಚರ್ಯಭರಿತನಾದನು. ಸೌಗಂಧಿಕ ಪುಷ್ಪ ಪರಿಮಳವನ್ನು ಆಘ್ರಾಣಿಸಿ ಸುಖದಿಂದ ಹಿಗ್ಗಿದನು, ಆಗ ಅವರು ಗಂಧಮಾದನ ಗಿರಿಯ ತಪ್ಪಲಲ್ಲಿದ್ದರು.
ಅರ್ಥ:
ಸೆಳೆ: ಜಗ್ಗು, ಎಳೆ, ಆಕರ್ಷಿಸು; ತಕ್ಕೆ: ಅಪ್ಪುಗೆ, ಆಲಿಂಗನ; ತಾವರೆ: ಕಮಲ; ಕೊಳ: ಸರೋವರ; ತೋಟಿ: ಕಾದಾಟ; ಹದ: ಸ್ಥಿತಿ, ರೀತಿ; ಕಂಪಿಸು: ನಡುಗು; ಬಳಿಕ: ನಂತರ; ಕಪಿ: ಹನುಮ; ದರ್ಶನ: ನೋಟ; ಕೌತೂಹಲ: ಆಶ್ಚರ್ಯ; ಭುಲ್ಲವಿಸು: ಉತ್ಸಾಹಗೊಳ್ಳು; ನಳಿನ: ಕಮಲ; ಗಂಧ: ಸುವಾಸನೆ; ಗಾಢ: ಹೆಚ್ಚಳ, ಅತಿಶಯ; ಸುಖ: ನೆಮ್ಮದಿ, ಸಂತಸ; ಹೊಂಪುಳಿ: ಹಿಗ್ಗು, ಸಂತೋಷ; ಭೂಪತಿ: ರಾಜ; ತಿಲಕ: ಶ್ರೇಷ್ಠ;
ಪದವಿಂಗಡಣೆ:
ಸೆಳೆದು+ ತಕ್ಕೈಸಿದನು+ ತಾವರೆ
ಕೊಳದ +ತೋಟಿಯ +ಹದಕೆ +ಕಂಪಿಸಿ
ಬಳಿಕ +ಕಪಿ+ದರ್ಶನದ+ ಕೌತೂಹಲಕೆ+ ಭುಲ್ಲವಿಸಿ
ನಳಿನ+ಗಂಧದ +ಗಾಢತರ+ ಸುಖ
ದೊಳಗೆ+ ಹೊಂಪುಳಿಯೋಗಿ +ಭೂಪತಿ
ತಿಲಕನಿದ್ದನು +ಗಂಧಮಾದನ+ ಗಿರಿಯ +ತಪ್ಪಲಲಿ
ಅಚ್ಚರಿ:
(೧) ಪ್ರೀತಿಯನ್ನು ತೋರಿಸುವ ಪರಿ – ಸೆಳೆದು ತಕ್ಕೈಸಿದನು