ಪದ್ಯ ೨೧: ಅಶ್ವತ್ಥಾಮನು ಯಾವ ಯಜ್ಞವನ್ನು ಮಾಡಲು ನಿರ್ಧರಿಸಿದನು?

ಇದು ವಿರೂಪಾಕ್ಷನ ಮನಃಕ್ಷೋ
ಭದ ವಿಕಾರವಲಾ ಪಿನಾಕಿಯ
ಪದವ ಹಿಡಿದೋಲೈಸುವೆನು ಸರ್ವಾಂಗಯಜ್ಞದಲಿ
ಇದುಕುಪಾಯವ ಬಲ್ಲೆನೆಂದು
ಬ್ಬಿದನು ಬೊಬ್ಬಿರಿದಾರಿ ತೋಡಿದ
ನುದರವಹ್ನಿಯನಿದಿರೊಳಗ್ನಿತ್ರಯವ ನಿರ್ಮಿಸಿದ (ಗದಾ ಪರ್ವ, ೯ ಸಂಧಿ, ೨೧ ಪದ್ಯ)

ತಾತ್ಪರ್ಯ:
ಆಗ ಅಶ್ವತ್ಥಾಮನು, ಇದು ವಿರೂಪಾಕ್ಷನ ಮನಃಕ್ಷೋಭೆಯಿಂದಾದ ವಿಕಾರ. ಇದಕ್ಕೆ ಉಪಾಯವನ್ನು ಬಲ್ಲೆ, ಸರ್ವಾಂಗ ಯಜ್ಞದಿಂದ ಶಿವನನ್ನು ಒಲಿಸುತ್ತೇನೆ ಎಂದುಕೊಂಡು, ವೈಶ್ವಾನರನನ್ನು ಬಗೆದು ತೋಡಿ ಇದಿರಿನಲ್ಲಿ ಗಾರ್ಹಪತ್ಯ, ಅಹವನೀಯ, ದಕ್ಷಿಣಾಗ್ನಿಗಳೆಂಬ ಮುರು ಅಗ್ನಿಗಲನ್ನು ಸ್ಥಾಪಿಸಿದನು.

ಅರ್ಥ:
ವಿರೂಪಾಕ್ಷ: ಶಿವ; ಮನಃ: ಮನಸ್ಸು; ಕ್ಷೋಭೆ: ಕೋಪ, ವಿಪತ್ತು; ವಿಕಾರ: ರೂಪಾಂತರ, ವಿಕೃತಿ; ಪಿನಾಕಿ: ತ್ರಿಶೂಲ; ಪದ: ಚರಣ; ಹಿಡಿ: ಗ್ರಹಿಸು; ಓಲೈಸು: ಉಪಚರಿಸು; ಸರ್ವಾಂಗ: ಎಲ್ಲಾ ಅಂಗಗಳು; ಯಜ್ಞ: ಕ್ರತು; ಉಪಾಯ: ಯುಕ್ತಿ, ಹಂಚಿಕೆ; ಬಲ್ಲೆ: ತಿಳಿ; ಉಬ್ಬು: ಹಿಗ್ಗು, ಗರ್ವಿಸು; ಬೊಬ್ಬಿರಿ: ಗರ್ಜಿಸು; ತೋಡು: ಹಳ್ಳ, ಅಗೆ; ಉದರ: ಹೊಟ್ಟೆ; ವಹ್ನಿ: ಅಗ್ನಿ; ಇದಿರು: ಎದುರು; ಅಗ್ನಿ: ಬೆಂಕಿ; ತ್ರಯ: ಮೂರು; ನಿರ್ಮಿಸು: ಕಟ್ಟು, ರಚಿಸು;

ಪದವಿಂಗಡಣೆ:
ಇದು +ವಿರೂಪಾಕ್ಷನ+ ಮನಃ+ಕ್ಷೋ
ಭದ +ವಿಕಾರವಲಾ +ಪಿನಾಕಿಯ
ಪದವ +ಹಿಡಿದ್+ಓಲೈಸುವೆನು +ಸರ್ವಾಂಗ+ಯಜ್ಞದಲಿ
ಇದುಕ್+ಉಪಾಯವ +ಬಲ್ಲೆನೆಂದ್
ಉಬ್ಬಿದನು +ಬೊಬ್ಬಿರಿದ್+ಆರಿ +ತೋಡಿದನ್
ಉದರ+ವಹ್ನಿಯನ್+ಇದಿರೊಳ್+ಅಗ್ನಿತ್ರಯವ +ನಿರ್ಮಿಸಿದ

ಅಚ್ಚರಿ:
(೧) ವಹ್ನಿ, ಅಗ್ನಿ; ವಿರೂಪಾಕ್ಷ, ಪಿನಾಕಿ – ಸಮಾನಾರ್ಥಕ ಪದ

ಪದ್ಯ ೪೪: ಭೀಷ್ಮನು ಧೃತರಾಷ್ಟ್ರನಿಗೆ ಯಾರನ್ನು ಸಂತೈಸಲು ಹೇಳಿದನು?

