ಪದ್ಯ ೬೦: ಅಶ್ವತ್ಥಾಮ ಏನು ಯೋಚಿಸಿ ಹಿಂದಿರುಗಿದನು?

ಇವರು ತಿರುಗಿದರಿನ್ನು ದೈವ
ವ್ಯವಸಿತವೆ ಫಲಿಸುವುದಲಾ ಕೌ
ರವನ ಸಿರಿ ಪಣ್ಯಾಂಗನಾವಿಭ್ರಮವ ವರಿಸಿತಲಾ
ಅವರಿಗಿದನಾರರುಹಿದರೊ ಪಾಂ
ಡವರಿಗಾವುದು ಕೊರತೆ ಪುಣ್ಯ
ಪ್ರವರ ಗದುಗಿನ ವೀರನಾರಾಯಣನ ಕರುಣದಲಿ (ಗದಾ ಪರ್ವ, ೪ ಸಂಧಿ, ೬೦ ಪದ್ಯ)

ತಾತ್ಪರ್ಯ:
ಕೃಪ, ಅಶ್ವತ್ಥಾಮ, ಕೃತವರ್ಮರು, ದೈವ ಸಂಕಲ್ಪದಂತೆಯೇ ನಡೆದೀತು. ಅನ್ಯಥಾ ನಡೆಯಲಾರದು. ಕೌರವನ ಜಯಲಕ್ಷ್ಮಿಯ ವಿಲಾಸವು ವೇಶ್ಯೆಯ ವಿಭ್ರಮವನ್ನು ಸ್ವೀಕರಿಸಿತು. ಪುಞ ಪ್ರವರನಾದ ಗದುಗಿನ ವೀರನಾರಾಯಣನ ಕರುಣೆಯಿರುವುದರಿಂದ ಪಾಂಡವರಿಗೆ ಯಾವ ಕೊರತೆಯುಂಟಾದೀತು? ಎಂದುಕೊಂಡು ದೂರಕ್ಕೆ ಹೋದರು.

ಅರ್ಥ:
ತಿರುಗು: ಮರಳು; ಹಿಂದಿರುಗು; ದೈವ: ಭಗವಂತ; ವ್ಯವಸಿತ: ಸಂಕಲ್ಪ; ಫಲಿಸು: ಹೊರಹೊಮ್ಮು; ಸಿರಿ: ಐಶ್ವರ್ಯ; ಪಣ್ಯ: ಮಾರಾಟ, ವ್ಯಾಪಾರ; ವಿಭ್ರಮ: ಅಲೆದಾಟ, ಸುತ್ತಾಟ; ವರಿಸು: ಕೈಹಿಡಿ; ಅರುಹು: ಹೇಳು; ಕೊರತೆ: ನ್ಯೂನ್ಯತೆ; ಪುಣ್ಯ: ಸದಾಚಾರ; ಪ್ರವರ: ಶ್ರೇಷ್ಠ, ಮೊದಲಿಗ; ಕರುಣ: ದಯೆ;

ಪದವಿಂಗಡಣೆ:
ಇವರು +ತಿರುಗಿದರ್+ಇನ್ನು +ದೈವ
ವ್ಯವಸಿತವೆ +ಫಲಿಸುವುದಲಾ+ ಕೌ
ರವನ+ ಸಿರಿ+ ಪಣ್ಯಾಂಗನಾ+ವಿಭ್ರಮವ +ವರಿಸಿತಲಾ
ಅವರಿಗ್+ಇದನ್+ಆರ್+ಅರುಹಿದರೊ +ಪಾಂ
ಡವರಿಗ್+ಆವುದು +ಕೊರತೆ +ಪುಣ್ಯ
ಪ್ರವರ +ಗದುಗಿನ +ವೀರನಾರಾಯಣನ+ ಕರುಣದಲಿ

ಅಚ್ಚರಿ:
(೧) ರೂಪಕದ ಪ್ರಯೋಗ – ಕೌರವನ ಸಿರಿ ಪಣ್ಯಾಂಗನಾವಿಭ್ರಮವ ವರಿಸಿತಲಾ
(೨) ಪಾಂಡವರ ಶ್ರೇಷ್ಠತೆ – ಪಾಂಡವರಿಗಾವುದು ಕೊರತೆ ಪುಣ್ಯ ಪ್ರವರ ಗದುಗಿನ ವೀರನಾರಾಯಣನ ಕರುಣದಲಿ

ಪದ್ಯ ೩೯: ದುರ್ಯೋಧನನು ತನ್ನನ್ನು ಅರಗೆಲಸಿ ಎಂದೇಕೆ ಹೇಳಿದನು?

