ಪದ್ಯ ೫೪: ಭೀಮನ ಗದ್ದಲಕ್ಕೆ ಪಕ್ಷಿಗಳೇನು ಮಾಡಿದವು?

ಹಾರಿದವು ಹಂಸೆಗಳು ತುದಿಮರ
ಸೇರಿದವು ನವಿಲುಗಳು ತುಂಡವ
ನೂರಿ ನೀರೊಳು ಮುಳುಗಿ ಮರಳ್ದವು ಜಕ್ಕವಕ್ಕಿಗಳು
ಚೀರಿದವು ಕೊಳರ್ವಕ್ಕಿ ದಳದಲಿ
ಜಾರಿ ತಾವರೆಯೆಲೆಯ ಮರೆಗಳ
ಲಾರಡಿಗಳಡಗಿದವು ಕೋಳಾಹಳಕೆ ಪವನಜನ (ಅರಣ್ಯ ಪರ್ವ, ೧೧ ಸಂಧಿ, ೫೪ ಪದ್ಯ)

ತಾತ್ಪರ್ಯ:
ಭೀಮನ ಕೋಲಾಹಲಕ್ಕೆ ಹಂಸಗಳು ಹಾರಿ ಹೋದವು. ನವಿಲುಗಳು ಮರದ ತುದಿಗಳನ್ನು ಏರಿದವು. ಚಕ್ರವಾಕ ಪಕ್ಷಿಗಳು ಕೊಕ್ಕುಗಳನ್ನು ನೀರಲ್ಲಿ ಮೂರಿ ಮುಳುಗಿ ಏಳುತ್ತಿದ್ದವು. ಸರೋವರದ ಪಕ್ಷಿಗಳು ಚೀರಿದವು. ತಾವರೆಯೆಲೆಗಳ ಮರೆಯಲ್ಲಿ ದುಂಬಿಗಳು ಅಡಗಿದವು.

ಅರ್ಥ:
ಹಾರು: ಲಂಘಿಸು; ಹಂಸ: ಮರಾಲ; ತುದಿ: ಅಗ್ರಭಾಗ; ಮರ: ತರು; ಸೇರು: ತಲುಪು, ಮುಟ್ಟು; ನವಿಲು: ಮಯೂರ, ಶಿಖಿ; ತುಂಡ: ಮುಖ, ಆನನ; ಊರು: ನೆಲೆಸು; ನೀರು: ಜಲ; ಮುಳುಗು: ನೀರಿನಲ್ಲಿ ಮೀಯು; ಮರಳು: ಹಿಂದಿರುಗು; ಜಕ್ಕವಕ್ಕಿ: ಎಣೆವಕ್ಕಿ, ಚಕ್ರ ವಾಕ; ಚೀರು: ಜೋರಾಗಿ ಕೂಗು; ಕೊಳ: ಹೊಂಡ, ಸರೋವರ; ದಳ: ಗುಂಪು; ಜಾರು: ಕೆಳಗೆ ಬೀಳು; ತಾವರೆ: ಕಮಲ; ಎಲೆ: ಪರ್ಣ; ಮರೆ: ಗುಟ್ಟು, ರಹಸ್ಯ; ಆರಡಿ: ಆರು ಕಾಲುಗಳುಳ್ಳ ಕೀಟ, ದುಂಬಿ; ಅಡಗು: ಬಚ್ಚಿಟ್ಟುಕೊಳ್ಳು; ಕೋಳಾಹಲ: ಗದ್ದಲ; ಪವನಜ: ಭೀಮ;

ಪದವಿಂಗಡಣೆ:
ಹಾರಿದವು +ಹಂಸೆಗಳು +ತುದಿಮರ
ಸೇರಿದವು +ನವಿಲುಗಳು +ತುಂಡವನ್
ಊರಿ+ ನೀರೊಳು +ಮುಳುಗಿ +ಮರಳ್ದವು+ ಜಕ್ಕವಕ್ಕಿಗಳು
ಚೀರಿದವು +ಕೊಳರ್ವಕ್ಕಿ+ ದಳದಲಿ
ಜಾರಿ +ತಾವರೆ+ಎಲೆಯ +ಮರೆಗಳಲ್
ಆರಡಿಗಳ್+ಅಡಗಿದವು +ಕೋಳಾಹಳಕೆ +ಪವನಜನ

ಅಚ್ಚರಿ:
(೧) ದುಂಬಿಗಳನ್ನು ಚಿತ್ರಿಸಿದ ಪರಿ – ದಳದಲಿಜಾರಿ ತಾವರೆಯೆಲೆಯ ಮರೆಗಳ ಲಾರಡಿಗಳಡಗಿದವು

ಪದ್ಯ ೨೩: ಪಕ್ಷಿಗಳು ಕೃಷ್ಣನನ್ನು ಹೇಗೆ ಸ್ವಾಗತಿಸಿದವು?

