ಪದ್ಯ ೧೮: ದುರ್ಯೋಧನನು ಎಲ್ಲಿ ನಿಂತಿದ್ದನು?

ಶಕುನಿ ಸಹದೇವನನುಳೂಕನು
ನಕುಲನನು ಕುರುರಾಯನನುಜರು
ಚಕಿತ ಚಾಪನ ಕೆಣಕಿದರು ಪವಮಾನನಂದನನ
ಅಕಟ ಫಲುಗುಣ ಎನುತ ಸಮಸ
ಪ್ತಕರು ಕವಿದರು ನೂರು ಗಜದಲಿ
ಸಕಲದಳಕೊತ್ತಾಗಿ ನಿಂದನು ಕೌರವರಾಯ (ಗದಾ ಪರ್ವ, ೨ ಸಂಧಿ, ೧೮ ಪದ್ಯ)

ತಾತ್ಪರ್ಯ:
ಶಕುನಿಯು ಸಹದೇವನನ್ನು, ಉಲೂಕನು, ನಕುಲನನ್ನು, ಕೌರವನ ತಮ್ಮಂದಿರು ಭೀಮನನ್ನೂ, ಸಂಶಪ್ತಕರು ಅರ್ಜುನನನ್ನೂ ಎದುರಿಸಿದರು. ಇವರ ಹಿಂದೆ ನೂರಾನೆಗಳ ನಡುವೆ ದುರ್ಯೋಧನನು ಬೆಂಬಲವಾಗಿ ನಿಂತನು.

ಅರ್ಥ:
ಅನುಜ: ತಮ್ಮ; ಚಕಿತ: ವಿಸ್ಮಿತನಾದ; ಚಾಪ: ಬಿಲ್ಲು; ಕೆಣಕು: ರೇಗಿಸು; ಪವಮಾನ: ವಾಯು; ನಂದನ: ಮಗ; ಅಕಟ: ಅಯ್ಯೋ; ಸಮಸಪ್ತಕ: ಪ್ರಮಾಣ ಮಾಡಿ ಹೋರಾಟ ಮಾಡುವವರು; ಕವಿ: ಆವರಿಸು; ನೂರು: ಶತ; ಗಜ: ಆನೆ; ಸಕಲ: ಎಲ್ಲ; ದಳ: ಸೈನ್ಯ; ಒತ್ತು: ಮುತ್ತು; ನಿಂದು: ನಿಲ್ಲು; ರಾಯ: ರಾಜ;

ಪದವಿಂಗಡಣೆ:
ಶಕುನಿ +ಸಹದೇವನನ್+ಉಳೂಕನು
ನಕುಲನನು +ಕುರುರಾಯನ್+ಅನುಜರು
ಚಕಿತ +ಚಾಪನ +ಕೆಣಕಿದರು +ಪವಮಾನ+ನಂದನನ
ಅಕಟ +ಫಲುಗುಣ +ಎನುತ +ಸಮಸ
ಪ್ತಕರು +ಕವಿದರು +ನೂರು +ಗಜದಲಿ
ಸಕಲ+ದಳಕೊತ್ತಾಗಿ +ನಿಂದನು +ಕೌರವರಾಯ

ಅಚ್ಚರಿ:
(೧) ಚ ಕಾರದ ಜೋಡಿ ಪದ – ಚಕಿತ ಚಾಪನ
(೨) ಕುರುರಾಯ, ಕೌರವರಾಯ – ದುರ್ಯೋಧನನನ್ನು ಕರೆದ ಪರಿ

ಪದ್ಯ ೨೪: ಶಲ್ಯನು ಯಾವ ಶಪಥವನ್ನು ಮಾಡಿದನು?

ರಾಯ ನಿಲುವನೊ ಮೇಣು ಪಾರ್ಥನೊ
ವಾಯುಸುತನೋ ನಿಮ್ಮ ಮೂವರೊ
ಳಾಯುಧವ ಕೊಂಡಾರು ಹೊಕ್ಕರೆ ನಿಲುವೆನವರೊಡನೆ
ನಾಯಕರು ಮಿಕ್ಕವರೊಡನೆ ಬಿಲು
ಸಾಯಕವನೊಡ್ಡಿದಡೆ ಕೌರವ
ರಾಯನಾಣೆಯೆನುತ್ತ ಮದವೇರಿದನು ಕಲಿಶಲ್ಯ (ಶಲ್ಯ ಪರ್ವ, ೩ ಸಂಧಿ, ೨೪ ಪದ್ಯ)

ತಾತ್ಪರ್ಯ:
ಎಲೈ ಪಾಂಡವರೇ, ನನ್ನೊಡನೆ ಯುದ್ಧಕ್ಕೆ ಧರ್ಮಜನು ನಿಲ್ಲುವನೋ, ಅಥವ ಅರ್ಜುನ ಭೀಮರು ನಿಲ್ಲುವರೋ? ಯಾರು ಆಯುಧಪಾಣಿಗಳಾಗಿ ಬರುವರೋ ಅವರೊಡನೆ ಕಾಳಗವನ್ನು ಮಾಡುತ್ತೇನೆ, ಉಳಿದ ಸೇನಾನಾಯಕರೊಡನೆ ಕೌರವನಾಣೆ ಯುದ್ಧಮಾಡುವುದಿಲ್ಲ ಎಂದು ಶಲ್ಯನು ಶಪಥ ಮಾಡಿದನು.

