ಪದ್ಯ ೯: ಮಿಕ್ಕಾವ ವಸ್ತುಗಳನ್ನು ಯುಧಿಷ್ಠಿರನು ಸೋತನು?

ತೀರಿತಿಂದ್ರಪ್ರಸ್ಥದುರು ಭಂ
ಡಾರ ತನ್ನರಮನೆಯ ಪೈಕದ
ವಾರಕದ ಭಂಗಾರವೊಡ್ಡಿತು ಕೋಟಿ ಸಂಖ್ಯೆಯಲಿ
ಸೇರಿತದು ಕುರುಪತಿಗೆ ರಾಯನ
ನಾರಿಯರ ವಿವಿಧಾಭರಣ ಸಿಂ
ಗಾರವೊಡ್ಡಿತು ಕೊಂಡು ಮುಳುಗಿತು ಖಡ್ಡತನ ನೃಪನ (ಸಭಾ ಪರ್ವ, ೧೫ ಸಂಧಿ, ೯ ಪದ್ಯ)

ತಾತ್ಪರ್ಯ:
ಇಂದ್ರಪ್ರಸ್ಥಪುರದ ಬೊಕ್ಕಸವು ಖಾಲಿಯಾಯಿತು, ಎಲ್ಲಾ ಹಣವು ಪಣವಾಗಿಟ್ಟು ಧರ್ಮಜನು ಸೋತನು. ಪರಿವಾರದವರಿಗೆ ಬಳುವಳಿಯಾಗಿ ಬಂದಿದ್ದ ಹೊನ್ನಿನ ಆಭರಣ, ಧನಗಳನ್ನು ಕೋಟಿಗಟ್ಟಲೆ ಒಡ್ಡದನು. ಅವೆಲ್ಲವೂ ಕೌರವನ ವಶವಾಯಿತು. ಅಂತಃಪುರ ಸ್ತ್ರೀಯರ ಆಭರಣಗಳನ್ನೂ ಒಡ್ಡಿದ ಯುಧಿಷ್ಠಿರನ ತಿಳಿಗೇಡಿತನವು ಅದನ್ನೂ ಸೋತಿತು.

ಅರ್ಥ:
ತೀರಿತು: ಮುಗಿಯಿತು; ಉರು: ಅತಿದೊಡ್ಡ, ಶ್ರೇಷ್ಠ; ಭಂಡಾರ: ಬೊಕ್ಕಸ; ಅರಮನೆ: ರಾಜರ ಆಲಯ; ಪೈಕ: ಪರಿವಾರ, ಪಂಗಡ; ವಾರಕ: ಅಂತಃಪುರ; ಭಂಗಾರ: ಚಿನ್ನ; ಒಡ್ಡು: ಜೂಜಿನಲ್ಲಿ ಒಡ್ಡುವ ಹಣ; ಕೋಟಿ: ಲೆಕ್ಕವಿಲ್ಲದಷ್ಟು; ಸಂಖ್ಯೆ: ಎಣಿಕೆ; ಸೇರು: ತಲುಪು; ರಾಯ: ರಾಜ; ನಾರಿ: ಹೆಣ್ಣು; ವಿವಿಧ: ಹಲವಾರು; ಆಭರಣ: ಒಡವೆ; ಸಿಂಗಾರ: ಶೃಂಗಾರ, ಚೆಲುವು; ಮುಳುಗು: ತೋಯು; ಖಡ್ಡ: ತಿಳಿಗೇಡಿ, ಹೆಡ್ಡ; ನೃಪ: ರಾಜ;

ಪದವಿಂಗಡಣೆ:
ತೀರಿತ್+ಇಂದ್ರಪ್ರಸ್ಥದ್+ಉರು +ಭಂ
ಡಾರ +ತನ್+ಅರಮನೆಯ +ಪೈಕದ
ವಾರಕದ+ ಭಂಗಾರವೊಡ್ಡಿತು+ ಕೋಟಿ +ಸಂಖ್ಯೆಯಲಿ
ಸೇರಿತದು +ಕುರುಪತಿಗೆ +ರಾಯನ
ನಾರಿಯರ +ವಿವಿಧ+ಆಭರಣ +ಸಿಂ
ಗಾರವ್+ಒಡ್ಡಿತು +ಕೊಂಡು +ಮುಳುಗಿತು +ಖಡ್ಡತನ+ ನೃಪನ

ಅಚ್ಚರಿ:
(೧) ಪೈಕ, ವಾರಕ – ಪದಗಳ ಬಳಕೆ
(೨) ಧರ್ಮಜನನ್ನು ಖಡ್ಡತನ ನೃಪ ಎಂದು ಕರೆದಿರುವುದು