ಗಿಳಿಯ ತುಂಬಿಯ ಹಂಸೆಗಳ ಕೋ
ಗಿಲೆಯ ಕೊಳರ್ವಕ್ಕಿಗಳ ಕೊಂಚೆಯ
ಕೊಳಲುವಕ್ಕಿಯ ಜಕ್ಕವಕ್ಕಿಯ ನವಿಲು ಪಾರಿವದ
ಕಲರುಚಿಯ ಕರ್ಣಾಮೃತದ ತನಿ
ವಳೆಯ ಕರೆದುದು ಯಾದವೇಂದ್ರನ
ಬಲದ ಕಿವಿಗಳಲಿಭಪುರಿಯ ಹೊರವಳಯದುದ್ಯಾನ (ಉದ್ಯೋಗ ಪರ್ವ, ೭ ಸಂಧಿ, ೨೩ ಪದ್ಯ)

ತಾತ್ಪರ್ಯ:
ಕೃಷ್ಣನ ಆಗಮನವು ಯಾವ ರೀತಿ ಮನುಷ್ಯರನ್ನು ಪಾವನಗೊಳಿಸಿತೋ ಅದೇ ರೀತಿ ಪಕ್ಷಿಗಳು ಯಾದವೇಂದ್ರನ ಆಗಮನದಿಂದ ಸಂತಸಗೊಂಡು ಇಂಪಾದ ಧ್ವನಿಯಿಂದ ಸ್ವಾಗತಿಸಿದರು. ಗಿಳಿ, ದುಂಬಿ, ಹಂಸ, ಕೋಗಿಲೆ, ಕೊಳರ್ವಕ್ಕಿ, ಕ್ರೌಂಚಪಕ್ಷಿ, ಕೊಳಲುವಕ್ಕಿ, ಜಕ್ಕವಕ್ಕಿ, ನವಿಲು, ಪಾರಿವಾಳ ಹೀಗೆ ಹಲವು ಹಕ್ಕಿಗಳ ನಿನಾದದ ಚೆಲುವು ಹಸ್ತಿನಾಪುರದ ಹೊರವಳಯದಲ್ಲಿ ಕೃಷ್ಣನ ಬಲಕಿವಿಗೆ ಅಮೃತವನ್ನು ಮತ್ತು ಸವಿಯನ್ನು ನೀಡಿದವು.

ಅರ್ಥ:
ಗಿಳಿ: ಶುಕ; ತುಂಬಿ: ದುಂಬಿ; ಹಂಸ: ಬಿಳಿಯ ಬಣ್ಣದ ಪಕ್ಷಿ; ಕೋಗಿಲೆ: ಕೋಕಿಲ, ಪಿಕ; ಕೊಂಚೆ: ಕ್ರೌಂಚಪಕ್ಷಿ; ನವಿಲು: ಮಯ್ಯೂರ; ಪಾರಿವ: ಪಾರಿವಾಳ; ಕಲ: ಮಧುರ ಧ್ವನಿ; ರುಚಿ: ಸವಿ; ಕರ್ಣ: ಕಿವಿ; ಅಮೃತ: ಸುಧೆ; ತನಿ:ಸವಿಯಾದುದು, ಹೊಸತು; ಕರೆ: ಬರೆಮಾಡು; ಇಭಪುರಿ: ಹಸ್ತಿನಾಪುರಿ; ಹೊರವಳಯ: ಹೊರಭಾಗದ; ಉದ್ಯಾನ: ಕೈತೋಟ; ಜಕ್ಕವಕ್ಕಿ: ಚಕ್ರವಾಕ ಪಕ್ಷಿ;

ಪದವಿಂಗಡಣೆ:
ಗಿಳಿಯ +ತುಂಬಿಯ +ಹಂಸೆಗಳ+ ಕೋ
ಗಿಲೆಯ +ಕೊಳರ್ವಕ್ಕಿಗಳ+ ಕೊಂಚೆಯ
ಕೊಳಲುವಕ್ಕಿಯ+ ಜಕ್ಕವಕ್ಕಿಯ+ ನವಿಲು +ಪಾರಿವದ
ಕಲರುಚಿಯ +ಕರ್ಣಾಮೃತದ+ ತನಿ
ವಳೆಯ +ಕರೆದುದು +ಯಾದವೇಂದ್ರನ
ಬಲದ +ಕಿವಿಗಳಲ್+ಇಭಪುರಿಯ +ಹೊರವಳಯದ್+ಉದ್ಯಾನ

ಅಚ್ಚರಿ:
(೧) ಪಕ್ಷಿಗಳ ಹೆಸರನ್ನು ತಿಳಿಸುವ ಪದ್ಯ
(೨) ಪಕ್ಷಿಗಳು ಕೃಷ್ಣನನ್ನು ಕರೆದ ಬಗೆ – ಕಲರುಚಿಯ ಕರ್ಣಾಮೃತದ ತನಿವಳೆಯ ಕರೆದುದು ಯಾದವೇಂದ್ರನ