ಲಲಿತ ಚಂದ್ರಿಕೆಗೇಕೆ ದವಾ
ನಳನ ಖಾಡಾಖಾಡಿ ಸುರಲತೆ
ಯೆಳೆಯ ಕುಡಿ ಮುರಿದೊತ್ತಲಾಪುದೆ ವಜ್ರಧಾರೆಗಳ
ನಳಿನ ನಾಳವು ಗಜದ ಕೈಯೊಡ
ನಳವಿಗೊಡಲಂತರವೆ ಪಾಪಿಗ
ಳೆಳಮಗನ ನೂಕಿದರು ಕಾಳೆಗಕೆಂದುದಮರಗಣ (ದ್ರೋಣ ಪರ್ವ, ೪ ಸಂಧಿ, ೪೮ ಪದ್ಯ)
ತಾತ್ಪರ್ಯ:
ದೇವತೆಗಳು ಅಭಿಮನ್ಯುವು ಯುದ್ಧಕ್ಕೆ ಬರುವುದನ್ನು ಕಂಡು ಮರುಗಿದರು, ಸುಂದರವಾದ ಬೆಳುದಿಂಗಳಿಗೆ ದಾವಾನಲನೊಡನೆ ಮಲ್ಲಯುದ್ಧವಾಗಿದೆಯೆಲ್ಲಾ, ಕಲ್ಪಲತೆಯ ಎಳೆಯಕುಡಿ ವಜ್ರಧಾರೆಗಳನ್ನು ತಡೆದು ಹಿಂದಕ್ಕೊತ್ತೀತೇ? ಕಮಲ ಪುಷ್ಪನಾಳವು ಆನೆಯೊಡನೆ ಹೋರಾಡಿಗೆದ್ದೀತೇ? ಈ ಪಾಪಿಗಳು ಎಳೆವಯಸ್ಸಿನ ಮಗನನ್ನು ಯುದ್ಧಕ್ಕೆ ನೂಕಿದರು ಎಂದು ಜರಿದರು.
ಅರ್ಥ:
ಲಲಿತ: ಚೆಲುವಾದ; ಚಂದ್ರಿಕೆ: ಬೆಳದಿಂಗಳು; ದಾವಾನಳ: ಜೋರಾದ ಬೆಂಕಿ; ಅನಲ: ಬೆಂಕಿ; ಖಾಡಾಖಾಡಿ: ಮಲ್ಲಯುದ್ಧ; ಸುರಲತೆ: ದೇವಲೋಕದ ಬಳ್ಳಿ; ಎಳೆ: ಚಿಕ್ಕ; ಕುಡಿ: ಚಿಗುರು; ಮುರಿ: ಸೀಳು; ಒತ್ತು: ಮುತ್ತು, ಚುಚ್ಚು; ವಜ್ರ: ಗಟ್ಟಿಯಾದ; ಧಾರೆ: ವರ್ಷ; ನಳಿನ: ಕಮಲ; ನಾಳ: ಒಳಗೆ ಟೊಳ್ಳಾಗಿರುವ ದಂಟು; ಗಜ: ಆನೆ; ಕೈ: ಹಸ್ತ; ಅಳವು: ಶಕ್ತಿ; ಅಂತರ: ದೂರ; ಪಾಪಿ: ದುಷ್ಟ; ಎಳಮಗ: ಚಿಕ್ಕವಯಸ್ಸಿನವ; ನೂಕು: ತಳ್ಳು; ಕಾಳೆಗ: ಯುದ್ಧ; ಅಮರಗಣ: ದೇವತೆಗಳ ಗುಂಪು;
ಪದವಿಂಗಡಣೆ:
ಲಲಿತ +ಚಂದ್ರಿಕೆಗೇಕೆ +ದವಾ
ನಳನ +ಖಾಡಾಖಾಡಿ +ಸುರಲತೆ
ಎಳೆಯ+ ಕುಡಿ+ ಮುರಿದ್+ಒತ್ತಲಾಪುದೆ +ವಜ್ರಧಾರೆಗಳ
ನಳಿನ +ನಾಳವು +ಗಜದ +ಕೈಯೊಡನ್
ಅಳವಿಗೊಡಲಂತರವೆ+ ಪಾಪಿಗಳ್
ಎಳ+ಮಗನ +ನೂಕಿದರು+ ಕಾಳೆಗಕೆಂದುದ್+ಅಮರಗಣ
ಅಚ್ಚರಿ:
(೧) ಉಪಮಾನಗಳ ಪ್ರಯೋಗ – ಲಲಿತ ಚಂದ್ರಿಕೆಗೇಕೆ ದವಾನಳನ ಖಾಡಾಖಾಡಿ; ಸುರಲತೆ
ಯೆಳೆಯ ಕುಡಿ ಮುರಿದೊತ್ತಲಾಪುದೆ ವಜ್ರಧಾರೆಗಳ; ನಳಿನ ನಾಳವು ಗಜದ ಕೈಯೊಡ
ನಳವಿಗೊಡಲಂತರವೆ