ಅರ್ಥ:
ರಾಯ: ರಾಜ; ನಿಲ್ಲು: ತಡೆ; ಮೇಣ್: ಅಥವಾ; ವಾಯುಸುತ: ಭೀಮ; ಸುತ: ಮಗ; ಆಯುಧ: ಶಸ್ತ್ರ; ಕೊಂಡು: ಗ್ರಹಿಸು; ಹೊಕ್ಕು: ಸೇರು; ನಾಯಕ: ಒಡೆಯ; ಮಿಕ್ಕ: ಉಳಿದ; ಬಿಲು: ಬಿಲ್ಲು, ಚಾಪ; ಸಾಯಕ: ಬಾಣ, ಶರ; ಆಣೆ: ಪ್ರಮಾಣ; ಮದ: ಅಹಂಕಾರ; ಏರು: ಹೆಚ್ಚಾಗು; ಕಲಿ: ಶೂರ; ಒಡ್ಡು: ನೀಡು;

ಪದವಿಂಗಡಣೆ:
ರಾಯ+ ನಿಲುವನೊ +ಮೇಣು +ಪಾರ್ಥನೊ
ವಾಯುಸುತನೋ +ನಿಮ್ಮ +ಮೂವರೊಳ್
ಆಯುಧವ+ ಕೊಂಡಾರು +ಹೊಕ್ಕರೆ +ನಿಲುವೆನ್+ಅವರೊಡನೆ
ನಾಯಕರು +ಮಿಕ್ಕವರೊಡನೆ+ ಬಿಲು
ಸಾಯಕವನ್+ಒಡ್ಡಿದಡೆ +ಕೌರವ
ರಾಯನಾಣೆ+ಎನುತ್ತ +ಮದವೇರಿದನು +ಕಲಿ+ಶಲ್ಯ

ಅಚ್ಚರಿ:
(೧) ನಾಯಕ, ಸಾಯಕ – ಪ್ರಾಸ ಪದ
(೨) ರಾಯ – ೧, ೬ ಸಾಲಿನ ಮೊದಲ ಪದ

ಪದ್ಯ ೮೩: ಕೌರವ ಸೈನ್ಯವೇಕೆ ತಲ್ಲಣಿಸಿತು?

ಹೋಯಿತಾ ಮಾತೇಕೆ ಗಜದಳ
ಮಾಯವಾದುದು ವಂಗಭೂಪನ
ಬಾಯೊಳಗೆ ಬೆಟ್ಟಿದನು ಗದೆಯನು ಮಿಕ್ಕ ನಾಲ್ವರನು
ಸಾಯ ಬಡಿದನು ಮುಂದೆ ಕೌರವ
ರಾಯನನು ತಾಗಿದನು ಭೀಮನ
ದಾಯ ಬಂದುದು ಸಕಲ ಕುರು ತಳತಂತ್ರ ತಲ್ಲಣಿಸೆ (ದ್ರೋಣ ಪರ್ವ, ೨ ಸಂಧಿ, ೮೩ ಪದ್ಯ)

ತಾತ್ಪರ್ಯ:
ಗಜಸೈನ್ಯವು ಮಾಯವಾಗಿ ಹೋಯಿತು, ಅದರ ಮಾತೇಕೆ? ವಂಗರಾಜನ ಬಾಯಲ್ಲಿ ಗದೆಯನ್ನು ತುರುಕಿದನು. ಉಳಿದ ನಾಲ್ವರನ್ನು ಸಾಯಬಡಿದನು. ಕೌರವನ ಮೇಲೆ ಆಕ್ರಮಣ ಮಾಡಿದನು. ಸಮಸ್ತ ಕುರುಸೈನ್ಯವೂ ತಲ್ಲಣಿಸಿತು.

ಅರ್ಥ:
ಹೋಯಿತು: ಗಮಿಸು; ಮಾತು: ವಾಣಿ; ಗಜದಳ: ಆನೆಯ ಸೈನ್ಯ; ಮಾಯ: ಕಣ್ಣಿಗೆ ಕಾಣದಿರು; ಭೂಪ: ರಾಜ; ಬೆಟ್ಟು: ಕಡಿ, ಕತ್ತರಿಸು; ಗದೆ: ಮುದ್ಗರ; ಮಿಕ್ಕು: ಉಳಿದ; ಸಾಯು: ಸಾಯಿಸು; ಬಡಿ: ಹೊಡೆ; ಮಂದೆ: ಎದುರು; ರಾಯ: ರಾಜ; ತಾಗು: ಮುಟ್ಟು; ಆಯ: ಪರಿಮಿತಿ; ಬಂದು: ಆಗಮಿಸು; ಸಕಲ: ಎಲ್ಲಾ; ತಳತಂತ್ರ: ಕಾಲಾಳುಗಳ ಪಡೆ; ತಲ್ಲಣ: ಅಂಜಿಕೆ, ಭಯ;