ಆಹಹ ಭೂತ ಕ್ಷೋಭವಿದು ನಿ
ರ್ದಹಿಸುವುದು ಕುರುಕುಲವ ನಕಟೀ
ಮಹಿಳೆಯೊರಲಿದಳಮರ ನಿಕರಕೆ ದೈವಕೃತವಿದೆಲೆ
ಕುಹಕಿ ಮಕ್ಕಳನಿಕ್ಕಿ ಮೌನದೊ
ಳಿಹರೆ ಬಾ ಧೃತರಾಷ್ಟ್ರ ಪಾಂಡವ
ಮಹಿಳೆಯನು ಸಂತೈಸು ನಡೆನಡೆಯೆಂದನಾ ಭೀಷ್ಮ (ಸಭಾ ಪರ್ವ, ೧೬ ಸಂಧಿ, ೪೪ ಪದ್ಯ)

ತಾತ್ಪರ್ಯ:
ಅಯ್ಯೋ ಪಂಚಭೂತಗಳಲ್ಲಿ ಉಂಟಾದ ಈ ಕೋಲಾಹಲವು ಕುರುಕುಲವನ್ನೇ ಸುಟ್ಟು ಬೂದಿ ಮಾಡುತ್ತದೆ, ದ್ರೌಪದಿಯು ದೇವತೆಗಳಿಗೆ ಮೊರೆಯಿಟ್ಟುದುದರಿಂದ ದೇವತೆಗಳು ಈ ಉತ್ಪಾತಗಳನ್ನುಂಟುಮಾಡುತ್ತಿದ್ದಾರೆ. ನಿನ್ನ ದುಷ್ಟ ಮಕ್ಕಳನ್ನು ದುಷ್ಕೃತ್ಯಮಾಡಲು ಬಿಟ್ಟು ನೀನು ಮೌನದಿಂದಿರುವುದು ಸರಿಯಲ್ಲ. ದ್ರೌಪದಿಯನ್ನು ಸಂತೈಸು ಬಾ, ನಡೆ ಎಂದು ಭೀಷ್ಮನು ಧೃತರಾಷ್ಟ್ರನಿಗೆ ಹೇಳಿದನು.

ಅರ್ಥ:
ಅಹಹ: ಓಹೋ!; ಭೂತ: ದೆವ್ವ, ಪಿಶಾಚಿ, ಪಂಚಭೂತ; ಕ್ಷೋಭೆ: ಉದ್ವೇಗ; ದಹಿಸು: ಸುಡು; ಅಕಟ: ಅಯ್ಯೋ; ಮಹಿಳೆ: ಹೆಣ್ಣು; ಒರಲು: ಗೋಳು, ಕೂಗು; ಅಮರ: ದೇವ, ಸುರರು; ನಿಕರ: ಗುಂಪು; ದೈವ: ಭಗವಂತ; ಕೃತ: ಮಾಡಿದ; ಕುಹಕಿ: ಕಪಟಿ; ಮಕ್ಕಳು: ಪುತ್ರರು; ಮೌನ: ಸದ್ದಿಲ್ಲದ ಸ್ಥಿತಿ; ಸಂತೈಸು: ಸಮಾಧಾನ ಪಡಿಸು; ನಡೆ: ಚಲಿಸು, ಮುಂದೆ ಹೋಗು;

ಪದವಿಂಗಡಣೆ:
ಆಹಹ +ಭೂತ +ಕ್ಷೋಭವಿದು +ನಿ
ರ್ದಹಿಸುವುದು +ಕುರುಕುಲವನ್ + ಅಕಟ
ಈ+ಮಹಿಳೆ+ಒರಲಿದಳ್+ಅಮರ+ ನಿಕರಕೆ +ದೈವ+ಕೃತವಿದ್+ಎಲೆ
ಕುಹಕಿ+ ಮಕ್ಕಳನಿಕ್ಕಿ+ ಮೌನದೊಳ್
ಇಹರೆ+ ಬಾ +ಧೃತರಾಷ್ಟ್ರ +ಪಾಂಡವ
ಮಹಿಳೆಯನು +ಸಂತೈಸು +ನಡೆನಡೆ+ಎಂದನಾ +ಭೀಷ್ಮ

ಅಚ್ಚರಿ:
(೧) ದ್ರೌಪದಿಯನ್ನು ಮಹಿಳೆ ಎಂದು ಕರೆದಿರುವುದು
(೨) ಧೃತರಾಷ್ಟ್ರನನ್ನು ಬಯ್ಯುವ ಪರಿ – ಕುಹಕಿ ಮಕ್ಕಳನಿಕ್ಕಿ ಮೌನದೊಳಿಹ