ಖರೆಯರೈ ನೀವುಭಯ ರಾಯರ
ಗುರುಗಳದು ಕುಂದಿಲ್ಲ ಕೃಪನೇ
ಹಿರಿಯನಾಚಾರಿಯನು ಯಾದವರೊಳಗೆ ಕೃತವರ್ಮ
ಗರುವರೈ ನೀವಿಲ್ಲಿ ರಣಬಾ
ಹಿರರೆ ಸಾಕಂತಿರಲಿ ಸುಕೃತದೊ
ಳರಗೆಲಸಿಗಳು ನಾವೆ ನಿಮ್ಮಲಿ ಕೊರತೆಯಿಲ್ಲೆಂದ (ಗದಾ ಪರ್ವ, ೪ ಸಂಧಿ, ೩೯ ಪದ್ಯ)

ತಾತ್ಪರ್ಯ:
ದುರ್ಯೋಧನನು ಉತ್ತರಿಸುತ್ತಾ, ನಿಮ್ಮ ಮಾತು ನಿಜ, ನೀವು ಶ್ರೇಷ್ಠರು. ಉಭಯ ರಾಜರ ಗುರುಗಳು, ಕೃಪನು ನಮ್ಮ ಹಿರಿಯಗುರು. ಯಾದವರಲ್ಲಿ ಕೃತವರ್ಮನು ಅಗ್ರಗಣ್ಯ. ನೀವು ಯುದ್ಧದಲ್ಲಿ ಅರ್ಹರಲ್ಲ ಎನ್ನುತ್ತಿಲ್ಲ, ನಾವು ಅರೆ ಬರೆ ಪುಣ್ಯಶಾಲಿಗಳೆಂಬುದೇ ಕೊರತೆ, ನಿಮ್ಮಲ್ಲಿ ಏನೂ ನ್ಯೂನ್ಯತೆಗಳಿಲ್ಲ ಎಂದು ಕೌರವನು ನುಡಿದನು.

ಅರ್ಥ:
ಖರೆ: ನಿಜ; ಉಭಯ: ಎರದು; ರಾಯ: ರಾಜ; ಗುರು: ಆಚಾರ್ಯ; ಕುಂದು: ಕೊರತೆ, ನ್ಯೂನ್ಯತೆ; ಹಿರಿ: ದೊಡ್ಡವ; ಆಚಾರಿ: ಗುರು; ಗರುವ: ಹಿರಿಯ, ಶ್ರೇಷ್ಠ; ರಣ: ಯುದ್ಧ; ಬಾಹಿರ: ಬಹಿಷ್ಕೃತವಾದ, ಹೊರತಾದುದು; ಸಾಕು: ಅಗತ್ಯ ಪೂರೈಸಿತು; ಸುಕೃತ: ಒಳ್ಳೆಯ ಕೆಲಸ; ಅರಗೆಲಸಿ: ಅರೆ ಬರೆ; ಕೊರತೆ: ನ್ಯೂನ್ಯತೆ;

ಪದವಿಂಗಡಣೆ:
ಖರೆಯರೈ +ನೀವ್+ಉಭಯ +ರಾಯರ
ಗುರುಗಳ್+ಅದು +ಕುಂದಿಲ್ಲ +ಕೃಪನೇ
ಹಿರಿಯನ್+ಆಚಾರಿಯನು +ಯಾದವರೊಳಗೆ+ ಕೃತವರ್ಮ
ಗರುವರೈ+ ನೀವಿಲ್ಲಿ+ ರಣ+ಬಾ
ಹಿರರೆ+ ಸಾಕ್+ಅಂತಿರಲಿ +ಸುಕೃತದೊಳ್
ಅರಗೆಲಸಿಗಳು +ನಾವೆ +ನಿಮ್ಮಲಿ +ಕೊರತೆಯಿಲ್ಲೆಂದ

ಅಚ್ಚರಿ:
(೧) ದುರ್ಯೋಧನನು ತನ್ನನ್ನು ನಿಂದಿಸುವ ಪರಿ – ಸುಕೃತದೊಳರಗೆಲಸಿಗಳು ನಾವೆ ನಿಮ್ಮಲಿ ಕೊರತೆಯಿಲ್ಲೆಂದ

ಪದ್ಯ ೧೪: ಯಾವ ಕಾರಣಗಳನ್ನು ಧೃತರಾಷ್ಟ್ರ ಹುಡುಕುತಿದ್ದನು?