ಪದವಿಂಗಡಣೆ:
ಹೋಯಿತಾ +ಮಾತೇಕೆ +ಗಜದಳ
ಮಾಯವಾದುದು+ ವಂಗ+ಭೂಪನ
ಬಾಯೊಳಗೆ +ಬೆಟ್ಟಿದನು +ಗದೆಯನು +ಮಿಕ್ಕ +ನಾಲ್ವರನು
ಸಾಯ +ಬಡಿದನು +ಮುಂದೆ+ ಕೌರವ
ರಾಯನನು+ ತಾಗಿದನು +ಭೀಮನದ್
ಆಯ +ಬಂದುದು +ಸಕಲ +ಕುರು +ತಳತಂತ್ರ +ತಲ್ಲಣಿಸೆ

ಅಚ್ಚರಿ:
(೧) ಭೀಮನ ಪರಾಕ್ರಮ – ಗಜದಳ ಮಾಯವಾದುದು, ವಂಗಭೂಪನ ಬಾಯೊಳಗೆ ಬೆಟ್ಟಿದನು ಗದೆಯನು

ಪದ್ಯ ೫೨: ಅರ್ಜುನನು ಕೌರವ ಸೈನ್ಯವನ್ನು ಎಷ್ಟರ ಮಟ್ಟಿಗೆ ನಾಶಮಾಡಿದನು?

ಮತ್ತೆ ಮುರಿದನು ಹತ್ತು ಸಾವಿರ
ಮತ್ತಗಜವನು ರಥಚಯವ ನು
ಗ್ಗೊತ್ತಿದನು ಹನ್ನೆರಡು ಸಾವಿರವನು ರಣಾಗ್ರದಲಿ
ಹೊತ್ತಿ ತಾತನ ವಿಕ್ರಮಾಗ್ನಿಗೆ
ಹತ್ತು ಲಕ್ಷ ಪದಾತಿ ರಾವ್ತರು
ತೆತ್ತರಸುವನು ಲಕ್ಷ ಕೌರವರಾಯ ಸೇನೆಯಲಿ (ಭೀಷ್ಮ ಪರ್ವ, ೮ ಸಂಧಿ, ೫೨ ಪದ್ಯ)

ತಾತ್ಪರ್ಯ:
ಅರ್ಜುನನು ಕೌರವನ ಸೇನೆಯಲ್ಲಿ ಮತ್ತೆ ಹತ್ತು ಸಾವಿರ ಆನೆಗಳನ್ನೂ, ಹನ್ನೆರಡು ಸಾವಿರ ರಥಗಳನ್ನೂ, ಲಕ್ಷ ರಾವುತರನ್ನೂ, ಹತ್ತು ಲಕ್ಷ ಕಾಲಾಳುಗಳನ್ನೂ ಸಂಹರಿಸಿದನು.

ಅರ್ಥ:
ಮುರಿ: ಸೀಳು; ಸಾವಿರ: ಸಹಸ್ರ; ಮತ್ತ: ಮತ್ತೇರಿದ, ಅಮಲೇರಿದ; ಗಜ: ಆನೆ; ರಥ: ಬಂಡಿ; ಚಯ: ಸಮೂಹ, ರಾಶಿ, ಗುಂಪು; ನುಗ್ಗು: ತಳ್ಳು; ಒತ್ತು: ಮುತ್ತು, ಚುಚ್ಚು; ರಣಾಗ್ರ: ಮುಂಚೂಣಿಯಲ್ಲಿರುವ ಸೈನ್ಯ; ರಣ: ಯುದ್ಧಭೂಮಿ, ರಣರಂಗ; ಹೊತ್ತು: ಹತ್ತಿಕೊಳ್ಳು, ಉರಿ; ತಾತ: ತಂದೆ, ಅಜ್ಜ; ವಿಕ್ರಮ: ಸಾಹಸ; ಅಗ್ನಿ: ಬೆಂಕಿ; ಪದಾತಿ: ಕಾಲಾಳು; ರಾವ್ತರು: ಕುದುರೆ ಸವಾರ, ಅಶ್ವಾರೋಹಿ; ತೆತ್ತು: ತಿರಿಚು, ಸುತ್ತು; ಅಸು: ಪ್ರಾಣ; ಸೇನೆ: ಸೈನ್ಯ;

ಪದವಿಂಗಡಣೆ:
ಮತ್ತೆ +ಮುರಿದನು +ಹತ್ತು +ಸಾವಿರ
ಮತ್ತಗಜವನು +ರಥಚಯವ +ನುಗ್ಗ್
ಒತ್ತಿದನು +ಹನ್ನೆರಡು +ಸಾವಿರವನು +ರಣಾಗ್ರದಲಿ
ಹೊತ್ತಿ +ತಾತನ +ವಿಕ್ರಮಾಗ್ನಿಗೆ
ಹತ್ತು +ಲಕ್ಷ +ಪದಾತಿ +ರಾವ್ತರು
ತೆತ್ತರ್+ಅಸುವನು +ಲಕ್ಷ +ಕೌರವರಾಯ +ಸೇನೆಯಲಿ

ಅಚ್ಚರಿ:
(೧) ಒಟ್ಟು ನಾಶಮಾಡಿದ ಸಂಖ್ಯೆ: ಹನ್ನೊಂದು ಲಕ್ಷದ ೨೨ ಸಾವಿರ

ಪದ್ಯ ೩೩: ಕೌರವನೇಕೆ ಸಂತಸಗೊಂಡ?

