ಪದ್ಯ ೨೯: ದೂರ್ವಾಸ ಮುನಿಗಳೇಕೆ ಚಂದ್ರನಂತಾದರು?

ಬಳಿಕ ನಿನ್ನಯ ವರ ಸುದರ್ಶನ
ಸುಳಿವುದೋರಲು ಕೋಟಿಸೂರ್ಯರ
ಬೆಳಗು ಬೀರಲು ಹೊತ್ತಿವುರಿವುರಿ ಲೋಕಮೂರರಲಿ
ಬಲುಬಿಸಿಲು ಬಾಯ್ಗಾಂತ ಚಂದ್ರಿಕೆ
ವೆಳಗೆನಲು ಘನರೋಷವಹ್ನಿಯ
ಬೆಳಗು ಬೀತುದು ಚಕಿತ ಚಂದ್ರಮನಾದ ದೂರ್ವಾಸ (ಅರಣ್ಯ ಪರ್ವ, ೧೭ ಸಂಧಿ, ೨೯ ಪದ್ಯ)

ತಾತ್ಪರ್ಯ:
ನಂತರ ಶ್ರೀಕೃಷ್ಣನು ತನ್ನ ಭಕ್ತ ಅಂಬರೀಷನನ್ನು ರಕ್ಷಿಸಲು ಸುದರ್ಶನ ಚಕ್ರವನ್ನು ಕಳಿಸಿದೆ. ಅದು ಕೋಟಿ ಸೂರ್ಯ ಪ್ರಕಾಶದಿಮ್ದ ಬರಲು ಮೂರು ಲೋಕಗಳಲ್ಲೂ ಉರಿ ಹತ್ತಿ ಶಾಖವಾಗಲು, ದೂರ್ವಾಸನ ಶಾಪದ ಬೆಂಕಿಯ ಬೆಳಕು ಆರಿಹೋಯಿತು. ದೂರ್ವಾಸನು ವಿಸ್ಮಯಗೊಂಡು ಚಂದ್ರನಂತಾದನು.

ಅರ್ಥ:
ಬಳಿಕ: ನಂತರ; ವರ: ಶ್ರೇಷ್ಠ; ಸುಳಿವು: ಗುರುತು, ಕುರುಹು; ತೋರು: ಗೋಚರಿಸು; ಕೋಟಿ: ಲೆಕ್ಕವಿಲ್ಲದಷ್ಟು; ಸೂರ್ಯ: ರವಿ; ಬೆಳಗು: ಪ್ರಕಾಶ; ಬೀರು: ಹೊರಹಾಕು; ಹೊತ್ತು: ಸೀದು ಹೋದುದು, ಕರಿಕು; ಲೋಕ: ಜಗತ್ತು; ಬಲು: ತುಂಬ; ಬಿಸಿಲು: ಪ್ರಕಾಶ, ತಾಪ; ಚಂದ್ರಿಕೆ: ಬೆಳದಿಂಗಳು; ಬೆಳಗು: ಪ್ರಕಾಶ; ಘನ: ದೊಡ್ಡ; ರೋಷ: ಕೋಪ; ವಹ್ನಿ: ಬೆಂಕಿ; ಬೀತು: ಬತ್ತುಹೋಗು, ಆರಿಹೋಗು; ಚಕಿತ: ಆಶ್ಚರ್ಯ; ಚಂದ್ರ: ಶಶಿ;

ಪದವಿಂಗಡಣೆ:
ಬಳಿಕ +ನಿನ್ನಯ +ವರ +ಸುದರ್ಶನ
ಸುಳಿವು+ತೋರಲು +ಕೋಟಿ+ಸೂರ್ಯರ
ಬೆಳಗು +ಬೀರಲು +ಹೊತ್ತಿ+ವುರಿ+ವುರಿ+ ಲೋಕ+ಮೂರರಲಿ
ಬಲುಬಿಸಿಲು +ಬಾಯ್ಗ್+ಅಂತ+ ಚಂದ್ರಿಕೆ
ವೆಳಗೆನಲು +ಘನ+ರೋಷ+ವಹ್ನಿಯ
ಬೆಳಗು +ಬೀತುದು +ಚಕಿತ +ಚಂದ್ರಮನಾದ +ದೂರ್ವಾಸ

ಅಚ್ಚರಿ:
(೧) ಸುದರ್ಶನದ ಪ್ರಖರ: ಕೋಟಿಸೂರ್ಯರ ಬೆಳಗು ಬೀರಲು ಹೊತ್ತಿವುರಿವುರಿ ಲೋಕಮೂರರಲಿ
(೨) ದೂರ್ವಾಸನ ಕೋಪ ಆರಿದ ಪರಿ – ಬಲುಬಿಸಿಲು ಬಾಯ್ಗಾಂತ ಚಂದ್ರಿಕೆವೆಳಗೆನಲು ಘನರೋಷವಹ್ನಿಯ ಬೆಳಗು ಬೀತುದು ಚಕಿತ ಚಂದ್ರಮನಾದ ದೂರ್ವಾಸ