ಅರಸಿಯರ ಬಗೆಗೊಳ್ಳ ಮಕ್ಕಳ
ಸರಕು ಮಾಡನು ದೇಶಕೋಶದ
ಸಿರಿಯ ಗಣಿಸನು ಖಡ್ಡಿಗೊಳ್ಳನು ಗಾಢಗರ್ವಿತರ
ಹರಿ ಪರಾಯಣರೆಂದೊಡವರಿಗೆ
ಹರಹಿ ಕೊಂಬನು ಮಗನ ಶೀಲವು
ನರರ ಪರಿಯಲ್ಲೆಂದನಾ ವಸುದೇವನಳಿಯಂಗೆ (ವಿರಾಟ ಪರ್ವ, ೧೧ ಸಂಧಿ, ೬೩ ಪದ್ಯ)
ತಾತ್ಪರ್ಯ:
ವಸುದೇವನು ಧರ್ಮರಾಯನಿಗೆ ಶ್ರೀಕೃಷ್ಣನ ಸ್ವಭಾವವನ್ನು ಹೀಗೆ ಹೇಳಿದನು, ಹೆಂಡಿರು ಮಕ್ಕಳನ್ನು ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ, ತನ್ನ ರಾಜ್ಯ ಸಂಪತ್ತುಗಳನ್ನು ಕುರಿತು ಚಿಂತಿಸುವುದಿಲ್ಲ, ಎಲ್ಲ ಸಂಪತ್ತನ್ನು ಬಗೆಯುವುದೇ ಇಲ್ಲ, ಹರಿಯನ್ನೇ ಹೆಚ್ಚಿನವನೆಂದು ನಂಬಿದವರಿಗೆ ತನ್ನನ್ನೇ ಕೊಟ್ಟುಕೊಂಡು ಬಿಡುವ ಭಕ್ತ ಕುಟುಂಬಿ ಈ ಕೃಷ್ಣ, ನನ್ನ ಮಗನ ನಡತೆಯು ಮನುಷ್ಯರ ನಡತೆಯಂತಿಲ್ಲ ಎಂದು ವಸುದೇವನು ಧರ್ಮಜನಿಗೆ ಹೇಳಿದನು.
ಅರ್ಥ:
ಅರಸಿ: ರಾಣಿ; ಬಗೆ: ರೀತಿ; ಮಕ್ಕಳು: ಸುತರು; ಸರಕು: ಗಮನ, ಲಕ್ಷ್ಯ; ದೇಶ: ರಾಷ್ಟ್ರ; ಕೋಶ: ಖಜಾನೆ, ಭಂಡಾರ; ಸಿರಿ: ಐಶ್ವರ್ಯ; ಗಣಿಸು: ಲೆಕ್ಕಹಾಕು; ಖಡ್ಡ: ತಿಳಿಗೇಡಿ, ಹೆಡ್ಡ; ಗಾಢ: ಹೆಚ್ಚಳ, ಅತಿಶಯ; ಗರ್ವ: ಸೊಕ್ಕು, ಹೆಮ್ಮೆ; ಹರಿ: ವಿಷ್ಣು; ಪರಾಯಣ: ಅತ್ಯಂತ ಆಸಕ್ತಿ ಹೊಂದಿದ, ತಲ್ಲೀನವಾದ; ಹರಹು: ವಿಸ್ತಾರ, ವೈಶಾಲ್ಯ; ಮಗ: ಸುತ; ಶೀಲ: ಗುಣ; ನರ: ಮನುಷ್ಯ; ಪರಿ: ರೀತಿ; ಅಳಿಯ: ಮಗಳ ಗಂಡ;
ಪದವಿಂಗಡಣೆ:
ಅರಸಿಯರ +ಬಗೆಗೊಳ್ಳ +ಮಕ್ಕಳ
ಸರಕು +ಮಾಡನು +ದೇಶ+ಕೋಶದ
ಸಿರಿಯ +ಗಣಿಸನು +ಖಡ್ಡಿಗೊಳ್ಳನು +ಗಾಢ+ಗರ್ವಿತರ
ಹರಿ+ ಪರಾಯಣರೆಂದೊಡ್+ಅವರಿಗೆ
ಹರಹಿ+ ಕೊಂಬನು +ಮಗನ +ಶೀಲವು
ನರರ+ ಪರಿಯಲ್ಲೆಂದನಾ+ ವಸುದೇವನ್+ಅಳಿಯಂಗೆ
ಅಚ್ಚರಿ:
(೧) ಕೃಷ್ಣನ ಗುಣ – ಹರಿ ಪರಾಯಣರೆಂದೊಡವರಿಗೆಹರಹಿ ಕೊಂಬನು