ಈ ನದೀನಂದನನ ಬಲದಲಿ
ಸೇನೆ ಶಿವಗಂಜುವುದೆ ಕುಂತೀ
ಸೂನುಗಳಿಗಾರಣ್ಯಜಪವಿನ್ನವರಿಗಿಳೆಯೇಕೆ
ಮಾನನಿಧಿ ಭೀಷ್ಮಂಗೆ ಸಮರ ಸ
ಮಾನ ಭಟನಿನ್ನಾವನೆಂದು ಮ
ನೋನುರಾಗದ ಮೇಲೆ ಕೌರವರಾಯ ಬಣ್ಣಿಸಿದ (ಭೀಷ್ಮ ಪರ್ವ, ೧ ಸಂಧಿ, ೩೩ ಪದ್ಯ)

ತಾತ್ಪರ್ಯ:
ಕೌರವನು ಬಹಳ ಸಂತಸಪಟ್ಟು ಅತಿರೇಕದಿಂದ, ಭೀಷ್ಮನ ಬಲವಿರುವ ನಮ್ಮ ಸೈನ್ಯವು ಶಿವನಿಗೂ ಬೆದರುವುದಿಲ್ಲ. ಪಾಂಡವರು ಅರಣ್ಯ ಜಪದಲ್ಲೇ ಇರಬೇಕು, ಅವರಿಗೆ ರಾಜ್ಯವೇಕೆ ಭೀಷ್ಮನಿಗೆ ಸರಿಸಮಾನರಾದ ವೀರರು ಇನ್ನಾರು ಎಂದು ಹೊಗಳಿದನು.

ಅರ್ಥ:
ನದೀನಂದನ: ಭೀಷ್ಮ; ನಂದನ: ಮಗ; ಬಲ: ಸಾಮರ್ಥ್ಯ; ಸೇನೆ: ಸೈನ್ಯ; ಶಿವ: ಶಂಕರ; ಅಂಜು: ಹೆದರು; ಸೂನು: ಮಕ್ಕಳು; ಅರಣ್ಯ: ಕಾನನ; ಜಪ: ಮಂತ್ರವನ್ನು ವಿಧಿಪೂರ್ವಕವಾಗಿ ಮತ್ತೆ ಮತ್ತೆ ಮೆಲ್ಲನೆ ಉಚ್ಚರಿಸುವುದು; ಇಳೆ: ಭೂಮಿ; ಮಾನನಿಧಿ: ಮರ್ಯಾದೆಯನ್ನೇ ಐಶ್ವರ್ಯವನ್ನಾಗಿಸಿದವ (ದುರ್ಯೋಧನ); ಸಮರ: ಯುದ್ಧ; ಸಮಾನ: ಸದೃಶ; ಭಟ: ವೀರ; ಮನ: ಮನಸ್ಸು; ಅನುರಾಗ: ಪ್ರೀತಿ; ಬಣ್ಣಿಸು: ಹೊಗಳು, ವರ್ಣಿಸು;

ಪದವಿಂಗಡಣೆ:
ಈ +ನದೀನಂದನನ +ಬಲದಲಿ
ಸೇನೆ +ಶಿವಗ್+ಅಂಜುವುದೆ +ಕುಂತೀ
ಸೂನುಗಳಿಗ್+ಅರಣ್ಯ+ಜಪವ್+ಇನ್ನವರಿಗ್+ಇಳೆ+ಏಕೆ
ಮಾನನಿಧಿ +ಭೀಷ್ಮಂಗೆ +ಸಮರ +ಸ
ಮಾನ +ಭಟನ್+ಇನ್ನಾವನೆಂದು +ಮ
ನೋನುರಾಗದ+ ಮೇಲೆ +ಕೌರವರಾಯ+ ಬಣ್ಣಿಸಿದ

ಅಚ್ಚರಿ:
(೧) ೩ ಸಾಲು ಒಂದೇ ಪದವಾಗಿ ರಚಿತವಾದುದು – ಸೂನುಗಳಿಗಾರಣ್ಯಜಪವಿನ್ನವರಿಗಿಳೆಯೇಕೆ
(೨) ಮಾನ, ಸಮಾನ – ಪ್ರಾಸ ಪದಗಳು
(೩) ಮಾನನಿಧಿ, ಕೌರವರಾಯ – ದುರ್ಯೋಧನನನ್ನು ಕರೆದ ಪರಿ

ಪದ್ಯ ೧: ಕೌರವನು ಯಾರನ್ನು ಪರಿಮಿತಕ್ಕೆ ಕರೆದನು?

