ಎಲೆ ಕುಮಾರಕ ಹರ ಕುಮಾರಂ
ಗಳವಿಯಲಿ ನಿಲಲರಿದು ಕೊರಳಿನ
ಬಲುಹನರಿಯದೆ ಗಿರಿಯ ಹೊರಲಂಘೈಸುವರೆ ಭಟರು
ಬಲುಗಡಿಯನೀ ಕರ್ಣನೀ ಕೃಪ
ನಲಘು ಭುಜಬಲ ದ್ರೋಣನೀ ವೆ
ಗ್ಗಳ ಜಯದ್ರಥನೆಂದು ಸಾರಥಿ ತೂಗಿದನು ಶಿರವ (ದ್ರೋಣ ಪರ್ವ, ೪ ಸಂಧಿ, ೫೪ ಪದ್ಯ)
ತಾತ್ಪರ್ಯ:
ಅಭಿಮನ್ಯುವಿನ ಸಾರಥಿಯು ಅಭಿಮನ್ಯುವಿಗೆ, ಎಲೈ ಕುಮಾರ, ಈ ಪದ್ಮವ್ಯೂಹವನ್ನೆದುರಿಸಿ ನಿಲ್ಲಲು ಶಿವನ ಕುಮಾರನೂ ದೇವಸೇನಾಪತಿಯೂ ಆದ ಷಣ್ಮುಖನಿಗೂ ಅಸಾಧ್ಯ. ಕೊರಳಿನ ಶಕ್ತಿಯನ್ನರಿಯದೆ ಬೆಟ್ಟವನ್ನು ಯಾರಾದರೂ ಹೊರಬಹುದೇ? ಕರ್ಣನು ಅತಿಶಯವೀರ, ಕೃಪನು ಮಹಾಭುಜಬಲಶಾಲಿ, ದ್ರೋಣನೂ ಜಯದ್ರಥನೂ ಮಹಾಬಲಶಾಲಿಗಳು ಎಂದು ಹೇಳಿದನು.
ಅರ್ಥ:
ಕುಮಾರ: ಮಗ; ಹರ: ಶಿವ; ಹರಕುಮಾರ: ಷಣ್ಮುಖ; ಅಳವು: ಶಕ್ತಿ; ನಿಲು: ಎದುರಿಸು; ಕೊರಳು: ಗಂಟಲು; ಬಲು: ಬಹಳ; ಅರಿ: ತಿಳಿ; ಗಿರಿ: ಬೆಟ್ಟ; ಲಂಘೈಸು: ಹಾರು; ಭಟ: ಪರಾಕ್ರಮಿ; ಬಲುಗಡಿ: ಪರಾಕ್ರಮಿ; ಭುಜಬಲ: ಪರಾಕ್ರಮಿ; ವೆಗ್ಗಳ: ಶ್ರೇಷ್ಠ; ಸಾರಥಿ: ಸೂತ; ತೂಗು: ಅಲ್ಲಾಡಿಸು; ಶಿರ: ತಲೆ;
ಪದವಿಂಗಡಣೆ:
ಎಲೆ +ಕುಮಾರಕ+ ಹರ+ ಕುಮಾರಂಗ್
ಅಳವಿಯಲಿ +ನಿಲಲರಿದು+ ಕೊರಳಿನ
ಬಲುಹನ್+ಅರಿಯದೆ +ಗಿರಿಯ+ ಹೊರಲಂಘೈಸುವರೆ +ಭಟರು
ಬಲುಗಡಿಯನೀ +ಕರ್ಣನೀ +ಕೃಪನ್
ಅಲಘು +ಭುಜಬಲ +ದ್ರೋಣನೀ +ವೆ
ಗ್ಗಳ +ಜಯದ್ರಥನೆಂದು +ಸಾರಥಿ +ತೂಗಿದನು +ಶಿರವ
ಅಚ್ಚರಿ:
(೧) ಪದ್ಮವ್ಯೂಹದ ಕ್ಲಿಷ್ಟತೆ – ಎಲೆ ಕುಮಾರಕ ಹರ ಕುಮಾರಂಗಳವಿಯಲಿ ನಿಲಲರಿದು – ಕುಮಾರ ಪದದ ಬಳಕೆ
(೨) ಉಪಮಾನದ ಪ್ರಯೋಗ – ಕೊರಳಿನ ಬಲುಹನರಿಯದೆ ಗಿರಿಯ ಹೊರಲಂಘೈಸುವರೆ ಭಟರು