ಸರಳ ಕೊರತೆಯೊ ಸಾರಥಿಯ ಮ
ತ್ಸರವೊ ರಥದ ವಿಘಾತಿಯೋ ದು
ರ್ಧರ ಧನುರ್ಭಂಗವೊ ಮಹಾಸ್ತ್ರವ್ಯಥೆಯೊ ರವಿಸುತನ
ಹುರುಳುಗೆಡಿಸಿದರೆಂತು ರಿಪು ರಾ
ಯರಿಗೆ ನಾವ್ ಗೋಚರವೆ ದುರಿತೋ
ತ್ಕರುಷವೈಸಲೆ ನಮ್ಮ ಕೆಡಿಸಿತು ಶಿವಶಿವಾ ಎಂದ (ಕರ್ಣ ಪರ್ವ, ೧ ಸಂಧಿ, ೧೪ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ತನ್ನ ಮಾತುಗಳನ್ನು ಮುಂದುವರೆಸುತ್ತಾ, ಏಕೆ ಹೀಗಾಯಿತು ನಮಗೆ, ಬಾಣಗಳ ಕೊರತೆಯೇ, ಸಾರಥಿಯ ಮತ್ಸವಏ, ರಥಕ್ಕೆ ಹೊಡೆತ ಬಿದ್ದು ಹಾಳಾಯಿತೇ? ಧನುಸ್ಸು ಮುರಿಯಿತೇ? ಮಹಾಸ್ತ್ರದ ವ್ಯಥೆಯೇ? ಕರ್ಣನನ್ನು ಹೇಗೆ ಕೊಂದರು? ಶತ್ರುಗಳಿಗೆ ನಮ್ಮನ್ನು ಕೊಲ್ಲುವ ಶಕ್ತಿ ಎಲ್ಲಿಂದ ಬರಬೇಕು? ನಮ್ಮ ಪಾಪ ಕರ್ಮಗಳಿಂದಾದ ಕಷ್ಟವೇ ನಮ್ಮನ್ನು ಕೆಡಿಸಿತು ಅಯ್ಯೋ ದೇವರೆ ಶಿವ ಶಿವಾ ಎಂದು ದುಃಖಿಸಿದನು ಧೃತರಾಷ್ಟ್ರ.

ಅರ್ಥ:
ಸರಳ: ಬಾಣ; ಕೊರತೆ: ನ್ಯೂನತೆ; ಸಾರಥಿ: ರಥ ಓಡಿಸುವವ; ಮತ್ಸರ: ಹೊಟ್ಟೆಕಿಚ್ಚು; ರಥ: ಬಂಡಿ; ವಿಘಾತಿ: ಹಾಳು; ದುರ್ಧರ: ಕಠಿಣವಾದ; ಧನುರ್ಭಂಗ: ಬಿಲ್ಲು ಮುರಿದ ಸ್ಥಿತಿ; ಅಸ್ತ್ರ: ಶಸ್ತ್ರ; ವ್ಯಥೆ: ದುಃಖ; ರವಿ: ಭಾನು; ಸುತ; ಮಗ; ಹುರುಳು: ಸತ್ವ, ಸಾಮರ್ಥ್ಯ; ಕೆಡಿಸು: ಹಾಳುಮಾಡು; ರಿಪು: ವೈರಿ; ರಾಯ: ರಾಜ; ಗೋಚರ: ಕಾಣಿಸು; ದುರಿತ: ದುಃಖ, ಕಷ್ಟ; ಉತ್ಕರ್ಷ: ಹೆಚ್ಚಳ; ಕೆಡಿಸು: ಹಾಳು; ಐಸಲೇ: ಅಲ್ಲವೇ;

ಪದವಿಂಗಡಣೆ:
ಸರಳ +ಕೊರತೆಯೊ+ ಸಾರಥಿಯ +ಮ
ತ್ಸರವೊ +ರಥದ +ವಿಘಾತಿಯೋ +ದು
ರ್ಧರ +ಧನುರ್ಭಂಗವೊ +ಮಹಾಸ್ತ್ರ+ವ್ಯಥೆಯೊ +ರವಿಸುತನ
ಹುರುಳು+ ಕೆಡಿಸಿದರೆಂತು +ರಿಪು +ರಾ
ಯರಿಗೆ+ ನಾವ್ +ಗೋಚರವೆ +ದುರಿತ
ಉತ್ಕರುಷವ್+ಐಸಲೆ +ನಮ್ಮ +ಕೆಡಿಸಿತು+ ಶಿವಶಿವಾ +ಎಂದ

ಅಚ್ಚರಿ:
(೧) ಕರ್ಣನನ್ನು ರವಿಸುತ ಎಂದು ಕರೆದಿರುವುದು
(೨) ಆಡು ಭಾಷೆಯ ಪದ ಪ್ರಯೋಗ – ಶಿವ ಶಿವಾ
(೩) ಕೊರತೆ, ಮತ್ಸರ, ವಿಘಾತಿ, ಭಂಗ, ವ್ಯಥೆ – ಪದಪ್ರಯೋಗಗಳು