ಕೇಳು ಜನಮೇಜಯ ಧರಿತ್ರೀ
ಪಾಲ ಕೌರವರಾಯನಲ್ಲಿಗೆ
ಕಾಳಗದ ಕಾತರಿಗರಿವರಟ್ಟಿದರು ಭಟ್ಟರನು
ಕೇಳಿದನು ಕುರುಭೂಮಿಯಲಿ ರಿಪು
ಜಾಲದುದಯವನಂದು ಕುರುಕುಲ
ಮೌಳಿ ಕರೆಸಿದನಾಪ್ತರನು ಪರಿಮಿತಕೆ ಮಂತ್ರಿಗಳ (ಭೀಷ್ಮ ಪರ್ವ, ೧ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಯುದ್ಧದ ಕಾತರತೆಯಲ್ಲಿದ್ದ ಪಾಂಡವರು ಕೌರವನಲ್ಲಿ ದೂತರನ್ನು ಕಳಿಸಿದರು, ಯುದ್ಧರಂಗದಲ್ಲಿ ಶತ್ರುಗಳು ಸಿದ್ಧರಾಗಿರುವುದನ್ನು ಕೇಳಿದ ಕೌರವನು ಮಂತ್ರಾಲೋಚನೆಗಾಗಿ ಆಪ್ತರನ್ನೂ ಮಂತ್ರಿಗಳನ್ನೂ ಕರೆಸಿದನು.

ಅರ್ಥ:
ಧರಿತ್ರೀ: ಭೂಮಿ; ಪಾಲ: ಒಡೆಯ; ರಾಯ: ರಾಜ; ಕಾಳಗ: ಯುದ್ಧ; ಕಾತರ: ಕಳವಳ; ಅರಿ: ತಿಳಿ; ಅಟ್ಟು: ಕಳಿಸು; ಭಟ್ಟ: ದೂತ; ಕೇಳು: ಆಲಿಸು; ರಿಪು: ವೈರಿ; ಜಾಲ: ಗುಂಪು; ಉದಯ: ಹುಟ್ಟು; ಮೌಳಿ: ಶಿರ, ಕಿರೀಟ; ಕರೆಸು: ಬರೆಮಾಡು; ಆಪ್ತ: ಹತ್ತಿರದ; ಪರಿಮಿತ: ಸ್ವಲ್ಪ; ಮಂತ್ರಿ: ಸಚಿವ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಕೌರವರಾಯನಲ್ಲಿಗೆ
ಕಾಳಗದ+ ಕಾತರಿಗ್+ಅರಿವರ್+ಅಟ್ಟಿದರು +ಭಟ್ಟರನು
ಕೇಳಿದನು +ಕುರುಭೂಮಿಯಲಿ +ರಿಪು
ಜಾಲದ್+ಉದಯವನ್+ಅಂದು +ಕುರುಕುಲ
ಮೌಳಿ +ಕರೆಸಿದನ್+ಆಪ್ತರನು +ಪರಿಮಿತಕೆ +ಮಂತ್ರಿಗಳ

ಅಚ್ಚರಿ:
(೧) ಧರಿತ್ರೀಪಾಲ, ರಾಯ – ಸಮನಾರ್ಥಕ ಪದ
(೨) ಕೌರವರಾಯ, ಕುರುಕುಲಮೌಳಿ – ದುರ್ಯೋಧನನನ್ನು ಕರೆದ ಪರಿ

ಪದ್ಯ ೨೫: ದುರ್ಯೋಧನನು ಭೀಷ್ಮರಿಗೆ ಏನು ಹೇಳಿದ?

ಕಂಡುದಳವಿ ವಿರೋಧಿಗೆಮಗೆಯು
ಕೊಂಡುದೇ ಬಲುಗೈದು ಮನಮುಂ
ಕೊಂಡು ಹೊಕ್ಕುದು ಕಳನದಲ್ಲದೆ ಪಾಂಡುಸುತರೊಡನೆ
ಉಂಡು ಮೇಣುಟ್ಟೊಲಿದು ಬದುಕುವ
ಭಂಡತನವೆಮಗುಂಟೆ ವೈರವ
ಕೊಂಡೆಸಗಬೇಕೆಂದು ನುಡಿದನು ಕೌರವರಾಯ (ವಿರಾಟ ಪರ್ವ, ೮ ಸಂಧಿ, ೨೫ ಪದ್ಯ)

ತಾತ್ಪರ್ಯ:
ಶತ್ರುವಿಗೂ ನಮಗೂ ರಣರಂಗದಲ್ಲಿ ಮುಖಾಮುಖಿಯಾಗಿದೆ. ನಾವು ಮಹಾಸ್ತ್ರಗಳನ್ನೇ ಹಿಡಿದಿದ್ದೇವೆ. ಮನಸ್ಸು ಯುದ್ಧಾತುರದಿಂದ ರಣರಂಗದಲ್ಲಿದೆ. ಪಾಂಡವರೊಡನೆ ಒಂದಾಗಿ ಉಂಡು ಉಟ್ಟು ಬದುಕುವ ಭಂಡತನ ನಮಗಿಲ್ಲ. ಅವರ ಮೇಲೆ ವೈರವನ್ನೇ ತಳೆದು ಯುದ್ಧಮಾಡಬೇಕು, ಎಂದು ಕೌರವನು ಭೀಷ್ಮನಿಗೆ ಹೇಳಿದನು.

