ಪದ್ಯ ೭೨: ಕೃಷ್ಣನ ಸ್ಥಾನ ಎಂತಹುದು?

ನೊರಜು ತಾನೆತ್ತಲು ಮಹತ್ವದ
ಗಿರಿಯದೆತ್ತಲು ಮಿಂಚುಬುಳುವಿನ
ಕಿರಣವೆತ್ತಲು ಹೊಳಹಿದೆತ್ತಲು ಕೋಟಿಸೂರಿಯರ
ನರಮೃಗಾಧಮನೆತ್ತಲುನ್ನತ
ಪರಮತತ್ವವಿದೆತ್ತಲಕಟಾ
ಮರುಳು ನನ್ನವಗುಣವಾದಾವುದ ಕಡೆಗೆ ಹಲುಬುವೆನು (ಭೀಷ್ಮ ಪರ್ವ, ೩ ಸಂಧಿ, ೭೨ ಪದ್ಯ)

ತಾತ್ಪರ್ಯ:
ನಾನೋ ಸಣ್ಣ ಕೀಟ, ಕೃಷ್ಣನೋ ಮೇರು ಪರ್ವತ, ನಾನೋ ಮಿಂಚುಹುಳ, ಕೃಷ್ಣನೋ ಕೋಟಿ ಸೂರ್ಯರ ಪ್ರಕಾಶವುಳ್ಳವನು. ನರಮೃಗಾಧಮನಾದ ನಾನೆಲ್ಲಿ, ಪರಮತತ್ವವಾದ ಅವನೆಲ್ಲಿ? ಹುಚ್ಚನಾದ ನನ್ನ ಅವಗುಣವನ್ನು ಹೇಗೆ ಹಳಿದುಕೊಳ್ಳಲಿ, ಏನೆಂದು ಬೇಡಲಿ ಎಂದು ಅರ್ಜುನನು ದುಃಖಿಸಿದನು.

ಅರ್ಥ:
ನೊರಜು: ಸಣ್ಣ ಕೀಟ; ಮಹತ್ವ: ಮುಖ್ಯವಾದ; ಗಿರಿ: ಬೆಟ್ಟ; ಮಿಂಚುಬುಳು: ಮಿಂಚುಹುಳ; ಕಿರಣ: ಪ್ರಕಾಶ; ಹೊಳಹು: ಕಾಂತಿ; ಸೂರಿಯರು: ಸೂರ್ಯ, ರವಿ; ನರ: ಮನುಷ್ಯ; ಮೃಗ: ಪ್ರಾಣಿ; ಅಧಮ: ಕೀಳು; ಉನ್ನತ: ಎತ್ತರದ; ಪರಮ: ಶ್ರೇಷ್ಠ; ತತ್ವ: ಸಿದ್ಧಾಂತ; ಅಕಟ: ಅಯ್ಯೋ; ಮರುಳು: ಮೂಢ; ಅವಗುಣ: ದುರ್ಗುಣ, ದೋಷ; ಕಡೆಗೆ: ಕೊನೆಗೆ; ಹಲುಬು: ಬೇಡಿಕೋ, ದುಃಖಪಡು;

ಪದವಿಂಗಡಣೆ:
ನೊರಜು +ತಾನೆತ್ತಲು +ಮಹತ್ವದ
ಗಿರಿಯದೆತ್ತಲು +ಮಿಂಚುಬುಳುವಿನ
ಕಿರಣವೆತ್ತಲು +ಹೊಳಹಿದೆತ್ತಲು +ಕೋಟಿಸೂರಿಯರ
ನರ+ಮೃಗ+ಅಧಮನ್+ಎತ್ತಲ್+ಉನ್ನತ
ಪರಮತತ್ವವಿದ್+ಎತ್ತಲ್+ಅಕಟಾ
ಮರುಳು+ ನನ್ನ್+ಅವಗುಣವ್+ಅದಾವುದ +ಕಡೆಗೆ +ಹಲುಬುವೆನು

ಅಚ್ಚರಿ:
(೧) ಉಪಮಾನಗಳ ಬಳಕೆ – ನೊರಜು ತಾನೆತ್ತಲು ಮಹತ್ವದ ಗಿರಿಯದೆತ್ತಲು ಮಿಂಚುಬುಳುವಿನ
ಕಿರಣವೆತ್ತಲು ಹೊಳಹಿದೆತ್ತಲು ಕೋಟಿಸೂರಿಯರ