ಅರ್ಥ:
ಅಳವಿ: ಶಕ್ತಿ; ಕಂಡು: ನೋಡು; ವಿರೋಧಿ: ಶತ್ರು, ವೈರಿ; ಬಲುಗೈ: ಪರಾಕ್ರಮ; ಮನ: ಮನಸ್ಸು; ಹೊಕ್ಕು: ಓತ, ಸೇರು; ಕಳ: ರಣರಂಗ; ಸುತ: ಮಕ್ಕಳು; ಉಂಡು: ತಿನ್ನು; ಮೇಣು: ಮತ್ತು, ಅಥವಾ; ಬದುಕು: ಜೀವಿಸು; ಭಂಡತನ: ನಾಚಿಕೆಯಿಲ್ಲದಿರುವಿಕೆ; ಒಲಿ: ಸಮ್ಮತಿಸು; ಬದುಕು: ಜೀವಿಸು; ಭಂಡತನ: ನಾಚಿಕೆಯಿಲ್ಲದಿರುವಿಕೆ, ನಿರ್ಲಜ್ಜೆ; ವೈರ: ಶತ್ರು; ನುಡಿ: ಮಾತು; ರಾಯ: ರಾಜ;

ಪದವಿಂಗಡಣೆ:
ಕಂಡುದ್+ಅಳವಿ +ವಿರೋಧಿಗ್+ಎಮಗೆಯು
ಕೊಂಡುದೇ+ ಬಲುಗೈದು+ ಮನಮುಂ
ಕೊಂಡು +ಹೊಕ್ಕುದು +ಕಳನದಲ್ಲದೆ +ಪಾಂಡುಸುತರೊಡನೆ
ಉಂಡು +ಮೇಣ್+ಉಟ್ಟೊಲಿದು +ಬದುಕುವ
ಭಂಡತನವ್+ಎಮಗುಂಟೆ +ವೈರವ
ಕೊಂಡೆಸಗ+ಬೇಕೆಂದು +ನುಡಿದನು +ಕೌರವರಾಯ

ಅಚ್ಚರಿ:
(೧) ಕಂಡು, ಉಂಡು, ಕೊಂಡು – ಪ್ರಾಸ ಪದಗಳು

ಪದ್ಯ ೫೩: ಚಿತ್ರಸೇನನ ಯುದ್ಧದ ಪ್ರಹಾರ ಹೇಗಿತ್ತು?

ಇತ್ತ ಕೌರವರಾಯ ರಥವನು
ಎತ್ತಿ ಬಿಟ್ಟನು ಖಚರರಾಯನು
ಸುತ್ತಣಿನ ಚತುರಂಗ ಸೇನೆಯನಸಮಬಾಣದಲಿ
ತೆತ್ತಿಗರ ಕರೆ ನಿನಗೆ ನೂಕದೆ
ನುತ್ತ ಶರಸಂಧಾನ ಚಯದಲಿ
ಮೆತ್ತಿದನು ಮೊನೆಗಣೆಗಳಲಿ ಖಚರೇಂದ್ರ ಕೈಮರೆಯ (ಅರಣ್ಯ ಪರ್ವ, ೨೦ ಸಂಧಿ, ೫೩ ಪದ್ಯ)

ತಾತ್ಪರ್ಯ:
ಚಿತ್ರಸೇನನು ಕೌರವನ ರಥವನ್ನು ಹಾರಿ ಹೋಗುವಂತೆ ಹೊಡೆದು, ಸುತ್ತಲಿದ್ದ ಚತುರಂಗ ಸೈನ್ಯವನ್ನು ಇದಿರಿಲ್ಲದ ಬಾಣಗಳಿಂದ ಸಂಹರಿಸಿದನು. ನಿನ್ನನ್ನು ರಕ್ಷಿಸುವವರನ್ನು ಕರೆ ನಿನ್ನ ಕೈಲಾಗದು ಎನ್ನುತ್ತಾ ಬಾಣಗಳ ಗುಂಪಿನಿಂದ ಬೆರಗಾಗುವಂತೆ ಪ್ರಹಾರ ಮಾಡಿದನು.

ಅರ್ಥ:
ರಾಯ: ರಾಜ; ರಥ: ಬಂಡಿ; ಎತ್ತು: ಮೇಲೆ ತರು; ಖಚರ: ಗಂಧರ್ವ; ಸುತ್ತಣ: ಅಕ್ಕ ಪಕ್ಕ; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಸೇನೆ: ಸೈನ್ಯ; ಅಸಮ: ಅಸದೃಶವಾದ; ಬಾಣ: ಸರಳು; ತೆತ್ತಿಗ: ನಂಟ, ಬಂಧು; ಕರೆ: ಕೂಗು; ನೂಕು: ತಳ್ಳು; ಶರ: ಬಾಣ; ಸಂಧಾನ: ಸೇರಿಸುವುದು, ಹೊಂದಿಸುವುದು; ಚಯ: ಮೂಹ, ರಾಶಿ; ಮೆತ್ತು: ಬಳಿ, ಲೇಪಿಸು; ಮೊನೆ: ತುದಿ, ಕೊನೆ; ಖಚರ: ಗಂಧರ್ವ; ಕೈ ಮರೆ: ಕೈ ಅಡ್ಡವಾಗಿಡು;

ಪದವಿಂಗಡಣೆ:
ಇತ್ತ +ಕೌರವರಾಯ +ರಥವನು
ಎತ್ತಿ +ಬಿಟ್ಟನು+ ಖಚರರಾಯನು
ಸುತ್ತಣಿನ+ ಚತುರಂಗ +ಸೇನೆಯನ್+ಅಸಮ+ಬಾಣದಲಿ
ತೆತ್ತಿಗರ+ ಕರೆ+ ನಿನಗೆ +ನೂಕದ್
ಎನುತ್ತ +ಶರ+ಸಂಧಾನ +ಚಯದಲಿ
ಮೆತ್ತಿದನು +ಮೊನೆಗಣೆಗಳಲಿ+ ಖಚರೇಂದ್ರ +ಕೈಮರೆಯ

ಅಚ್ಚರಿ:
(೧) ಕೌರವರಾಯ, ಖಚರರಾಯ – ದುರ್ಯೋಧನ ಮತ್ತು ಚಿತ್ರಸೇನನನ್ನು ಕರೆದ ಪರಿ
(೨) ಚಿತ್ರಸೇನನನ್ನು ಖಚರರಾಯ, ಖಚರೇಂದ್ರ ಎಂದು ಕರೆದಿರುವುದು

ಪದ್ಯ ೧೩: ದುರ್ಯೋಧನನು ಮನಸ್ಸಿನಲ್ಲಿ ಏಕೆ ಸಂತಸಪಟ್ಟನು?

ಬೀಳುಕೊಟ್ಟಳು ಬಳಿಕ ಕುರುನೃಪ
ನಾಲಯಕೆ ನಡೆತಂದು ಕುಂತಿಯ
ಕಾಲಿಗೆರಗಿದನಿವರನುಚಿತೋಕ್ತಿಯಲಿ ಮನ್ನಿಸಿದ
ಬಾಲಮೃಗವೊಳಗಾಯ್ತಲಾ ತೊಡು
ಕೋಲನೆಂದರು ನಗುತ ಮನದಲಿ
ಕೌಳಿಕದ ಕುಹಕಿಗಳು ಕೌರವರಾಯ ಶಕುನಿಗಳು (ಸಭಾ ಪರ್ವ, ೧೪ ಸಂಧಿ, ೧೩ ಪದ್ಯ)

ತಾತ್ಪರ್ಯ:
ಗಾಂಧಾರಿಯು ಪಾಂಡವರನ್ನು ಕಳಿಸಿಕೊಟ್ಟಳು. ಅವರೆಲ್ಲರು ಅವರ ಬೀಡಿಗೆ ಹಿಂದಿರುಗಿದರು. ದುರ್ಯೋಧನನು ಪಾಂಡವರ ಬೀಡಿಗೆ ಬಂದು ಕುಂತಿಗೆ ನಮಸ್ಕರಿಸಿದನು. ಎಲ್ಲರನ್ನೂ ಉಚಿತವಾದ ಮಾತುಗಳಿಂದ ಉಪಾರಿಸಿದನು. ಮೋಸಗಾರರು, ಕಪಟಿಗಳಾದ ದುರ್ಯೋಧನ, ಶಕುನಿಗಳು ಮನಸ್ಸಿನಲ್ಲಿಯೇ ನಕ್ಕು, ಮರಿ ಜಿಂಕೆಯು ಬಲೆಯಲ್ಲಿ ಬಿದ್ದಿದೆ, ಬಾಣವನ್ನು ಹೂಡು ಎಂದುಕೊಂಡರು.

ಅರ್ಥ:
ಬೀಳುಕೊಡು: ತೆರಳು; ಬಳಿಕ: ನಂತರ; ನೃಪ: ರಾಜ; ಆಲಯ: ಮನೆ; ನಡೆ: ಚಲಿಸು; ಕಾಲು: ಪಾದ; ಎರಗು: ನಮಸ್ಕರಿಸು; ಉಚಿತ: ಸರಿಯಾದ; ಉಕ್ತಿ: ಮಾತು; ಮನ್ನಿಸು: ಗೌರವಿಸು; ಬಾಲ: ಚಿಕ್ಕ; ಮೃಗ: ಜಿಂಕೆ; ತೊಡು: ಹೂಡು; ಕೋಲ: ಬಾಣ; ನಗುತ: ಸಂತಸ; ಮನ: ಮನಸ್ಸು; ಕೌಳಿಕ: ಕಟುಕ, ಕಸಾಯಿಗಾರ, ಮೋಸ; ಕುಹಕಿ: ಮೋಸಗಾರ;

ಪದವಿಂಗಡಣೆ:
ಬೀಳುಕೊಟ್ಟಳು +ಬಳಿಕ +ಕುರುನೃಪನ್
ಆಲಯಕೆ +ನಡೆತಂದು +ಕುಂತಿಯ
ಕಾಲಿಗ್+ಎರಗಿದನ್+ಇವರನ್+ಉಚಿತ+ಉಕ್ತಿಯಲಿ +ಮನ್ನಿಸಿದ
ಬಾಲ+ಮೃಗವೊಳಗಾಯ್ತಲಾ +ತೊಡು
ಕೋಲನ್+ಎಂದರು +ನಗುತ+ ಮನದಲಿ
ಕೌಳಿಕದ+ ಕುಹಕಿಗಳು+ ಕೌರವರಾಯ +ಶಕುನಿಗಳು

ಅಚ್ಚರಿ:
(೧) ದುರ್ಯೊಧನನ ಮನಸ್ಸಿನ ಸಂತಸ – ಬಾಲಮೃಗವೊಳಗಾಯ್ತಲಾ ತೊಡುಕೋಲನೆಂದರು ನಗುತ ಮನದಲಿ ಕೌಳಿಕದ ಕುಹಕಿಗಳು ಕೌರವರಾಯ ಶಕುನಿಗಳು
(೨) ಕ ಕಾರದ ತ್ರಿವಳಿ ಪದ – ಕೌಳಿಕದ ಕುಹಕಿಗಳು ಕೌರವರಾಯ

ಪದ್ಯ ೧೩: ಶಲ್ಯನು ದುರ್ಯೋಧನನನ್ನು ಹೇಗೆ ಆಹ್ವಾನಿಸಿದನು?

ಅಂದಣವನಿಳಿದರಸನಾತಗೆ
ವಂದಿಸಿದನಾ ಮಾದ್ರಪತಿ ಸಾ
ನಂದದಲಿ ತೆಗೆದಪ್ಪಿ ತಂದನು ರಾಜಮಂದಿರಕೆ
ಇಂದಿದೇನಿದ್ದಿದ್ದು ನೀನೇ
ಬಂದ ಕಾರ್ಯ ವಿಶೇಷವೇನುಂ
ಟೆಂದು ಕೌರವರಾಯನನು ಬೆಸಗೊಂಡನಾ ಶಲ್ಯ (ಕರ್ಣ ಪರ್ವ, ೫ ಸಂಧಿ, ೧೩ ಪದ್ಯ)

ತಾತ್ಪರ್ಯ:
ದುರ್ಯೋಧನನ ಆಗಮನವನ್ನು ತಿಳಿದು ತನ್ನ ಅರಮನೆಯಿಂದ ಹೊರಬಂದನು. ಕೌರವನು ಪಲ್ಲಕ್ಕಿಯಿಂದಿಳಿದು ಶಲ್ಯನಿಗೆ ನಮಸ್ಕರಿಸಿದನು. ಶಲ್ಯನು ಸಂತೋಷ ಭರಿತನಾಗಿ ಅವನನ್ನು ಆಲಂಗಿಸಿಕೊಂಡು ಅರಮನೆಗೆ ಕರೆತಂದನು. “ಇದೇನು ಈ ದಿನ ನೀನೇ ನನ್ನ ಬಳಿಗೆ ಬರುವಂತಹ ವಿಶೇಷವಾದ ಕೆಲಸವೇನು ಎಂದು ಶಲ್ಯನು ಕೇಳಿದನು.

ಅರ್ಥ:
ಅಂದಣ: ಪಲ್ಲಕ್ಕಿ, ಮೇನೆ; ಇಳಿ: ಕೆಳಕ್ಕೆ ಬಾ; ಅರಸ: ರಾಜ; ವಂದಿಸು: ನಮಸ್ಕರಿಸು; ಮಾದ್ರಪತಿ: ಮಾದ್ರ ದೇಶದ ಒಡೆಯ (ಶಲ್ಯ); ಸಾನಂದ: ಸಂತೋಷ; ಅಪ್ಪಿ; ಅಪ್ಪುಗೆ; ರಾಜಮಂದಿರ: ಅರಮನೆ; ಕಾರ್ಯ: ಕೆಲಸ; ವಿಶೇಷ:ವಿಶಿಷ್ಟವಾದ, ಹೆಚ್ಚಾದ; ರಾಯ: ರಾಜ; ಬೆಸಗೊಂಡು:ಅಪ್ಪಣೆ, ಆದೇಶ;

ಪದವಿಂಗಡಣೆ:
ಅಂದಣವನ್+ಇಳಿದ್+ಅರಸನ್+ಆತಗೆ
ವಂದಿಸಿದನಾ+ ಮಾದ್ರಪತಿ+ ಸಾ
ನಂದದಲಿ+ ತೆಗೆದಪ್ಪಿ+ ತಂದನು +ರಾಜಮಂದಿರಕೆ
ಇಂದಿದೇನ್+ಇದ್ದಿದ್ದು+ ನೀನೇ
ಬಂದ +ಕಾರ್ಯ +ವಿಶೇಷವೇನ್
ಉಂಟೆಂದು +ಕೌರವರಾಯನನು+ ಬೆಸಗೊಂಡನಾ +ಶಲ್ಯ

ಅಚ್ಚರಿ:
(೧) ಅರಸ, ರಾಯ – ಸಮನಾರ್ಥಕ ಪದ
(೨) ಮಾದ್ರಪತಿ, ಶಲ್ಯ – ಕರೆದಿರುವ ಬಗೆ